ಉಪೇಂದ್ರ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಸಂಸದ ಶ್ರೀರಾಮುಲು
ಮೈಸೂರು, ಮಾರ್ಚ್ 6 : ಕೆಪಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆ ಪಕ್ಷಕ್ಕೆ ರಾಜಿನಾಮೆ ನೀಡಿರುವ ಉಪೇಂದ್ರ ಅವರಿಗೆ ಬಿಜೆಪಿಯಿಂದ ಆಹ್ವಾನ ದೊರೆತಿದೆ. ಉಪೇಂದ್ರ ಪಕ್ಷಕ್ಕೆ ಸೇರುವುದಾದರೆ ಸ್ವಾಗತ ಇದೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮತ್ತು ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನಟ ಉಪೇಂದ್ರ ಕೆಪಿಜೆಪಿ ತೊರೆದಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಸದ ಶ್ರೀರಾಮುಲು, 'ನಟ ಉಪೇಂದ್ರ ಬಿಜೆಪಿ ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತವಿದೆ' ಎಂದಿದ್ದಾರೆ.
ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ
ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿ ಸಮಾಜದ ಬಗ್ಗೆಯೂ ಕಾಳಜಿ ಹೊಂದಿರುವ ಉಪೇಂದ್ರ ಅಂತಹವರು ಪಕ್ಷಕ್ಕೆ ಬರಲಿ. ಸಮಾಜದ ಬಗ್ಗೆ ಒಳ್ಳೆಯ ಕಳಕಳಿ ಇರುವ ಪಕ್ಷಕ್ಕೆ ಬಂದರೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಆದರೆ ರುಪ್ಪಿಸ್ನಲ್ಲಿ ಸುದ್ದಿಗೋಷ್ಠಿ ಕರೆದಿರುವ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದು, ಬೇರೆ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಗ್ಗೆಯೂ ಮಾತನಾಡಿದ ಅವರು 'ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಸಂಘಟನೆಯಲ್ಲಿ ಜನಾರ್ಧನ ರೆಡ್ಡಿ ಅವರು ತೊಡಗಿಸಿಕೊಳ್ಳಲಿದ್ದಾರೆ. ಬಳ್ಳಾರಿಗೆ ಹೋಗದಂತೆ ಕೋರ್ಟ್ ನಿರ್ದೇಶನವಿರುವ ಕಾರಣ ಅವರು ಅಲ್ಲಿ ಹೋಗುವುದಿಲ್ಲ, ಬದಲಿಗೆ ಬೇರೆ ಕಡೆ ಪಕ್ಷದ ಸಂಘಟನೆ ಮಾಡಲಿದ್ದಾರೆ' ಎಂದರು.