ಮೈಸೂರು ಶೂಟೌಟ್ ಪ್ರಕರಣ: ಮೃತನ ಕುಟುಂಬಕ್ಕೆ 1 ಲಕ್ಷ ರೂ. ನೆರವು ನೀಡಿದ ಪೊಲೀಸರು
ಮೈಸೂರು, ಸೆಪ್ಟೆಂಬರ್ 23: ಮೈಸೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಭೇದಿಸಿದ ಪೊಲೀಸರಿಗೆ ಐದು ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದ ದಡದಹಳ್ಳಿ ಯುವಕನ ಕುಟುಂಬಕ್ಕೆ ಬಹುಮಾನದ ಹಣದಲ್ಲಿ ಒಂದು ಲಕ್ಷ ರೂ. ನೆರವು ನೀಡಿ ಮೈಸೂರಿನ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಶೂಟೌಟ್ ನಡೆದಿತ್ತು. ಈ ವೇಳೆ ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ಯುವಕ ಚಂದ್ರು ಬಲಿಯಾಗಿದ್ದ. ಪೊಲೀಸರು ಶೀಘ್ರವಾಗಿ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದೀಗ ಬಹುಮಾನದ ಹಣದಲ್ಲಿ ಚಂದ್ರು ಕುಟುಂಬಕ್ಕೆ ಪೊಲೀಸರು ಒಂದು ಲಕ್ಷ ರೂ. ನೆರವು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಗದು ಹಸ್ತಾಂತರ ಮಾಡಿದರು. ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಉಪಸ್ಥಿತರಿದ್ದರು.
Breaking; ಮೈಸೂರು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಬಾಂಬ್ ಬೆದರಿಕೆ ಕರೆ
ಶೂಟೌಟ್ಗೆ ಬಲಿಯಾಗಿದ್ದ ಯುವಕ ಚಂದ್ರು
ಇನ್ನು ಕಳೆದ ತಿಂಗಳು ವಿದ್ಯಾರಣ್ಯಪುರಂನಲ್ಲಿ ಸಂಭವಿಸಿದ್ದ ಶೂಟೌಟ್ನಲ್ಲಿ ಅಮಾಯಕ ಚಂದ್ರು ಮೃತಪಟ್ಟಿದ್ದ, ದುಷ್ಕರ್ಮಿಗಳು ಹಾರಿಸಿದ್ದ ಗುಂಡು ಚಂದ್ರು ಎದೆಗೆ ತಗುಲಿತ್ತು. ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ ಆಗಿತ್ತು. ಚಂದ್ರು ಸಾವು ಕಂಡು ಅನೇಕರು ಮರುಗಿದ್ದರು. ಇದನ್ನು ಮನಗಂಡ ಪೊಲೀಸರು ಬಹುಮಾನದ ಮೊತ್ತದಲ್ಲಿ 1 ಲಕ್ಷ ನೀಡಿದ್ದಾರೆ.
"ಮೈಸೂರಿನ ಚಿನ್ನಾಭರಣ ಮಳಿಗೆಯಲ್ಲಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸಾಕಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿಯನ್ನು ಬಂಧಿಸಿದ ನಂತರವಷ್ಟೇ ಇದುವರೆಗೆ ವಶಪಡಿಸಿಕೊಂಡಿರುವ ಚಿನ್ನಾಭರಣದ ಕುರಿತು ಮಾಹಿತಿ ನೀಡಲಾಗುವುದು. ತನಿಖೆ ಪ್ರಗತಿಯಲ್ಲಿರುವುದರಿಂದ ಈಗಲೇ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ," ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
ದಸರಾ ಹಿನ್ನೆಲೆ ಮೈಸೂರಿನಲ್ಲಿ ಪೊಲೀಸ್ ಭದ್ರತೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ, ಮೈಸೂರು ನಗರದಾದ್ಯಂತ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು. ಮೈಸೂರಿನಲ್ಲಿ ಗುರುವಾರ ಮಾತನಾಡಿದ ಅವರು, "ಮೈಸೂರು ದಸರಾ ಸಮೀಪಿಸುತ್ತಿದ್ದು, ಸಾರ್ವಜನಿಕರು ಅನಾಮಧೇಯ ವ್ಯಕ್ತಿಗಳು, ವಸ್ತುಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಮನೆಗಳ ಮಾಲೀಕರು ಮನೆಗಳನ್ನು ಬಾಡಿಗೆ ನೀಡುವ ಮುನ್ನ ಬಾಡಿಗೆದಾರರ ಪೂರ್ವಾಪರಗಳನ್ನು ವಿಚಾರಿಸಬೇಕು," ಎಂದು ತಿಳಿಸಿದರು.
"ಮೈಸೂರಿನ ವಾಣಿಜ್ಯ ತೆರಿಗೆ ಭವನಕ್ಕೆ ಬಾಂಬ್ ಬೆದರಿಕೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಟ್ಟಡ ಪರಿಶೀಲನೆ ವೇಳೆ ಯಾವುದೇ ರೀತಿಯ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಆದರೂ ಯಾರಿಂದ ಈ ರೀತಿ ಬೆದರಿಕೆ ಬಂದಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ," ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು.ಎಲ್ಲೆಡೆ ಹೈ ಅಲರ್ಟ್
"ಕಳೆದ ತಿಂಗಳು ಮೈಸೂರಿನಲ್ಲಿ ಸಂಭವಿಸಿದ ಪ್ರಕರಣಗಳು ಇಡೀ ದೇಶಾದ್ಯಂತ ಸಾಕಷ್ಟು ಸಂಚಲನ ಮೂಡಿಸಿತ್ತು. ಮೈಸೂರು ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಹಲವಾರು ಚರ್ಚೆಗಳು ಆರಂಭ ಆಗಿದ್ದವು. ಇದೀಗ ಮೈಸೂರು ಪೊಲೀಸರು ಸಾಕಷ್ಟು ಎಚ್ಚೆತ್ತಿದ್ದು, ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದಾರೆ. ಗಸ್ತುಗಳನ್ನು ಹೆಚ್ಚು ಮಾಡಿದ್ದು, ದಸರಾ ಕೂಡ ಬಂದಿರುವುದರಿಂದ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ."
ಸಾರ್ವಜನಿಕ ಸಹಕಾರ ಅಗತ್ಯ
"ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಅಪರಾಧ ಚಟುವಟಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲರೂ ಸೇರಿ ಅಪರಾಧ ಚಟುವಟಿಕೆ ತಡೆಗಟ್ಟಬೇಕಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದರು. ಯಾವುದೇ ವ್ಯಕ್ತಿ ಮೇಲೆ ಅನುಮಾನ ಬಂದಾಕ್ಷಣ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು," ಅಂತ ಹೇಳಿದರು.