21 ವರ್ಷದಿಂದಲೂ ರಕ್ತದಾನ; ಸುತ್ತೂರು ಜಾತ್ರೆಯಲ್ಲಿ ಗಮನ ಸೆಳೆದ ವ್ಯಕ್ತಿ
ಮೈಸೂರು, ಜನವರಿ 25: ಸುತ್ತೂರಿನಲ್ಲಿ ಈಗ ಜಾತ್ರೆ ಸಂಭ್ರಮ. ಹತ್ತಾರು ಕಡೆಗಳಿಂದ ಜಾತ್ರೆ ಕಣ್ತುಂಬಿಕೊಳ್ಳಲೆಂದೇ ಬಂದವರಿಗೆ ನಿನ್ನ ಮತ್ತೊಂದು ಆಕರ್ಷಣೆ ಎದುರಾಗಿತ್ತು. "ರಕ್ತದಾನ ಜೀವದಾನ" ಎಂಬುದನ್ನು ಸಾರಲು ದೇಹದ ಮೇಲೆ ಭಿನ್ನವಾಗಿ ಪೇಂಟಿಂಗ್ ಮಾಡಿಕೊಂಡಿದ್ದ ವ್ಯಕ್ತಿ ಜಾತ್ರೆಯ ಆಕರ್ಷಣೆಗಳಲ್ಲಿ ಒಂದಾಗಿದ್ದರು.
ಮುಖದಲ್ಲಿ ರಾಷ್ಟ್ರಧ್ವಜವನ್ನು ಚಿತ್ರಿಸಿಕೊಂಡು, ದೇಹದ ಮೇಲೆ ಹೃದಯ ಹಾಗೂ ರಕ್ತನಾಳಗಳ ಚಿತ್ರ ಬಿಡಿಸಿಕೊಂಡಿದ್ದರು. ಮೈ ಮೇಲೆಲ್ಲ 'ರಕ್ತದಾನ ಜೀವದಾನ' ಎಂದು ಬರೆಸಿಕೊಂಡಿದ್ದ ವ್ಯಕ್ತಿ ನಿನ್ನೆ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು. ಸಮಾಜ ಸೇವಕ, 50 ವರ್ಷದ ಶಿವಕುಮಾರ್ ಎಂಬವರು ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಪರಿ ಇದಾಗಿತ್ತು.
ವೈಭವದ ಸುತ್ತೂರು ಶಿವರಾತ್ರೀಶ್ವರ ಜಾತ್ರೆಯೊಳಗೊಂದು ಸುತ್ತು...
ಮೂಲತಃ ದಾವಣಗೆರೆಯವರಾದ ಮಹಡಿಮನೆ ಶಿವಕುಮಾರ್ ರಕ್ತದಾನದ ಮಹತ್ವವನ್ನು ಸಾರಿದ್ದು ವಿಭಿನ್ನವಾಗಿತ್ತು. ಈ ಬಗ್ಗೆ ಮಾತನಾಡಿದ ಅವರು, "ರಕ್ತದಾನ ಶ್ರೇಷ್ಠ ದಾನ. ಆದರೆ ಹೆಚ್ಚಿನ ಜನರು ರಕ್ತದಾನಕ್ಕೆ ಮುಂದಾಗುವುದಿಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಕಳೆದ 21 ವರ್ಷಗಳಿಂದಲೂ ರಕ್ತದಾನ ಮಾಡುತ್ತಿದ್ದೇನೆ. 70ಕ್ಕೂ ಹೆಚ್ಚು ಬಾರಿ ನಾನು ರಕ್ತ ಕೊಟ್ಟಿದ್ದೇನೆ. ನನ್ನ ಆರೋಗ್ಯ ವೃದ್ಧಿಸಿದೆಯೇ ಹೊರತು ಅನಾರೋಗ್ಯ ಉಂಟಾಗಿಲ್ಲ. ರಕ್ತದಾನದಿಂದ ಯಾವುದೇ ತೊಂದರೆ ಉಂಟಾಗದು" ಎಂದರು.
'ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದು ನನ್ನ ಉದ್ದೇಶ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಪರ್ಯಟನೆ ಮಾಡುವ ಗುರಿಯೂ ಇದೆ' ವಿಶ್ವಪರ್ಯಟನೆ ಮಾಡಲು ವಾಹನ ಬೇಕಾಗಿದೆ. ಸರ್ಕಾರ ಓಡಾಡಲು ಒಂದು ವಾಹನ, ಒಂದು ಲ್ಯಾಪ್ ಟಾಪ್ ಕೊಟ್ಟರೆ ಅನುಕೂಲವಾಗಲಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.