ರೋಹಿಣಿ ಸಿಂಧೂರಿ v/s ಶಿಲ್ಪಾನಾಗ್; ದಿನದ ಪ್ರಮುಖ ಬೆಳವಣಿಗೆಗಳು
ಮೈಸೂರು, ಜೂನ್ 04; ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ನಡುವೆ ಸ್ಪೋಟಗೊಂಡಿದ್ದ ವೈಷಮ್ಯ ಶುಕ್ರವಾರ ಮತ್ತಷ್ಟು ತೀವ್ರಗೊಂಡಿತು. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ನಡುವಿನ ಪೈಪೋಟಿಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ದಿನವಿಡಿ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
Recommended Video
ಒಂದೆಡೆ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ಶುಕ್ರವಾರ ಮೈಸೂರು ನಾಗರೀಕ ವೇದಿಕೆ ಆಯೋಜಿಸಿದ್ದ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳ ಹೆಸರು ಹೇಳದೇ ಒಬ್ಬರ ಅಹಕಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ ಎಂದು ಕಿಡಿಕಾರಿದರೆ, ಮತ್ತೊಂದೆಡೆ ಮಾಧ್ಯಮಗಳ ಬಲವಂತಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಲ್ಲ ವಿಚಾರಗಳನ್ನು ಕೂಲಂಕಶವಾಗಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ ಎಂದಷ್ಟೇ ಹೇಳಿದರು.
ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಶಿಲ್ಪಾನಾಗ್ ಅಸಮಾಧಾನ!
ಈ ಮೂಲಕ ಇಬ್ಬರು ಮಹಿಳಾಧಿಕಾರಿಗಳ ನಡುವಿನ ಸಮರ ಮುಂದುವರೆದಿದೆ. ಮತ್ತೊಂದೆಡೆ ಇಬ್ಬರ ನಡುವಿನ ಗುದ್ದಾಟಕ್ಕೆ ತೀಲಾಂಜಲಿ ಇಡಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿರುವುದರ ನಡುವೆಯೇ ಶಿಲ್ಪಾನಾಗ್ ಪರ ನಗರಪಾಲಿಕೆ ಮುಂಭಾಗ ನಗರಪಾಲಿಕೆ ಸದಸ್ಯರು ಹಾಗೂ ಸ್ವಚ್ಛತಾ ಕಾರ್ಯ ಕೈಬಿಟ್ಟು ಪೌರಕಾರ್ಮಿಕರು ಪ್ರತಿಭಟನೆ ಮಾಡಿದರು. ಮಾತ್ರವಲ್ಲ, ಶಿಲ್ಪಾನಾಗ್ ಪರವಾಗಿ ಮೈಸೂರು ಜಿಲ್ಲೆಯದ್ಯಂತ ದೊಡ್ಡಮಟ್ಟದ ಅಲೆ ಎದ್ದಿದೆ.
ರೋಹಿಣಿ ಸಿಂಧೂರಿಗೆ ಅಧಿಕ ಪ್ರಸಂಗಿ ಎಂದ ಶಾಸಕ ಎನ್.ಮಹೇಶ್
ಎರಡು ದಿನ ಕಾದು ನೋಡಿ: ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಗಳ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಪ್ರತಿಕ್ರಿಯಿಸಿದ್ದು, "ಏನಾಗಲಿದೆ ಎಂಬುದರ ಬಗ್ಗೆ ಇನ್ನು ಎರಡು ದಿನ ಕಾದು ನೋಡಿ. ಜಿಲ್ಲಾಡಳಿತದ ಸಂಘರ್ಷ ನನ್ನ ಕೈಮೀರಿದೆ. ಅಧಿಕಾರಿಗಳ ಸಂಘರ್ಷ ನನ್ನ ವ್ಯಾಪ್ತಿಯಲ್ಲಿ ಉಳಿದಿಲ್ಲ. ಸಿಎಂಗೆ ಎಲ್ಲವನ್ನು ತಿಳಿಸಿದ್ದೇನೆ. ಕೋವಿಡ್ ನಿಯಂತ್ರಣ ಮಾಡೋದು ನನ್ನ ಆದ್ಯತೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಯಾರು ಸರಿ ಯಾರು ತಪ್ಪು ಅಂತ ಹೇಳಲ್ಲ. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ" ಎಂದು ಹೇಳಿದರು.
ಮೈಸೂರು: ಶಿಲ್ಪಾನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯೆ
"ಕೋವಿಡ್ ನಿಯಂತ್ರಣ ಮಾಡೋದು ನನ್ನ ಆದ್ಯತೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಮೈಸೂರು ಸಾಂಸ್ಕೃತಿಕ ನಗರ, ಕಳೆದ ಒಂದು ವರ್ಷದಿಂದ ಕೋವಿಡ್ನಿಂದ ನರಳುತ್ತಿದೆ. ಬೆಂಗಳೂರು ಹೊರತುಪಡಿಸಿ ಮೈಸೂರಲ್ಲಿ ಅತಿ ಹೆಚ್ಚು ಕೋವಿಡ್ ಇದೆ. ಮೈಸೂರಿನ ಜನರ ಹಿತದೃಷ್ಟಿಯಿಂದ ಕೋವಿಡ್ ಹೇಗೆ ನಿಯಂತ್ರಣಕ್ಕೆ ತರಬಹುದೆಂಬ ಚಿಂತನೆಯನ್ನು ಹೊರತುಪಡಿಸಿದರೆ ಬೇರಾವುದೇ ಮಾತನಾಡುವುದಿಲ್ಲ" ಎಂದರು.
ಈಜುಕೊಳ ನಿರ್ಮಾಣ ವಿವಾದ; ರೋಹಿಣಿ ಸಿಂಧೂರಿಗೆ ಹೊಸ ಸಂಕಷ್ಟ
"ಒಳ್ಳೆಯ ಕೆಲಸ ಮಾಡಿದರೂ ಕೂಡ ನನ್ನ ಮನಸ್ಸಿಗೆ ನೋವಾಗಿದೆ. ಮೈಸೂರಿನಲ್ಲಿ ಕೊರೋನಾ ಕಡಿಮೆ ಮಾಡುವುದಕ್ಕೆ ಎಲ್ಲರ ಅಭಿಪ್ರಾಯ ಪಡೆದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಅದಕ್ಕೂ ತೊಂದರೆಯಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಮಾತ್ರ, ವಿನಃ ಬೇರೆ ಸಣ್ಣಪುಟ್ಟದ್ದಕ್ಕೆ ಗಮನ ಕೊಡುವಷ್ಟು ವ್ಯವಧಾನ ಇಲ್ಲ. ಮೈಸೂರಿನ ಜನತೆ ಗೌರವಯುತವಾಗಿ ಇದ್ದಾರೆ. ಗೌರವದ ವಿರುದ್ಧ ನಾನು ಹೋಗಲ್ಲ, ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಅಧಿಕಾರಿಗಳ ವಿಷಯ ಉಸ್ತುವಾರಿ ಸಚಿವರಿಗೂ ಮೀರಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ. ಸರಿಪಡಿಸುವುದಾಗಿ ಹೇಳಿದ್ದಾರೆ" ಸ್ಪಷ್ಟಪಡಿಸಿದರು.
ಸಿಎಸ್ ಜೊತೆ ವಿಚಾರ ಹಂಚಿಕೆ; ಶಿಲ್ಪಾನಾಗ್ ಮಾಡಿರುವ ಕಿರುಕುಳದ ಆರೋಪದ ಬಗ್ಗೆ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, "ಒಟ್ಟಾರೆ ವಿಚಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ಗೆ ವಿವರಿಸುತ್ತೇನೆ. ಕೋವಿಡ್ ಸಂದರ್ಭ ಹಿನ್ನೆಲೆ ಎಲ್ಲರ ಸಹಕಾರ ಬೇಕಾಗುತ್ತದೆ. ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡುತ್ತಿದ್ದೇವೆ. ಕೊರೊನಾ ವಿಚಾರದಲ್ಲಿ ಅಂಕಿಅಂಶ ತಪ್ಪಾಗಬಾರದು. ವಾರ್ಡ್ ಪಂಚಾಯಿತಿಗಳಲ್ಲಿ ಇವತ್ತು 40, ನಾಳೆ 400 ಬರಬಾರದು" ಎಂದು ರೋಹಿಣಿ ಸಿಂಧೂರಿ ಹೇಳಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಎಡವಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಜಯರಾಮ್ ಕೆಲ ಗಂಭೀರ ಆಕ್ಷೇಪ ಎತ್ತಿದ್ದು, ಜಿಲ್ಲಾಧಿಕಾರಿಗೆ ಅಗತ್ಯ ನಿರ್ದೇಶನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಅವರವರ ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಆದರೆ ಅವರು ಕ್ವಾರಂಟೈನ್ ನಿಬಂಧನೆಗಳನ್ನು ಅನುಸರಿಸುತ್ತಿಲ್ಲವಾದ್ದರಿಂದ ಸೋಂಕು ಇತರರಿಗೆ ತಗುಲದಂತೆ ನೋಡಿಕೊಳ್ಳಲು ಇಂತವರನ್ನು ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಈ ನಿಟ್ಟಿನಲ್ಲಿ ಹೋಬಳಿ/ಪಂಚಾಯಿತಿ ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯುವಂತೆ ನನ್ನ ಹಿಂದಿನ ಭೇಟಿಯ ಸಂದರ್ಭ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೆ. ಆದರೆ ಪ್ರತಿ ಹೋಬಳಿಗೆ ಒಂದರಂತೆ ಎಲ್ಲ ತಾಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿಲ್ಲ. ಪ್ರಾರಂಭ ಮಾಡಿರುವ 4 ಕೇಂದ್ರಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ಈ ಪೈಕಿ 2 ಕೇಂದ್ರಗಳ ವ್ಯವಸ್ಥೆ ತೀರಾ ಕಳಪೆಯಾಗಿದ್ದು, ಕೂಡಲೇ ಸರಿ ಪಡಿಸಬೇಕು ಎಂದು ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಪ್ರತಿನಿತ್ಯ 3ರಿಂದ 4 ಗಂಟೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಹಲವು ಅಧಿಕಾರಿಗಳೊಂದಿಗೆ ಕೋವಿಡ್ಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ಖುದ್ದಾಗಿ ಭಾಗವಹಿಸಲು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಜಿಲ್ಲೆಯ ಬಹತೇಕ ಅಧಿಕಾರಿಗಳು ಅರ್ಧ ದಿವಸ ಕೆಲಸ ಉಳಿದ ಅರ್ಧ ದಿವಸ ಸಭೆಯಲ್ಲಿ ಕಳೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಮಾಡುವುದರಿಂದ ಉಳಿದೆಲ್ಲ ಅಧಿಕಾರಿಗಳು ಸಹ ಹೆಚ್ಚು ಕಾರ್ಯನಿರತರಾಗಲು ಇದು ಪೂರಕವಾಗಬಲ್ಲದು. ಆದ್ದರಿಂದ ಜಿಲ್ಲಾಧಿಕಾರಿ ಸಭೆಗಳನ್ನು ಕಡಿಮೆ ಮಾಡಿ ವಾಸ್ತವ ಸಂಗತಿ ತಿಳಿದು ಉಪಯುಕ್ತ ಕೆಲಸಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ರಾಜೀನಾಮೆ ಒಪ್ಪಬಾರದು; "ಶಿಲ್ಪಾನಾಗ್ ರಾಜೀನಾಮೆಯನ್ನು ಒಪ್ಪಬಾರದೆಂದು ಮುಖ್ಯಮಂತ್ರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಮಾಡಲಾಗಿದೆ" ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
"ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ರಾಜೀನಾಮೆಯನ್ನು ಒಪ್ಪಿಕೊಂಡರೆ ಅವರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಒಳ್ಳೆಯ ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು. ಅವರು ಮನನೊಂದು ರಾಜೀನಾಮೆ ನೀಡಿದ್ದು, ಅದನ್ನು ಸ್ವೀಕರಿಸಬಾರದು ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ" ಎಂದರು.
"ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾನಾಗ್ಗೆ ಪಾಲಿಕೆಯ ಕೆಲಸ ಮಾಡಲು ಸೂಚಿಸಲಾಗಿದ್ದು, 2 ದಿನಗಳ ನಂತರ ಇದರ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ" ಎಂದು ಸಚಿವರು ಹೇಳಿದರು.
ಗೌಪ್ಯ ಮಾತುಕತೆ; ಈ ನಡುವೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಮೈಸೂರು ನಾಗರಿಕ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಕಾರ್ಯಕ್ರಮದ ಬಳಿಕ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಕೆಲ ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿದರು.
ಜಿಲ್ಲಾಧಿಕಾರಿ ಗೈರು; ಮೈಸೂರು ನಾಗರಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಸುತ್ತೂರು ಮಠದಲ್ಲಿ ಆಯೋಜಿಸಲಾಗಿದ್ದ ಆಹಾರ ಪದಾರ್ಥಗಳ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.