ಸಿದ್ದರಾಮಯ್ಯ ಮಾತ್ರ ಕುರುಬರೇ ನಾನು ಕುರುಬನಲ್ಲವೇ?: ವಿಶ್ವನಾಥ್
ಮೈಸೂರು, ಜೂನ್ 30 : ಸ್ವಾಮೀಜಿಗಳ ವಿರುದ್ಧ ಗರಂ ಆಗಿರುವ ಶಾಸಕ ಎ.ಎಚ್.ವಿಶ್ವನಾಥ್ ಅವರು, ಯಾವುದೇ ಸ್ವಾಮೀಜಿಗಳು, ಸಂಘಟನೆಗಳು ರಾಜಕೀಯ ಹಾಗೂ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸಬಾರದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಮಠಗಳ ಮಠಾಧೀಶರು ತಮ್ಮ ಜಾತಿಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪರವಾಗಿ ಬಹಿರಂಗವಾಗಿ ಮಾತನಾಡುವುದು ಮತ್ತು ಇತರರನ್ನು ಬಹಿರಂಗವಾಗಿ ವಿರೋಧಿಸುತ್ತಿರುವುದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದರು.
ನನ್ನನ್ನು ಸಿದ್ದರಾಮಯ್ಯ ತುಳಿದಾಗ ಕುರುಬ ಸಂಘಟನೆಗಳು, ಸ್ವಾಮೀಜಿಗಳು ಎಲ್ಲಿ ಹೋಗಿದ್ದರು? ಕುರುಬರಿಗೆ ಮಠ ಕಟ್ಟಿಕೊಟ್ಟೋರು ಯಾರು, ಸ್ವಾಮೀಜಿ ಮಾಡಿದವರು ಯಾರು? ಎಂದು ಪ್ರಶ್ನಿಸಿದರು. ಅಲ್ಲದೆ ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಅಧಿಕಾರಿಗಳನ್ನು ಬದಲಾವಣೆ ಮಾಡುವುದು ಸಹಜ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕುರುಬ ಸಮಾಜದ ಅಧಿಕಾರಿಗಳಿಗೆ ಅನುಕೂಲವಾಗಿತ್ತೆ? ಎಂದು ಪ್ರಶ್ನಿಸಿದರು.
ಶಾಂತಿವನದಿಂದ ಹೊಸ ಉತ್ಸಾಹದಲ್ಲಿ ರಾಜಕೀಯ ಅಖಾಡಕ್ಕಿಳಿದ ಸಿದ್ದರಾಮಯ್ಯ
ಕಾಂಗ್ರೆಸ್ನಲ್ಲಿ ಕುರುಬ ಸಮಾಜದ ಒಬ್ಬ ಶಾಸಕರಿಗೂ ಮಂತ್ರಿ ಸ್ಥಾನ ನೀಡಲಿಲ್ಲ. ಇದನ್ನೇಕೆ ಪ್ರಶ್ನಿಸಲಿಲ್ಲ? ನನ್ನನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯ ಹೊರಟಾಗ ರಾಜ್ಯ ಕುರುಬರ ಸಂಘ ಏಕೆ ಸುಮ್ಮನಿತ್ತು? ಕುರುಬರಿಗೆ ಮಠ ಕಟ್ಟಿದವರು ಯಾರು? ಕುರುಬರ ಮಠಕ್ಕೆ ಸ್ವಾಮೀಜಿ ಮಾಡಿದವರು ಯಾರು? ಹಾಗಾದರೆ ನಾನು ಸಿದ್ದರಾಮಯ್ಯ ಅಣ್ಣ-ತಮ್ಮ ಅಲ್ವ... ಆಗ ನೀವೆಲ್ಲ ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು.
ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆ ನಿಲ್ಲಿಸುವಂತೆ ಒತ್ತಾಯ
ಸ್ವಾಮೀಜಿಗಳು ತಮ್ಮ ಜಾತಿಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪರವಾಗಿ ಮಾತನಾಡುತ್ತಿರುವುದು ಜಾತಿ ಜಾತಿಗಳ ನಡುವೆ ಎತ್ತಿಕಟ್ಟುವ ವಿಚಾರವಾಗಿ ಮಾರ್ಪಡುತ್ತಿದೆ. ಒಬ್ಬರು ಕುಮಾರಸ್ವಾಮಿ ಪರ, ಇನ್ನೊಬ್ಬರು ಸಿದ್ದರಾಮಯ್ಯನವರ ಪರ, ಮತ್ತೊಬ್ಬರು ಯಡಿಯೂರಪ್ಪನವರ ಪರ ಮಾತನಾಡುತ್ತಾರೆ. ಇದು ಸಾಮಾನ್ಯ ಜನರಲ್ಲಿ ಪರಸ್ಪರ ಜಾತಿಗಳಲ್ಲಿ ಅಸಹನೆ ಮೂಡಿಸುತ್ತಿದೆ ಎಂದು ಹೇಳಿದರು.
ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ನಿರಂಜನಾನಂದಪುರಿ ಶ್ರೀಗಳು
ಹಿಂದಿನ ಸರ್ಕಾರದಲ್ಲೂ ಕುರುಬ ಸಮುದಾಯದ ಅನೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರಾಸೆ ಅನುಭವಿಸಿದ್ದಾರೆ. ಯಾವುದೇ ಸರ್ಕಾರ ಒಂದು ಜಾತಿಯ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದರೆ ಅದು ತಪ್ಪು ಎಂದು ಹೇಳಿದರು.
ಇನ್ನೂ ಮೈತ್ರಿ ಸರ್ಕಾರದ ಅವಧಿ ಲೋಕಸಭೆಯ ವರೆಗೆ ಮಾತ್ರ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಹೆಚ್. ವಿಶ್ವನಾಥ್ ಐದು ವರ್ಷ ನೀವೇ ಅಂತ ಹೇಳಿದ್ದು ಯಾರು? ಕಾಂಗ್ರೆಸ್ ನವರು ತಾನೇ , ಚುನಾವಣಾ ಫಲಿತಾಂಶ ಬಂದ ಬಳಿಕ ಓಡೋಡಿ ಬಂದು ತಬ್ಬಿಕೊಂಡು ನಮಗೆ ನೀವೇ ಬೇಕು. ಅಂತ ಹೇಳಿದ್ದು ದೆಹಲಿ ಹೈಕಮಾಂಡ್ ತಾನೇ ಎಂದರು.