ಮೈಸೂರಲ್ಲಿ ಉಷ್ಣಾಂಶ ಹೆಚ್ಚಳ, ರೋಗಗಳ ಬಗ್ಗೆ ಎಚ್ಚರವಿರಲಿ
ಮೈಸೂರು, ಏಪ್ರಿಲ್ 27 : ಏಪ್ರಿಲ್ ಮೊದಲ ವಾರದಿಂದಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಸಿಲಿನ ತಾಪಮಾನ ವಿಪರೀತವಾಗಿದೆ. ಸರ್ಕಾರಿ ಆಸ್ಪತ್ರೆಗಳ ಒಳರೋಗಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈ ಬಾರಿ ಫೆಬ್ರವರಿ-ಮಾರ್ಚ್ ಅವಧಿ ಒಂದು ಸಾವಿರಕ್ಕೂ ಅಧಿಕವಾಗಿ ಏರಿಕೆಯಾಗಿದೆ.
ಒಟ್ಟಾರೆಯಾಗಿ ಹೊರರೋಗಿಗಳ ಸಂಖ್ಯೆ ಗಮನಿಸಿದಾಗ ದುಪ್ಪಟ್ಟು ಏರಿಕೆ ಆಗಿರುವುದು ಆತಂಕಕಾರಿ ಬೆಳವಣಿಗೆ. ಬೇಸಿಗೆಯ ಬೇಗೆಯಿಂದಾಗಿ ಜನ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಮೈಸೂರಿನಲ್ಲಿ ದಾಖಲೆಯ ಬಿಸಿಲು:ಹಣ್ಣುಗಳು, ಎಳನೀರಿನ ಮೊರೆ ಹೋದ ಜನರು
ಬಿಸಿಲಿನ ತಾಪಮಾನ ಏಪ್ರಿಲ್ ಮೂರನೇ ವಾರದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ನಿಂದ 39 ಡಿಗ್ರಿ ಸೆಲ್ಸಿಯಸ್ವರೆಗೂ ಹೆಚ್ಚಳವಾಗಿತ್ತು. ಆದರೆ, ಎರಡು ದಿನಗಳಿಂದ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇದ್ದರೂ ವಾತಾವರಣದಲ್ಲಿ ಬಿಸಿ ಗಾಳಿ ಸೂಸುತ್ತಿರುವುದು ಹೆಚ್ಚಾಗಿದೆ.
ಇದರಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು, ತಿಂಗಳಿಂದ ತಿಂಗಳಿಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಡು ಬಿಸಿಲಿನ ಧಗೆಗೆ ಮನೆಯೊಳಗೂ ಇರಲಾರದೆ, ಹೊರಗೂ ಬರಲಾಗದೆ ಅನೇಕ ಮಂದಿ ಸಂಕಟ ಅನುಭವಿಸುವ ಸ್ಥಿತಿ ತಲೆದೋರಿದೆ.
ಸಮಯಕ್ಕೆ ಸರಿಯಾಗಿ ಮಳೆಯಾಗದೇ ಮತ್ತಷ್ಟು ಬಿಸಿಲು ಹೆಚ್ಚಳವಾದರೆ, ಮೇ ತಿಂಗಳು ಕಳೆಯುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನಲ್ಲಿ ಸಿಕ್ಕಾಪಟ್ಟೆ ಬಿಸಿಲು, ತಂಪು ಪೇಯಕ್ಕೆ ಹೆಚ್ಚಿದ ಬೇಡಿಕೆ
ಸಾಮಾನ್ಯವಾಗಿ ಜನರು ಬೇಸಿಗೆಯಲ್ಲಿ ಸೇವಿಸಿದ ನೀರು ಹೆಚ್ಚಿನ ಪ್ರಮಾಣದಲ್ಲಿ ಬೆವರಿನ ಮೂಲಕ ಹೊರಗೆ ಬರುತ್ತದೆ. ದೇಹದೊಳಗೆ ನೀರಿನ ಅಂಶ, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ರಕ್ತದ ಒತ್ತಡವೂ ಹೆಚ್ಚಾದರೆ ಅಸ್ವಸ್ಥರಾಗುತ್ತಾರೆ. ಈ ಅವಧಿಯಲ್ಲಿ ಕೆಲವರಿಗೆ ಸನ್ಸ್ಟ್ರೋಕ್ ಉಂಟಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಬೇಸಿಗೆ ಮುಗಿಯುವವರೆಗೂ ಅನೇಕರು ವಿವಿಧ ರೀತಿಯ ಚರ್ಮರೋಗ ಸಮಸ್ಯೆ, ವೈರಲ್ ಜ್ವರ ಸೇರಿ ಇತರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಅಲರ್ಜಿ ಇರುವವರಿಗೆ ಬಹುಬೇಗ ಶೀತ, ಕೆಮ್ಮು ಬರುತ್ತವೆ. ಆರೋಗ್ಯ ದೃಷ್ಟಿಯಿಂದ ಹೆಚ್ಚು ನೀರು ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದರು.
ಬಿಸಿಲ ಝಳ ಎದುರಿಸಲು ಜಪಾನಿಗರು ಐಡ್ಯಾ ಮಾಡ್ಯಾರ!
ಬೇಸಿಗೆ ಬಿಸಿಗೆ ಬರುವ ರೋಗಗಳ ಲಕ್ಷಣಗಳು: ಚರ್ಮ ಕೆಂಪಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗುವುದು, ದೇಹದ ಉಷ್ಣತೆ ಜಾಸ್ತಿಯಾಗುವುದು. ದೀರ್ಘವಾದ ತೀವ್ರ ಉಸಿರಾಟ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಪ್ರಥಮ ಚಿಕಿತ್ಸೆಯಾಗಿ ಅನಾರೋಗ್ಯಕ್ಕೊಳಗಾದ ವ್ಯಕ್ತಿಯ ಬಟ್ಟೆ ಸಡಿಲಿಸಿ, ತೆಗೆಯಬೇಕು. ಗಾಳಿಯಾಡುವ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ, ವ್ಯಕ್ತಿಯ ಮೇಲೆ ತಣ್ಣೀರು ಸಿಂಪಡಿಸಬೇಕು. ಯಾವುದೇ ಔಷಧ ತಕ್ಷಣ ನೀಡಬಾರದು ಎನ್ನುತ್ತಾರೆ ವೈದ್ಯರಾದ ಡಾ. ಗಿರೀಶ್
ಬಿಸಿಲಿನಿಂದ ಯಾರಾದರೂ ತೊಂದರೆಗೆ ಒಳಗಾದರೆ ತಕ್ಷಣ ಗ್ರಾಮಗಳಲ್ಲಿರುವ ಕಿರಿಯ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರ ನೆರವು ಪಡೆಯಿರಿ. ಅವರಿಂದ ಒಆರ್ಎಸ್ ಪಾಕೆಟ್ ಪಡೆದು ಒಂದು ಲೀಟರ್ ನೀರಿಗೆ ಒಂದು ಪಾಕೆಟ್ ಹಾಕಿ, ಚೆನ್ನಾಗಿ ಕಲಿಸಿ 24 ಗಂಟೆಯ ಒಳಗೆ ಉಪಯೋಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.