ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ: ಕುಮಾರಸ್ವಾಮಿ
ಮೈಸೂರು, ಜನವರಿ 14: ನನ್ನ ಎಲ್ಲಾ ಕೆಲಸಗಳಿಗೆ ಮೈಸೂರು ಸ್ಫೂರ್ತಿಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಜಾ.ದಳಕ್ಕೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಮುಖಂಡರನ್ನು ಕೇಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸಾ.ರಾ.ಕನ್ವೆನ್ಷನ್ ಹಾಲ್ ನಲ್ಲಿ ಕರೆದಿದ್ದ, ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿ 25ರೊಳಗೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗಲಿದೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲನೇ ವಾರದಲ್ಲಿ ಲೋಕಸಭಾ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ ಎಂದರು.
ನಗರಪಾಲಿಕೆ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿಯ ವಿರುದ್ಧ ನಿಂತು ಸರಿಯಾಗಿ ತೀರ್ಮಾನ ಮಾಡುತ್ತೀರಿ. ಆದರೆ, ಲೋಕಸಭಾ ಚುನಾವಣೆ ಬಂದರೆ ಮನೆಯಲ್ಲಿ ಮಲಗಿಕೊಳ್ಳುತ್ತೀರಿ, ಇಲ್ಲ ಬೇರೆ ಬೇರೆ ತೀರ್ಮಾನ ಮಾಡುತ್ತೀರಿ ಏಕೆ?. ಈ ಸಾರಿ ನಾನು ರಾಜ್ಯದಲ್ಲೇ ಮೊದಲನೇ ಬಾರಿಗೆ ಇಲ್ಲಿಗೆ ಬಂದು ಮಾತನಾಡುತ್ತಿದ್ದೇನೆ.
ಜೆಡಿಎಸ್ ಜೊತೆ ಸೀಟು ಹಂಚಿಕೆಯ ಜೊತೆಗೆ, ಕಾಂಗ್ರೆಸ್ಸಿಗೆ ಶುರುವಾಯ್ತು ಇನ್ನೊಂದು ತಲೆನೋವು
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಾ.ದಳ ಗೆಲುವು ಸಾಧಿಸಿದೆ. ಅಂತೆಯೇ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜಾ ದಳ ಎರಡೂ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಎರಡೂ ಕ್ಷೇತ್ರಗಳಲ್ಲಿ ಸುಲಭವಾಗಿ ಭಾರಿ ಬಹುಮತದಿಂದ ಗೆಲುವು ಸಾಧಿಸಬಹುದು ಎಂದರು.
ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ
ಕಳೆದ ವಿಧಾನಸಭಾ ಚುನಾವಣೆಯಲ್ಲಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಆತಂಕವನ್ನು ಅಲ್ಪಸಂಖ್ಯಾತ ಮುಸಾಲ್ಮಾನರಲ್ಲಿ ಬಿತ್ತಿದ್ದರಿಂದ ಜಾ.ದಳಕ್ಕೆ ಹಿನ್ನಡೆಯಾಯಿತು.ಜಾ.ದಳದ ಬಗ್ಗೆ ಮುಸ್ಲಿಂ ಸಮುದಾಯದಲ್ಲಿರುವ ತಪ್ಪು ಕಲ್ಪನೆ ಹೋಗಬೇಕು. ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಅದನ್ನು ತಪ್ಪಿಸಲು ಜ.17ರಂದು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಏರ್ಪಡಿಸಿದ್ದೇವೆ. ಮುಸ್ಲಿಮರ ಕಲ್ಯಾಣಕ್ಕೆ ಎಚ್.ಡಿ.ದೇವೇಗೌಡರು ನೀಡಿದ ಕೊಡುಗೆಯನ್ನು ನೆನೆಯುವ ಕೆಲಸ ಸಮಾವೇಶದಲ್ಲಿ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಲೋಕಸಭಾ ಚುನಾವಣೆ: ಮಂಡ್ಯದತ್ತ ರಾಜ್ಯದ ಜನರ ಚಿತ್ತ..!
ಸ್ವಾಮಿಕಾರ್ಯ, ಸ್ವಕಾರ್ಯ
ರಾಜ್ಯದ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ನೀರಾವರಿ ಯೋಜನೆಗಳಾಗಿ ಮಾರ್ಪಡಿಸಿ, ಕೇಂದ್ರ ಸರ್ಕಾರದಿಂದ ನೆರವು ಪಡೆದಾಗ ಮಾತ್ರ ರಾಜ್ಯದ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕೊಡಲು ಸಾಧ್ಯ ಎಂದ ಮುಖ್ಯಮಂತ್ರಿಗಳು ದೇವೇಗೌಡರ ನಾಯಕತ್ವದಲ್ಲಿ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 16 ಮಂದಿ ಲೋಕಸಭಾ ಸದಸ್ಯರನ್ನು ಕಳುಹಿಸಿಕೊಟ್ಟ ವಾತಾವರಣ ರಾಜ್ಯದಲ್ಲಿ ಮತ್ತೆ ನಿರ್ಮಾಣವಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ಲೋಕಸಭೆ ಚುನಾವಣೆಗೆ ಪಕ್ಷದ ಸಂಘಟನೆಯೊಂದಿಗೆ ನಮ್ಮ ಚಿತ್ರ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ `ಸೀತಾರಾಮ ಕಲ್ಯಾಣ' ಚಿತ್ರದ ಆಡಿಯೋವನ್ನು ಜ.19ರಂದು ಬನ್ನಿಮಂಟಪದ ಮೈದಾನದಲ್ಲಿ ಬಿಡುಗಡೆ ಮಾಡಲಾಗುವುದು. ಅದಕ್ಕಾಗಿ ಪಕ್ಷದ ಸಂಘಟನೆಯೊಂದಿಗೆ ಕಾರ್ಯಕರ್ತರಿಗೆ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಲು ಈ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಆದಂತಾಗುತ್ತದೆ ಎಂದು ಹೇಳಿದರು.
ಅಭಿಷೇಕ್ ನಿರ್ಧಾರದ ಮೇಲೆ ನಿಂತಿದೆ ನಿಖಿಲ್ ರಾಜಕೀಯ ಭವಿಷ್ಯ..!
ಕೇಂದ್ರ ಸರ್ಕಾರದ ಪತನ ಆರಂಭ
ಮೈತ್ರಿ ಸರ್ಕಾರದಲ್ಲಿ ನಾನು ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಮೋದಿಯ ಓಟಕ್ಕೆ ಬ್ರೇಕ್ ಬಿದ್ದು, ಕೇಂದ್ರ ಸರ್ಕಾರದ ಪತನ ಆರಂಭವಾಗಿದೆ. ಕರ್ನಾಟಕದ ಬಳಿಕ ಉತ್ತರ ಭಾರತದ ಚುನಾವಣೆಯಲ್ಲೂ ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ. ಇನ್ನುಮುಂದೆ ನರೇಂದ್ರ ಮೋದಿ ಅವರು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿನ ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಚಾಮರಾಜನಗರ ಜನತೆಗೆ ಕೃಷಿ ವಿ.ವಿ.ಕೊಟ್ಟಿದ್ದು, ಗಾರ್ಮೆಂಟ್ಸ್ ತೆರೆಯುವವರಿಗೆ ವಿನಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಫಾಲ್ಕನ್ ಟೈರ್ ಕಂಪನಿಗೆ ಮತ್ತೆ ಜೀವ ಕೊಡಲು ಜ.20 ರಂದು ಸಭೆ ಕರೆದಿದ್ದೇವೆ. ಅಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳಿಗೆ ಸರ್ಕಾರ ನೆರವಾಗುವ ನಿಟ್ಟಿನಲ್ಲಿ ಅಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಗೆಲ್ಲಲು ಅವಕಾಶ ಕಲ್ಪಿಸಬೇಕಿದೆ
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಬಹಳ ಕಾಲದಿಂದಲೂ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಜಾ.ದಳ ಗೆದ್ದಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಇರುವ ಸುವರ್ಣ ಕಾಲದಲ್ಲಿ ಗೆಲ್ಲಲು ಅವಕಾಶ ಕಲ್ಪಿಸಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಲು ಶಕ್ತಿ ತುಂಬಬೇಕು ಎಂದರು.
ಸಾಕಷ್ಟು ಕ್ಲಿಷ್ಟಕರ ಪರಿಸ್ಥಿತಿ ಎದುರಾಯಿತು
ಜಾ.ದಳ ರಾಜ್ಯಾಧ್ಯಕ್ಷರಾದ ಶಾಸಕ ಅಡಗೂರು ಎಚ್.ವಿಶ್ವನಾಥ್ ಮಾತನಾಡಿ, ಮೈತಿ ಸರ್ಕಾರ ರಚನೆಯಾಗಿ 7 ತಿಂಗಳಾಗಿದೆ. ಈ ವೇಳೆ ಸಾಕಷ್ಟು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಕೊಡಗು ಪ್ರಕೃತಿ ವಿಕೋಪ, ಸುಳ್ವಾಡಿ ವಿಷಪ್ರಸಾದ ದುರಂತ, ಮಂಡ್ಯದ ಬಸ್ ಅವಘಡ, ನಟ ಅಂಬರೀಶ್ ಅವರ ಅಗಲಿಕೆಯಂತಹ ಸೂಕ್ಷ್ಮ ಪರಿಸ್ಥಿತಿಗಳನ್ನು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದರು.