ಮೈಸೂರು: ಕೊವಿಡ್-19ಗೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಸಾವು
ಮೈಸೂರು, ಆಗಸ್ಟ್.06: ಕೊರೊನಾವೈರಸ್ ಸೋಂಕಿನ ಅಟ್ಟಹಾಸಕ್ಕೆ ಕೊರೊನಾವಾರಿಯರ್ಸ್ ಕೂಡಾ ಪ್ರಾಣ ಬಿಡುತ್ತಿದ್ದಾರೆ. ಚನ್ನಪಟ್ಟಣ ಸರ್ಕಾರಿ ಅಸ್ಪತ್ರೆಯ ಹೆಸರಾಂತ ಮಕ್ಕಳ ತಜ್ಞ ಡಾ.ಮಂಜುನಾಥ್ ಅವರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 20 ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಹೆಸರಾಂತ ಮಕ್ಕಳ ತಜ್ಞ ವೈದ್ಯ ಡಾ.ಮಂಜುನಾಥ್, ಚಿಕಿತ್ಸೆ ಫಲಾಕಾರಿಯಾಗದೆ ಗುರುವಾರ ಮೈಸೂರಿನ ಜೆಎಸ್ಎಸ್ ಕೋವಿಡ್-19 ರೆಪೆರಲ್ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೈಸೂರಲ್ಲಿ ಹೆಚ್ಚಿದ ಸೋಂಕು; ವೈದ್ಯಕೀಯ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ತನ್ವೀರ್ ಸೇಠ್ ಮನವಿ
ಚನ್ನಪಟ್ಟಣ ಸರ್ಕಾರಿ ಅಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಂಜುನಾಥ್ ಉತ್ತಮ ಹೆಸರು ಸಂಪಾದಿಸಿದ್ದರು. 2020ರ ಡಿಸೆಂಬರ್ ತಿಂಗಳಿನಲ್ಲಿ ಇನ್ನೇನು ವೈದ್ಯ ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದರು.
20 ದಿನದ ಹಿಂದೆ ಡಾ.ಮಂಜುನಾಥ್ ರಿಗೆ ಸೋಂಕು:
ಕಳೆದ 20 ದಿನಗಳ ಹಿಂದೆ ಸರ್ಕಾರಿ ಅಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅಂಟಿಜೆನ್ ಟೆಸ್ಟನಲ್ಲಿ ಡಾ.ಮಂಜುನಾಥ್ ಅವರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಈ ಹಿನ್ನಲೆ ಎರಡು ದಿನ ಸರ್ಕಾರಿ ಅಸ್ಪತ್ರೆ ಸೀಲ್ ಡೌನ್ ಮಾಡಲಾಗಿತ್ತು. ಡಾ.ಮಂಜುನಾಥ್ ಕುಟುಂಬ ಮೈಸೂರಿನಲ್ಲಿ ವಾಸವಿದ್ದ ಕಾರಣ ಅವರನ್ನು ಮೈಸೂರಿನ ಜೆಎಸ್ಎಸ್ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮೃದು ಸ್ವಭಾವದ ಹಿರಿಯ ವೈದ್ಯ ಡಾ.ಮಂಜುನಾಥ್ ಚನ್ನಪಟ್ಟಣ ತಾಲೂಕಿನಲ್ಲಿ ಉತ್ತಮ ಹೆಸರು ಗಳಿಸಿದ್ದರು. ವೈದ್ಯರ ಸಾವಿಗೆ ಸರ್ಕಾರಿ ಅಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.