ಮೈಸೂರು "ಬಹುರೂಪಿ"ಯಲ್ಲಿ ಡೈಲಾಗ್ ಹೇಳಿ ರಂಜಿಸಿದ ನಟ ಅನಂತನಾಗ್
ಮೈಸೂರು, ಫೆಬ್ರವರಿ 15: 'ಗಾಂಧಿ ಪಥ' ಎಂಬ ಪರಿಕಲ್ಪನೆಯಲ್ಲಿ ಬಹುರೂಪಿ ನಾಟಕೋತ್ಸವ ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದು ಹಿರಿಯ ನಟ ಅನಂತ್ ನಾಗ್ ಸಂತಸ ವ್ಯಕ್ತಪಡಿಸಿದರು. ನಿನ್ನೆ ರಂಗಾಯಣ ಮತ್ತು ಕಲಾಮಂದಿರದ ಆವರಣದಲ್ಲಿ "25ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ"ಕ್ಕೆ ಸಂಭ್ರಮದ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ರಂಗಾಯಣದ ಅಂಗಳಕ್ಕೆ ಬಂದರೆ ಏನೋ ರೋಮಾಂಚನವಾಗುತ್ತದೆ. ಕಾಸರಗೋಡು ಆನಂದ ಆಶ್ರಮದಲ್ಲಿ ಬಾಲ್ಯ ಕಳೆದಿದ್ದೇನೆ. ಇಲ್ಲಿ ಮೂರ್ತಿ ಪೂಜೆ ಇಲ್ಲ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ರಮಣ ಮಹರ್ಷಿ ಹಾಗೂ ಗಾಂಧೀಜಿ ಫೋಟೊ ಇದೆ. ಹೊನ್ನಾವರದಲ್ಲಿ ಓದುತ್ತಿದ್ದಾಗ ಚರಕ ತಿರುಗಿಸಿದ್ದೆ. ಮಠದ ಭಜನೆ ನನ್ನ ಮೇಲೆ ಪ್ರಭಾವ ಬೀರಿತ್ತು. ಈ ಬಾರಿ ಬಹುರೂಪಿಯ ಗಾಂಧಿಪಥ ಇದೆಲ್ಲವನ್ನೂ ನೆನಪಿಸಿದೆ. ಶ್ರದ್ಧೆ, ಭಕ್ತಿಯಿಂದ ನಡೆಸುತ್ತಿರುವ ಬಹುರೂಪಿ ಯಶಸ್ವಿಯಾಗಲಿ" ಎಂದು ಶುಭ ಹಾರೈಸಿದರು.
ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಮುಖ್ಯಮಂತ್ರಿ ಚಂದ್ರು ಮಾತುಗಳು
ಇದೇ ವೇಳೆ 'ನೋಡಿ ಸ್ವಾಮಿ ನಾವಿರೋದೆ ಹೀಗೆ' ಸಿನಿಮಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಯನ್ನು ಹಾಡಿದರು. ಅಲ್ಲದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಡೈಲಾಗ್ ಹೇಳಿದ್ದಕ್ಕೆ ಪ್ರೇಕ್ಷಕರಿಂದೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಯಿತು.
ಸಂಸದ ಪ್ರತಾಪ್ ಸಿಂಹ, ಅನಂತನಾಗ್ ಅವರ ಧರ್ಮಪತ್ನಿ ಗಾಯತ್ರಿ, ಶಾಸಕ ನಾಗೇಂದ್ರ, ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಮುಖ್ಯಮಂತ್ರಿ ಚಂದ್ರು, ಹುಲುಗಪ್ಪ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.
ರಂಗಾಯಣದ ಅಂಗಳದಲ್ಲಿ ಕೊಡಗಿನ ಸಂಸ್ಕೃತಿ ಮೇಳೈಸಿತ್ತು. ಕೊಡಗು ಸಾಂಪ್ರದಾಯಿಕ ವಿಶಿಷ್ಟ ಉಡುಗೆಯುನ್ನುಟ್ಟು ಆಗಮಿಸಿದ ನೂರಾರು ಮಂದಿ, ವಾಲಗತಟ್ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ಇದೇ ಮೊದಲ ಬಾರಿಗೆ ನೂರಾರು ಕೊಡಗಿನ ಮಂದಿ ರಂಗಾಯಣದ ಬಹುರೂಪಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.