ಮೈಸೂರು ದಸರಾ: ಜಂಬೂ ಸವಾರಿ ಆನೆಗಳಿಗೆ ಅದ್ಧೂರಿ ಬೀಳ್ಕೊಡುಗೆ
ಮೈಸೂರು, ಅಕ್ಟೋಬರ್ 3: ದಸರೆಯನ್ನು ಯಶಸ್ವಿಯಾಗಿ ಪೂರೈಸಿದ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆ ಇಂದು ಸ್ವಸ್ಥಾನಕ್ಕೆ ಮರಳುತ್ತಿವೆ. ಜತೆಗೆ ಅವುಗಳ ಮಾವುತ ಹಾಗೂ ಕವಾಡಿ ಕುಟುಂಬ ವರ್ಗದವರೂ ಕಾಡಿಗೆ ಮರಳುತ್ತಿದ್ದಾರೆ.
ಅಂಬಾರಿ ಹೊತ್ತ ಅರ್ಜುನನ ಮಾವುತ ವಿನು ಸಂದರ್ಶನ
ಕಾಡಿಗೆ ಹೊರಟ ಗಜಪಡೆಗೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ನಾಡಿನಿಂದ ಸ್ವಸ್ಥಾನಕ್ಕೆ ಮರಳುವಾಗ ಮಾವುತರು, ಕುಟುಂಬದವರು ಭಾವುಕರಾದರು. ನಾಡಹಬ್ಬ ದಸರಾ ಮಹೋತ್ಸವದ ಕೊನೆಯ ದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಕ್ಯಾಪ್ಟನ್ ಅರ್ಜುನ ಸೇರಿದಂತೆ ಎಲ್ಲಾ ಆನೆಗಳು ಯಾವುದೇ ಚ್ಯುತಿ ಇಲ್ಲದಂತೆ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿ ಸೋಮವಾರ ರಿಲ್ಯಾಕ್ಸ್ ಮೂಡಿನಲ್ಲಿದ್ದವು.
ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಅರ್ಜುನ, ಬಲರಾಮ, ಭೀಮ, ಅಭಿಮನ್ಯು, ಗಜೇಂದ್ರ, ಕಾವೇರಿ ವರಲಕ್ಷ್ಮಿ, ವಿಜಯ, ಗೋಪಾಲಸ್ವಾಮಿ, ಕೃಷ್ಣ, ವಿಕ್ರಂ, ಗೋಪಿ, ಹರ್ಷ ಮತ್ತು ಪ್ರಶಾಂತ ಆನೆಗಳಿಗೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಕೊಡಲಾಗಿದ್ದು, ಇಂದು ಕಾಡಿಗೆ ಮರಳಲಿವೆ. 45ದಿನಗಳ ಕಾಲ ಮೈಸೂರಿನಲ್ಲಿ 15 ಆನೆಗಳು ಪಾಲ್ಗೊಂಡು ಜನರ ಗಮನ ಸೆಳೆದಿದ್ದವು.
ವಿಶ್ವ ಪ್ರಸಿದ್ಧ ಮೈಸೂರು ದಸರಾಕ್ಕೆ ಬೇರೆಲ್ಲೂ ಇಲ್ಲ ಸಾಟಿ!
ಅರಮನೆ ಆವರಣದಿಂದ ಪೊಲೀಸ್ ಬೆಂಗಾವಲಿನಲ್ಲಿ ಆನೆಗಳನ್ನು ಆಯಾ ಆನೆಗಳ ಶಿಬಿರಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಇವರೊಂದಿಗೆ ಆಯಾ ಆನೆಗಳ ಮಾವುತರು, ಕಾವಾಡಿಗಳ ಕುಟುಂದವರೆಲ್ಲರೂ ಆನೆ ಶಿಬಿರದ ಬಿಡಾರಗಳನ್ನು ಖಾಲಿ ಮಾಡಿ ಗಂಟು-ಮೂಟೆಗಳೊಂದಿಗೆ ಆನೆಗಳಿದ್ದ ಲಾರಿಗಳಲ್ಲೇ ತಮ್ಮ ತಮ್ಮ ಶಿಬಿರಗಳಿಗೆ ಪ್ರಯಾಣ ಬೆಳೆಸಿದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಡಿ.ಸಿ.ರಂದೀಪ್, ಶಾಸಕ ಸೋಮಶೇಖರ್, ಅರಣ್ಯಾಧಿಕಾರಿ ಏಡುಕೊಂಡುಲು ಪಾಲ್ಗೊಂಡಿದ್ದರು. ಜಿಲ್ಲಾಡಳಿತದಿಂದ ಕಾವಾಡಿ ಮತ್ತು ಮಾವುತರಿಗೆ ಗೌರವಧನ ನೀಡಲಾಯಿತು. ಅಷ್ಟೇ ಅಲ್ಲದೇ ಅವರಿಗೆ ವಿಶೇಷ ಉಪಹಾರವನ್ನು ಕೂಡ ನೀಡಲಾಯಿತು