ಯಡಿಯೂರಪ್ಪ ಬೆಂಬಲಿಸಿ ಬಂದ ಪೀಠಾಧಿಪತಿಗಳು 'ಸ್ಪಾನ್ಸರ್ಡ್ ಸ್ವಾಮೀಜಿಗಳು'
ಮೈಸೂರು, ಜುಲೈ 22: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಸತತ ವಾಗ್ದಾಳಿ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ನಾಡಿನ ಪೀಠಾಧಿಪತಿಗಳ ಬಗ್ಗೆ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
"ಮಠ ಮಾನ್ಯಗಳಿಗೆ ಯಡಿಯೂರಪ್ಪನವರು ಧನ ಸಹಾಯ ಮಾಡುತ್ತಿದ್ದಾರೆ, ಅದು ಶಿಕಾರಿಪುರದ ಹಣವಲ್ಲ. ಅದು ಜನರ ತೆರಿಗೆ ಹಣ, ಒಬ್ಬ ಬೀಡಿ ಬೆಂಕಿ ಪಟ್ಟಣ ತೆಗೆದು ಕೊಂಡವನೂ ತೆರಿಗೆ ಕಟ್ಟುತ್ತಾನೆ"ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸ್ಪಷ್ಟ ಭರವಸೆ
"ಲಿಕ್ಕರ್, ನಿಕ್ಕರ್ ತೆಗೆದುಕೊಂಡರೂ ಅದಕ್ಕೆ ಜಿಎಸ್ಟಿ ಕಟ್ಟಬೇಕು. ಆ ಹಣವನ್ನು ಮನಸೋ ಇಚ್ಚೆ ಖರ್ಚು ಮಾಡಿದರೆ ಹೇಗೆ, ಯಡಿಯೂರಪ್ಪನವರು ಹಣಕಾಸು ಸಚಿವರು ಕೂಡಾ ಎನ್ನುವುದನ್ನು ಮರೆಯಬಾರದು"ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
"ನಮ್ಮ ಜಾತ್ಯಾತೀತ ವ್ಯವಸ್ಥೆಯಲ್ಲಿ ಜನರ ತೆರಿಗೆ ಹಣವನ್ನು ಒಂದು ಸಮುದಾಯದ ಮಠಗಳಿಗೆ ಹಂಚುವುದು ಸರಿಯಲ್ಲ. ಈ ಸರಕಾರ ಪರಿಸ್ಥಿತಿಯ ಲಾಭ ಪಡೆದು ಅಧಿಕಾರಕ್ಕೆ ಬಂದಂತಹ ಶಿಶು, ಜನಾದೇಶದಿಂದ ಬಂದಂತಹ ಸರಕಾರವಲ್ಲ"ಎಂದು ವಿಶ್ವನಾಥ್ ಹೇಳಿದ್ದಾರೆ.
"ಹಿಂದೆ ಯಡಿಯೂರಪ್ಪನವರು ಸ್ವಯಂಕೃತ ಅಪರಾಧದಿಂದ ಜೈಲಿಗೆ ಹೋಗಿದ್ದಾಗ, ಯಾಕೆ ಮಠಾಧಿಪತಿಗಳು ಬೆಂಬಲಿಸಲಿಲ್ಲ, ಆಗಲೂ ಹಣ ಪಡೆದುಕೊಂಡಿದ್ದೀರಲ್ವಾ? ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಯಾಕೆ ಈ ಸ್ವಾಮೀಜಿಗಳು ಅವರಿಗೆ ಬೆಂಬಲಿಸಲಿಲ್ಲ"ಎಂದು ವಿಶ್ವನಾಥ್ ಪ್ರಶಿಸಿದ್ದಾರೆ.
ನಾಯಕತ್ವ ಬದಲಾವಣೆ: ಸಿಎಂ ಯಡಿಯೂರಪ್ಪ ಸೈಲೆಂಟ್, ಮಠಾಧಿಪತಿಗಳು ವೈಲೆಂಟ್
ಎರಡು ದಿನಗಳ ಹಿಂದೆ ಯಡಿಯೂರಪ್ಪನವರ ನಿವಾಸಕ್ಕೆ ಬಂದವರು ಸ್ಪಾನ್ಸರ್ಡ್ ಸ್ವಾಮೀಜಿಗಳು, ಅವರು ಏಕಾಏಕಿ ಬಂದಿಲ್ಲ. ಅವರನ್ನು ಬಿ.ವೈ. ರಾಘವೇಂದ್ರ ಕರೆದುಕೊಂಡು ಬಂದಿರುವುದು"ಎನ್ನುವ ವಿವಾದಕಾರಿ ಹೇಳಿಕೆಯನ್ನು ಎಚ್.ವಿಶ್ವನಾಥ್ ನೀಡಿದ್ದಾರೆ. ಬಿಎಸ್ವೈ ಆಪ್ತ ರುದ್ರೇಶ್, ಸ್ವಾಮೀಜಿಗಳಿಗೆ ಕವರ್ ನೀಡುತ್ತಿದ್ದ ವಿಡಿಯೋ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.