ಜಂಬೂಸವಾರಿಗೆ ಹೆಜ್ಜೆ ಹಾಕಲು ನಾಡಿಗೆ ಬಂದಿಳಿದ ಮತ್ತೊಂದು ಸುತ್ತಿನ ಗಜಪಡೆ
ಮೈಸೂರು, ಸೆಪ್ಟೆಂಬರ್ 10: ಸೆ.30ರಿಂದ ಅ.8ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಎರಡನೇ ಹಂತದಲ್ಲಿ ಗಜಪಡೆ ಆಗಮಿಸಿದೆ.
ದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ 75 ಸಾವಿರ ಗಿಡಗಳು
ದುಬಾರೆ ಶಿಬಿರದಿಂದ ಕಾವೇರಿ (41), ವಿಕ್ರಮ (46), ಗೋಪಿ (37), ಕೆ.ಗುಡಿಯಿಂದ ದುರ್ಗಾ ಪರಮೇಶ್ವರಿ (52), ರಾಂಪುರದಿಂದ ಜಯಪ್ರಕಾಶ್ (57) ಹಾಗೂ ಲಕ್ಷ್ಮೀ (17) ಆನೆಗಳು ಬಂದಿಳಿದವು. ಇನ್ನು ಭಾನುವಾರವಷ್ಟೇ ಮತ್ತಿಗೋಡುವಿನಿಂದ ಬಲರಾಮ (61) ಬಂದಿತ್ತು. ಮೊದಲ ಹಂತದಲ್ಲಿ ಬಳ್ಳೆ ಆನೆ ಶಿಬಿರದ ಅರ್ಜುನ (59 ವರ್ಷ), ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು (53), ವರಲಕ್ಷ್ಮಿ (63), ದುಬಾರೆ ಆನೆ ಶಿಬಿರದ ಧನಂಜಯ (36), ಈಶ್ವರ (49), ವಿಜಯ (62) ಬಂದಿದ್ದವು.
ಎರಡು ಹೊಸ ಆನೆಗಳು ಸೇರಿದಂತೆ ಒಟ್ಟು 14 ಆನೆಗಳನ್ನು ಕರೆತರುವ ಚಿಂತನೆ ಇತ್ತು. ಕೊನೆಗಳಿಗೆಯಲ್ಲಿ ರೋಹಿತ್ ಆನೆಯನ್ನು ಕೈಬಿಡಲಾಯಿತು. ಒಟ್ಟು 13 ಆನೆಗಳು ಈ ಬಾರಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.
23 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿರುವ ಬಲರಾಮ
ಸುಮಾರು 23 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಂಡಾನೆ ಬಲರಾಮನಿಗೆ 61 ವರ್ಷ. ಮತ್ತಿಗೋಡು ಆನೆ ಶಿಬಿರದ ಬಲರಾಮನಿಗೆ ಮಾವುತ ತಿಮ್ಮ, ಕಾವಾಡಿ ಪಾಪು. 2.70 ಮೀಟರ್ ಎತ್ತರ, 3.70 ಮೀಟರ್ ಉದ್ದವಿದ್ದಾನೆ. ಇವನ ತೂಕ 5400-5570 ಕೆ.ಜಿ. 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಬಲರಾಮನನ್ನು ಸೆರೆಹಿಡಿಯಲಾಗಿತ್ತು. ಈ ಆನೆಯು ತುಂಬಾ ಬಲಶಾಲಿಯಾಗಿದ್ದು, ಸುಮಾರು 23 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 1999-2011 ರವರೆಗೆ ಹಿಂದಿನ ಅಂಬಾರಿ ಆನೆ ದ್ರೋಣನ ನಂತರ, ಒಟ್ಟು 14 ಬಾರಿ ಸತತವಾಗಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ.
ಕಾವೇರಿಗೆ ಇದು 9ನೇ ದಸರಾ
8 ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ 41 ವರ್ಷದ ಕಾವೇರಿ ಹೆಣ್ಣಾನೆ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದೆ. ಈ ಆನೆಗೆ ಮಾವುತ ದೋಬಿ, ಕವಾಡಿ ರಂಜನ್ ಜೆ. 2.50 ಮೀಟರ್ ಎತ್ತರ, 3.32 ಮೀಟರ್ ಉದ್ದವಿದೆ. 3000-3220 ಕೆ.ಜಿ ತೂಕವಿದೆ. ಈ ಆನೆಯನ್ನು ಫೆಬ್ರವರಿ 2009ರಂದು ಸೋಮವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.
ಪಟ್ಟದಾನೆಯಾಗಿ ಕಾರ್ಯ ನಿರ್ವಹಿಸಿದ್ದ ವಿಕ್ರಮ
15 ವರ್ಷಗಳಿಂದ ಪಾಲ್ಗೊಳ್ಳುತ್ತಿರುವ 46 ವರ್ಷದ ವಿಕ್ರಮನೊಂದಿಗೆ ಮಾವುತ ಪುಟ್ಟ, ಕವಾಡಿ ಹೇಮಂತ ಕುಮಾರ್ ಇದ್ದಾರೆ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 2015ರಿಂದ ಪಟ್ಟದ ಆನೆಯಾಗಿ ಇದು ಅರಮನೆಯ ಪೂಜಾವಿಧಿಗಳಲ್ಲಿ ಭಾಗವಹಿಸುತ್ತಿದೆ. 2.60 ಮೀಟರ್ ಎತ್ತರ, 3.43 ಮೀಟರ್ ಉದ್ದವಿದ್ದಾನೆ. 3820 ಕೆ.ಜಿಯ ಅಜಾನುಬಾಹು ಈತ.
ಕಾರೇಕೊಪ್ಪ ಅರಣ್ಯದಲ್ಲಿ ಸೆರೆಯಾಗಿದ್ದ ಗೋಪಿ
9 ವರ್ಷದಿಂದ ನಾಡಹಬ್ಬ ದಸರೆಯಲ್ಲಿ ಭಾಗಿಯಾಗುತ್ತಿರುವ 37 ವರ್ಷ ವಯಸ್ಸಿನ ಗೋಪಿಯ ಮಾವುತ ದೊರೆಯಪ್ಪ, ಕವಾಡಿ ಶಿವು. 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಇದು ದುಬಾರೆ ಶಿಬಿರದಲ್ಲಿ ಸಫಾರಿ ಕೆಲಸವನ್ನು ನಿರ್ವಹಿಸುತ್ತಿದೆ. ಗೋಪಿ ದುಬಾರೆ ಆನೆ ಶಿಬಿರದಿಂದ ಬಂದವನು. ಎತ್ತರ 2.92 ಮೀಟರ್, ಉದ್ದ 3.42 ಮೀಟರ್. 3710 ಕೆ.ಜಿ ತೂಕ ಹೊಂದಿದ್ದಾನೆ.
ದುರ್ಗಾಪರಮೇಶ್ವರಿಗೆ ಇದು 8ನೇ ದಸರಾ
7ನೇ ಬಾರಿಗೆ ಪಾಲ್ಗೊಳ್ಳುತ್ತಿರುವ 52 ವರ್ಷ ವಯಸ್ಸಿನ ದುರ್ಗಾಪರಮೇಶ್ವರಿಯೊಂದಿಗೆ ಮಾವುತ ಅಣ್ಣು ಹಾಗೂ ಕವಾಡಿ ಕೃಷ್ಣ ಇದ್ದಾರೆ. 1972ರಲ್ಲಿ ಮಡಿಕೇರಿ ವಿಭಾಗದ ದುಬಾರೆಯಲ್ಲಿ ಸೆರೆ ಹಿಡಿಯಲಾಯಿತು. ಶರೀರದ ಎತ್ತರ 2.40 ಮೀಟರ್, ಶರೀರದ ಉದ್ದ 3.20 ಮೀಟರ್ ಹೊಂದಿದೆ. 3500 ಕೆ.ಜಿ ತೂಕವಿದೆ.
ಮರಿಯಾನೆಯಾಗಿದ್ದಾಗಲೇ ಜಯಪ್ರಕಾಶ್ ಚೂಟಿ
ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗಿಯಾಗುತ್ತಿರುವ ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಕರೆತರಲಾಗಿರುವ 57 ವರ್ಷದ 'ಜಯಪ್ರಕಾಶ್' ಆನೆಗೆ ಸಯ್ಯದ್ ಮಹಮ್ಮದ್ ಮಾವುತ ಹಾಗೂ ಕಾವಾಡಿ ಬಸವರಾಜು ಇದ್ದಾರೆ. ಈ ಆನೆಯು 8 ವರ್ಷದ ಮರಿಯಾಗಿದ್ದಾಗ ಬೇಗೂರು ಮನೆ ಶಿಬಿರಕ್ಕೆ ಬಂದಿತ್ತು.
ಕುತೂಹಲ ಮೂಡಿಸಿದೆ ಲಕ್ಷ್ಮೀಯ ಮೊದಲ ನಡೆ
ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ 17 ವರ್ಷದ ಲಕ್ಷ್ಮೀ ಆನೆಗೆ ಚಂದ್ರ ಮಾವುತ, ಕಾವಾಡಿ ಲವ. ಈ ಆನೆಯು 2002ರಲ್ಲಿ ತಾಯಿಯಿಂದ ಬೇರ್ಪಟ್ಟು ಇಲಾಖಾ ಆನೆ ಶಿಬಿರಕ್ಕೆ ಬಂದಿತ್ತು. ಆ. 26ರಂದು ಬಂದಿರುವ ಗಜಪಡೆಗೆ ಕಳೆದೆರಡು ದಿನಗಳಿಂದ ಕುದುರೆಗಳ ಜತೆ ತಾಲೀಮು ನೀಡಲಾಗುತ್ತಿದೆ. ಕುದುರೆಗಳ ಜತೆ ಹೆಜ್ಜೆ ಹಾಕುವ ತರಬೇತಿ ನೀಡಲಾಗುತ್ತಿದೆ.