ಶಾಲಾ ಪಠ್ಯ ಪುಸ್ತಕ ವಿವಾದ; ಡಾ. ಎಸ್. ಎಲ್. ಭೈರಪ್ಪ ಪ್ರತಿಕ್ರಿಯೆ
ಮೈಸೂರು, ಜೂ 2: "ಮಕ್ಕಳಿಗೆ ಇತಿಹಾಸದ ಘಟನೆಗಳ ಬಗ್ಗೆ ನಿಜ ಹೇಳಬೇಕೋ? ಅಥವಾ ಸುಳ್ಳು ಹೇಳಬೇಕೋ?. ಇತಿಹಾಸದ ಬಗ್ಗೆ ನಿಜ ಹೇಳಲು ಬಹಳ ಕಾಲದಿಂದಲೂ ಅವಕಾಶ ನೀಡಿಲ್ಲ" ಎಂದು ಹಿರಿಯ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಶಾಲಾ ಪಠ್ಯ ಪುಸ್ತಕ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಗುರುವಾರ ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಪಠ್ಯಪುಸ್ತಕ ಪರಷ್ಕರಣೆ ವಿವಾದದ ಬಗ್ಗೆ ಮಾತನಾಡಿದರು. "ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಏನನ್ನು ಹೇಳಬೇಕು ಎಂಬ ನಿಲುವಿಗೆ ಈ ತನಕ ಬರಲಾಗಿಲ್ಲ. ಮಕ್ಕಳಿಗೆ ಇತಿಹಾಸದ ಘಟನೆಗಳ ಬಗ್ಗೆ ನಿಜ ಹೇಳಬೇಕೋ? ಅಥವಾ ಸುಳ್ಳು ಹೇಳಬೇಕೋ?. ನಿಜ ಹೇಳಲು ಇಂದಿರಾಗಾಂಧಿ ಕಾಲದಿಂದಲೂ ಅವಕಾಶ ನೀಡಿಲ್ಲ" ಎಂದು ಆರೋಪಿಸಿದರು.
"ನಾನು ಎನ್ಸಿಇಆಟಿಯಲ್ಲಿ ಸೇವೆ ಸಲ್ಲಿಸುವಾಗ ಪಠ್ಯ ಪುಸ್ತಕ ಪರಿಷ್ಕರಣೆಗೆ ಇಂದಿರಾ ಸರ್ಕಾರ ಸಮಿತಿ ರಚನೆ ಮಾಡಿತ್ತು. ಅ ಸಮಿತಿಯಲ್ಲಿ ನಾನು ಇದ್ದೆ. ಅದರೆ ಪಠ್ಯ ಪುಸ್ತಕದಲ್ಲಿ ಅನೇಕ ಅನಗತ್ಯ ವಿಚಾರಗಳಿವೆ ಅಂತಾ ಸಮಿತಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿ ಹೇಳಿದದರು. ಅನಗತ್ಯ ವಿಚಾರ ಯಾವುದು? ಎಂಬ ಉದಾಹರಣೆ ಕೊಡಿ ಅಂತ ನಾನು ಪ್ರಶ್ನೆ ಮಾಡಿದ್ದೆ" ಎಂದು ಹೇಳಿದರು.
ಯಾವುದೇ ಐಡಿಯಾಲಜಿ ಇರಬಾರದು: "ವಿದ್ಯಾಭ್ಯಾಸದಲ್ಲಿ ಸತ್ಯ ಇರಬೇಕು. ಯಾವುದೇ ಐಡಿಯಾಲಜಿ ಇರಬಾರದು. ವಾಜಪೇಯಿ ಬಂದಾಗ ತಿದ್ದಲು ಮುಂದಾದರು. ಆದರೆ ಗಲಾಟೆ ಆರಂಭಿಸಿದರು ಅವರ ಬಲ ಬಲಾ ಕಡಿಮೆಯಿತ್ತು. ಅವರು ತಿದ್ದುವುದನ್ನು ನಿಲ್ಲಿಸಿದರು" ಎಂದು ಎಸ್. ಎಲ್. ಭೈರಪ್ಪ ತಿಳಿಸಿದರು.
"ಮೋದಿ ಅಧಿಕಾರಕ್ಕೆ ಬಂದಾಗ ನಡೆದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸ್ಸು ಚಳುವಳಿ ಮಾದರಿಯಲ್ಲೇ ಪಠ್ಯಪುಸ್ತಕ ಗಲಾಟೆಯು ಸಹ ನಡೆಯುತ್ತಿದೆ. ಬೇರೆ ಬೇರೆ ರೂಪದಲ್ಲಿ ಗಲಾಟೆ ಮಾಡಿಸುತ್ತಿದ್ದಾರೆ, ಮುಂದೆಯೂ ಮಾಡಿಸುತ್ತಾರೆ" ಎಂದು ಆರೋಪಿಸಿದರು.
"ಔರಂಗಜೇಬ್ ದೇಶದಲ್ಲಿ ಅನೇಕ ದೇವಾಲಯಗಳನ್ನು ನೆಲಸಮ ಮಾಡಿದ. ದೇವಾಲಯಗಳ ಮೇಲೆ ಅಕ್ರಮಣ ಮಾಡಿದ ಅಂತೆಲ್ಲಾ ಪುಸ್ತಕದಲ್ಲಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕಾ ಅಂತಿದ್ದರು. ಹಾಗಿದ್ದರೆ ಔರಂಗಜೇಬ್ ಮಾಡಿದ್ದು ಸರಿನಾ? ಎಂಬ ಪ್ರಶ್ನೆಗೆ ಉತ್ತರಿಸಲೇ ಇಲ್ಲ" ಎಂದರು.
"ಮತ್ತೆ-ಮತ್ತೆ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನ ಸಮಿತಿಯಿಂದಲೇ ತೆಗದು ಹಾಕಿದರು. ಪಠ್ಯ ಪುಸ್ತಕದಲ್ಲಿ ಸತ್ಯ ಹೇಳಲು ಬಹಳ ಕಾಲದಿಂದ ಬಿಡುತ್ತಿಲ್ಲ. ಇನ್ನು ಮೈಸೂರು ಭಾಗದಲ್ಲಿ ಟಿಪ್ಪು ವಿಚಾರದಲ್ಲೂ ಇದೇ ರೀತಿ ಆಗಿದೆ. ಆತ ಕೊಡಗು, ಮಲಬಾರ್, ಮೇಲುಕೋಟೆಯಲ್ಲಿ ಸಹಸ್ರಾರು ಮಂದಿ ಹಿಂದೂಗಳನ್ನು ಕೊಂದಿದ್ದ" ಎಂದು ಎಸ್. ಎಲ್. ಭೈರಪ್ಪ ದೂರಿದರು.
ಸಚಿವರ ಮನೆ ಮೇಲೆ ದಾಳಿ; ಸಚಿವ ಬಿ. ಸಿ. ನಾಗೇಶ್ ನಿವಾಸದ ಮೇಲೆ ನಡೆದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್. ಎಲ್. ಭೈರಪ್ಪ, "ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ನಾಗೇಶ್ ಮನೆ ಸುಟ್ಟು ಹಾಕಲು ಹೋಗಿದ್ದರು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ?" ಎಂದು ಪ್ರಶ್ನಿಸಿದರು.