ವಿಷ ಪ್ರಸಾದ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ಕೇಸ್ ದಾಖಲು
ಮೈಸೂರು, ಜನವರಿ 7: ಹನೂರು ತಾಲೂಕು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿ 17 ಜನರ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಇನ್ನು ಮುಂದೆ ಕೊಳ್ಳೇಗಾಲ ನ್ಯಾಯಾಲಯದ ಬದಲು ಚಾಮರಾಜನಗರ ಜಿಲ್ಲಾ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ ಹಾಗೂ ದೊಡ್ಡಯ್ಯ ತಂಬಡಿ ಅವರ ವಿರುದ್ಧ ಕೊಲೆ (302), ಕೊಲೆ ಯತ್ನ(307), ಒಳಸಂಚು (120ಬಿ) ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಸೆಕ್ಷನ್ ಗಳೊಂದಿಗೆ ಎಸ್ಸಿ, ಎಸ್ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಸೆಕ್ಷನ್ ಗಳನ್ನೂ ಒಳಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆ ಮತ್ತು ಮುಂದಿನ ಪ್ರಕ್ರಿಯೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಬಸವರಾಜ ಅವರು ಎಸ್ಸಿ, ಎಸ್ಟಿ ಪ್ರಕರಣದ ವಿಶೇಷ ನ್ಯಾಯಾಲಯದಲ್ಲಿ ನಡೆಸಿಕೊಡಲಿದೆ.
'ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ'
ಎಸ್ ಸಿ, ಎಸ್ ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ಜಿಲ್ಲೆಯಲ್ಲೇ ಘಟಿಸಿದರೂ ಅದರ ವಿಚಾರಣೆ ನಿಯಮಾವಳಿಯಂತೆ ಚಾಮರಾಜನಗರ ವಿಶೇಷ ನ್ಯಾಯಾಲಯದಲ್ಲೇ ನಡೆಯಬೇಕಿದೆ. ಅದರಂತೆ ಈ ಆರೋಪಿಗಳ ವಿಚಾರಣೆಯನ್ನು ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ವರ್ಗಾಯಿಸಲಾಗಿದೆ.
ಈಗ ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ
ಆರೋಪಿಗಳನ್ನು ಜ.3 ರಂದು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ನ್ಯಾಯಾಧೀಶರು ಜ.16ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಈ ಇಡೀ ಪ್ರಕರಣ ಈಗ ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆಗೊಂಡಿರುವುದರಿಂದ ಚಾಮರಾಜನಗರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಪೊಲೀಸರು ಜ.16ರಂದು ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರುಪಡಿಸಲಿದ್ದಾರೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲದ ಎದುರು ತಮಿಳುನಾಡಿನ ಭಕ್ತೆ ಕಣ್ಣೀರಿಟ್ಟಿದ್ದೇಕೆ?
ಇನ್ನು ವಿಚಾರಣೆ ಆರಂಭವಾಗಿಲ್ಲ
ಈಗ ಆರೋಪಿಗಳನ್ನು ಹಾಜರುಪಡಿಸುವ ಪ್ರಕ್ರಿಯೆಯಷ್ಟೇ ನಡೆಯುತ್ತಿದ್ದು, ಇನ್ನು ವಿಚಾರಣೆ ಆರಂಭವಾಗಿಲ್ಲ. ಈ ಹಂತದಲ್ಲಂತೂ ಆರೋಪಿಗಳನ್ನು ಖುದ್ದು ಕರೆತರುವ ಅಗತ್ಯವಿಲ್ಲ. ವಿಸಿ ಮುಖಾಂತರವೇ ಹಾಜರುಪಡಿಸಿದರೆ ಸಾಕೆಂದು ಸಭೆಯಲ್ಲಿ ತಿಳಿಸಲಾಗಿತ್ತು ಎನ್ನಲಾಗಿದೆ.
ವಿಷಪ್ರಸಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪ್ರತಿಭಟನೆ
ಮೃತಪಟ್ಟವರಲ್ಲಿ 10 ಮಂದಿ ಎಸ್ಸಿ, ಎಸ್ಟಿ
ಸುಳ್ವಾಡಿ ವಿಷಪ್ರಸಾದ ಘಟನೆಯಲ್ಲಿ ಮೃತಪಟ್ಟ 17 ಜನರಲ್ಲಿ 10 ಮಂದಿ ಎಸ್ಸಿ, ಎಸ್ಟಿಗೆ ಸೇರಿದವರು. ಇದಲ್ಲದೆ ಲಿಂಗಾಯತ, ಮಡಿವಾಳ ಇತರ ಜನಾಂಗದವರೂ ಸಾವನ್ನಪ್ಪಿದ್ದಾರೆ.
ಪುರಸ್ಕರಿಸಿದ ನ್ಯಾಯಾಲಯ
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಪೊಲೀಸ್ ತನಿಖಾತಂಡ ಕೊಳ್ಳೇಗಾಲ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ನ್ಯಾಯಾಲಯ ಇದನ್ನು ಪುರಸ್ಕರಿಸಿದೆ.