ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ ಚಾಮುಂಡಿ ಬೆಟ್ಟ ಉಳಿಸಿ
ಮೈಸೂರು, ಮೇ 24 : ಮೈಸೂರಿನ ಮುಕುಟ ಮಣಿ, ಪವಿತ್ರ ಕ್ಷೇತ್ರ ಚಾಮುಂಡೇಶ್ವರಿ ನೆಲೆ ನಿಂತ ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡುವ ಸರ್ಕಾರದ ನಿರ್ಧಾರಕ್ಕೆ ಮೈಸೂರಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಸೇರಿದಂತೆ ಹಲವು ಹಿರಿಯರು ಮತ್ತು ಸಂಘಟನೆಗಳು ಚಾಮುಂಡಿಬೆಟ್ಟವನ್ನು ಚಾಮುಂಡಿಬೆಟ್ಟವಾಗಿಯೇ ಉಳಿಸುವಂತೆ ಆಗ್ರಹಿಸಿದ್ದಾರೆ. ಅಭಿವೃದ್ಧಿ ನೆಪದಲ್ಲಿ ಚಾಮುಂಡಿ ಬೆಟ್ಟದ ಅಂದ ಕೆಡಿಸುತ್ತಾರೆ ಎಂಬ ಅಳಲು ಇವರದು. ['ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ']
"ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ ಚಾಮುಂಡಿ ಬೆಟ್ಟ ಉಳಿಸಿ" ಎಂದು ಆಗ್ರಹಿಸಿ 'ಅರಿವು' ಸಂಸ್ಥೆಯು ಚಾಮುಂಡಿಬೆಟ್ಟದ ಪಾದದ (ಮೆಟ್ಟಿಲು ಹತ್ತುವ ಮಾರ್ಗದಲ್ಲಿ) ಬಳಿ ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮೆಸೇಜ್ ಚಳವಳಿಯನ್ನು ಆರಂಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (9448054400) ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ (9845050100) ಅರಣ್ಯ ಸಚಿವ ರಮಾನಾಥರೈ (94484685769) ಅವರಿಗೆ ಪರಿಸರ ಉಳಿಸಿ ಕಾಂಕ್ರಿಟ್ ಕಾಮಗಾರಿ ನಿಲ್ಲಿಸಿ ಎಂಬ ಮೆಸೇಜ್ನ್ನು ರವಾನಿಸುವ ಮೂಲಕ ವಿನೂತನ ಪ್ರತಿಭಟನೆ ಆರಂಭಿಸಲಾಗಿದೆ. [ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರಸಂಹಿತೆ ಜಾರಿ?]
ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸುವ ಮೂಲಕ ಪರಿಸರ ನಾಶಕ್ಕೆ ಸರ್ಕಾರ ಮುಂದಾಗಿರುವುದನ್ನು ಪ್ರತಿಭಟಿಸಿರುವ ಹಲವರು ಈಗಾಗಲೇ ಮೆಸೇಜ್ ಚಳವಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ, ಚಾಮುಂಡಿ ಬೆಟ್ಟವು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಕಿರೀಟವಿದ್ದಂತೆ, ಪಾರಂಪರಿಕತೆಗಳ ಇತಿಹಾಸವಿದೆ, ತಾಪಮಾನವನ್ನು ನಿಯಂತ್ರಿಸುವಲ್ಲಿ ಚಾಮುಂಡಿ ಬೆಟ್ಟ ಪ್ರಮುಖ ಪಾತ್ರ ವಹಿಸಿದೆ, ಚಾಮುಂಡಿ ಬೆಟ್ಟ ಉಳಿಸಿ ಹೋರಾಟವು ಮುಂದಿನ ದಿನಗಳಲ್ಲಿ ಕಾವೇರಿ ಹೋರಾಟಕ್ಕೆ ಹೇಗೆ ಜನಾಕ್ರೋಶ ವ್ಯಕ್ತವಾಯಿತೋ ಅದೇ ರೀತಿಯಲ್ಲಿ ಮೈಸೂರಿಗರು ರಸ್ತೆಗಿಳಿಯಲಿದ್ದಾರೆ. ಚಾಮುಂಡಿಬೆಟ್ಟ ಉಳಿಸಲು ಹಸಿರು ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಲು, ಅರಿವು ಸಂಸ್ಥೆಯ ಮೂಲಕ ಎಲ್ಲ ಸಂಘಸಂಸ್ಥೆಗಳ ಮೂಲಕ ಮುಂದಾಗಬೇಕು ಎಂದರು.
ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಮೈಸೂರು ಸಂಸ್ಥಾನದ ಕುಲದೇವತೆ, ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ನೆಲಸಿರುವ ಮೈಸೂರಿನ ಚಾಮುಂಡಿ ಬೆಟ್ಟ, ಧಾರ್ಮಿಕ ಕ್ಷೇತ್ರವಾಗಿ ಪ್ರವಾಸಿ ತಾಣವಾಗಿ ರಾಜ್ಯ ಸರ್ಕಾರಕ್ಕೆ 18 ಕೋಟಿಯಿದ್ದ ಆದಾಯವನ್ನು ಈ ವರ್ಷ 23 ಕೋಟಿ ರೂ.ಗೆ ಹೆಚ್ಚಿಸಿದೆ. ಚಾಮುಂಡಿಬೆಟ್ಟ ಚಾಮುಂಡಿಬೆಟ್ಟವಾಗಿಯೇ ಉಳಿಯಲಿ ಎಂದು ಆಶಿಸಿದರು.
ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಸನ್ನಗೌಡ, ನೂರಾರು ವರ್ಷಗಳಿಂದ ಭಕ್ತಿ ಮತ್ತು ನೆಮ್ಮದಿಯ ಮೋಕ್ಷದಿಂದ ಧಾರ್ಮಿಕ ಕ್ಷೇತ್ರವಾಗಿದ್ದ ಚಾಮುಂಡಿಬೆಟ್ಟವನ್ನು ಮೋಜುಮಸ್ತಿಯ ವ್ಯಾಪಾರಿಕರಣದ ಕೇಂದ್ರವಾಗಿ ಮಾಡಲು ಹೊರಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪಾರಂಪರಿಕ ಮೈಸೂರನ್ನು ಉಳಿಸುವ ಕಡೆ ಸರ್ಕಾರ ಸುಸ್ಥಿರ ಅಭಿವೃದ್ಧಿಯ ಕಡೆ ಚಿಂತಿಸಬೇಕು. ಅದನ್ನು ಬಿಟ್ಟು ಏಕಾಏಕಿ ಕಾಂಕೀಟ್ನಂತಹ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿರುವುದಕ್ಕೆ ನಮ್ಮ ಅರಿವು ಸಂಸ್ಥೆಯ ವತಿಯಿಂದ ಹಸಿರು ನ್ಯಾಯಾಲಯದಲ್ಲಿ ಕಾನೂನಿನ ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದರು.