ಮೈಸೂರಿನ 'ಸರಸ್ವತಿ' ಚಿತ್ರಮಂದಿರ ಇನ್ನು ನೆನಪು ಮಾತ್ರ
ಮೈಸೂರು, ಸೆಪ್ಟೆಂಬರ್ 21; ಇನ್ನು ಮುಂದೆ ಮೈಸೂರಿನ 'ಸರಸ್ವತಿ' ಚಿತ್ರಮಂದಿರದ ಮುಂದೆ 'ಹೌಸ್ಫುಲ್' ಎಂಬ ಬೋರ್ಡ್ ಕಾಣುವುದಿಲ್ಲ. ಕಾರಣ ಕೋವಿಡ್ ಹಾಗೂ ಲಾಕ್ ಡೌನ್ ಪರಿಣಾಮ ಈ ಚಿತ್ರಮಂದಿರವನ್ನು ಮುಚ್ಚಲಾಗುತ್ತಿದೆ.
ಮೈಸೂರು ಎಂದರೆ ಅದು ಸಾಂಸ್ಕೃತಿಕ ನಗರಿ. ಸಿನಿಮಾ ಕ್ಷೇತ್ರಕ್ಕೆ ಸಾಹಸಿಸಿಂಹ ವಿಷ್ಣುವರ್ಧನ್, ಹಿರಿಯ ನಟ ಅಶ್ವತ್ಥ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಾಕಷ್ಟು ಕಲಾವಿದರನ್ನು ಮೈಸೂರು ಕೊಡುಗೆಯಾಗಿ ನೀಡಿದೆ.
ಆಟ ನಿಲ್ಲಿಸಿದ ಮೈಸೂರಿನ ಹಳೆಯ ಶಾಂತಲಾ ಚಿತ್ರಮಂದಿರ
ಇಂತಹ ಹಿನ್ನೆಲೆ ಇರುವ ಕಲಾ ತವರೂರು ಮೈಸೂರಿನಲ್ಲಿ ಒಂದೊಂದೇ ಚಿತ್ರಮಂದಿರಗಳು ತೆರೆಮರೆಗೆ ಸರಿಯುತ್ತಿರುವುದು ಸಿನಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಕೊರೊನಾ ಮತ್ತು ಲಾಕ್ಡೌನ್ನಿಂದ ಕಳೆದ ಒಂದೂವರೆ ವರ್ಷದಿಂದ ಚಿತ್ರಮಂದಿರಗಳು ಸರಿಯಾಗಿ ತೆರೆಯದ ಕಾರಣ ಮಾಲೀಕರಿಗೆ ತಮ್ಮ ಸಿಬ್ಬಂದಿಗೆ ಸಂಬಳ ಕೊಟ್ಟು ಥಿಯೇಟರ್ ನಡೆಸಲು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರಮಂದಿರಗಳು ಮುಚ್ಚುವ ಹಂತಕ್ಕೆ ಬಂದಿವೆ. ಸದ್ಯ ಮೈಸೂರಿನ ಮತ್ತೆರಡು ಚಿತ್ರಮಂದಿರ ಮುಚ್ಚುವ ಆಲೋಚನೆಯಲ್ಲಿವೆ.
ಕನ್ನಡ ಸಿನಿಮಾಗಳಷ್ಟೇ ಪ್ರದರ್ಶನ; 1990ರಲ್ಲಿ ಆರಂಭವಾದ 'ಸರಸ್ವತಿ' ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳನ್ನಷ್ಟೇ ಇಲ್ಲಿಯವರೆಗೂ ಪ್ರದರ್ಶನ ಮಾಡಿರುವ ಹೆಗ್ಗಳಿಕೆ ಹೊಂದಿದೆ. ಬಹುತೇಕ ಪುನೀತ್ ರಾಜ್ ಕುಮಾರ್ ಸಿನಿಮಾಗಳ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.
ಅಲ್ಲದೆ, ಬಹುತೇಕ ಎಲ್ಲಾ ಸ್ಟಾರ್ಗಳ ಸಿನಿಮಾಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ. ಕಡೆಯದಾಗಿ ದರ್ಶನ ಅಭಿನಯದ 'ರಾಬರ್ಟ್' ಚಿತ್ರ ಸರಸ್ವತಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು.
ಉಪಹಾರ್ ಚಿತ್ರಮಂದಿರ ಕೇಸ್: ಅನ್ಸಾಲ್ ಸೋದರರಿಗೆ ರಿಲೀಫ್
ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಒಂದೊಂದೆ ಚಿತ್ರಮಂದಿರಗಳನ್ನು ಮುಚ್ಚಲಾಗುತ್ತಿದೆ. ಮೈಸೂರು ನಗರದಲ್ಲಿ 16 ಚಿತ್ರಮಂದಿರ ಇತ್ತು. ಕೋವಿಡ್ಗೆ ಮುನ್ನ ರಣಜಿತ್, ಓಪೇರಾ, ಸ್ಟರ್ಲಿಂಗ್, ಶಾಲಿಮಾರ್ ಚಿತ್ರಮಂದಿರವನ್ನು ಮುಚ್ಚಲಾಯಿತು.
ಕೋವಿಡ್ ನಂತರ ಶ್ರೀನಾಗರಾಜ್, ಶಾಂತಲಾ, ಲಕ್ಷ್ಮಿ, ಸರಸ್ವತಿ ಥಿಯೇಟರ್ ಮುಚ್ಚಲಾಗಿದೆ. ಇದೀಗ ಕೇವಲ 8 ಸಿನಿಮಾ ಮಂದಿರಗಳಷ್ಟೇ ಮೈಸೂರಿನಲ್ಲಿ ಇವೆ.
ಕೋವಿಡ್ 19 ಲಾಕ್ ಡೌನ್: ಅಪರಾಧ ಕೃತ್ಯಗಳಿಗೆ ರಜೆ ಘೋಷಣೆ ಮಾಡಿದ ಕ್ರಿಮಿನಲ್ಗಳು!
ರಾಜ್ಯದಲ್ಲಿ 81 ಚಿತ್ರಮಂದಿರ ಕ್ಲೋಸ್; ಹಾಗೇ ನೋಡಿದರೆ ರಾಜ್ಯದಲ್ಲೂ ಸಿನಿಮಾ ಮಂದಿರಗಳ ಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ 630 ಚಿತ್ರಮಂದಿರಗಳಿದ್ದು, ಸದ್ಯ 81 ಚಿತ್ರಮಂದಿಗಳನ್ನು ಮುಚ್ಚಲಾಗಿದೆ. ರಾಜ್ಯದಲ್ಲಿ ಸಿನಿಮಾ ಮಂದಿರಕ್ಕೆ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ತೆರಿಗೆ ಇದೆ. ಸರಕಾರಕ್ಕೆ ಚಿತ್ರಮಂದಿರ ಉಳಿಸುವ ಆಸಕ್ತಿ ಇಲ್ಲ. 2021-22 ಆಸ್ತಿ ತೆರಿಗೆ ಮನ್ನಾ ಮಾಡಿರುವುದು ಬಿಟ್ಟರೆ ಚಿತ್ರಮಂದಿರ ಉಳಿವಿಗೆ ಬೇರೆ ಕೆಲಸ ಆಗಿಲ್ಲ ಎಂಬುದು ಮಾಲೀಕರ ದೂರು.
ಒಟಿಟಿ ಪ್ಲ್ಯಾಟ್ ಫಾರಂ ಬಂದಮೇಲೆ ಜನ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಆಸಕ್ತಿ ಕಳೆದುಕೊಂಡಿದ್ದಾರೆ. ಮೊಬೈಲ್ ಹಾಗೂ ಮನೆಯಲ್ಲೇ ಹೋಂ ಥಿಯೇಟರ್ನಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಿದ್ದಾರೆ. ಮಾಲ್ಗಳ ಸಂಸ್ಕೃತಿ ಜೊತೆಗೆ ಕೊರೊನಾ ಲಾಕ್ಡೌನ್ ಸಿನಿಮಾ ಮಂದಿರ ಮುಚ್ಚಲು ಪ್ರಮುಖ ಕಾರಣ ಎನ್ನುತ್ತಾರೆ ಥಿಯೇಟರ್ ಮಾಲೀಕರು. ಮೊದಲೆಲ್ಲಾ ಮನರಂಜನೆ ಎಂದರೆ ಸಿನಿಮಾ ಎಂಬ ಕಲ್ಪನೆ ಇತ್ತು. ಆದರೆ, ಇಂದು ಆ ಪರಿಕಲ್ಪನೆ ಬದಲಾಗಿದೆ ಎನ್ನುತ್ತಾರೆ ಸಿನಿ ಪ್ರೇಕ್ಷಕರು.
''ಕಳೆದ ಒಂದು ವರ್ಷ ಅವಧಿಯಲ್ಲಿ ಮೈಸೂರಿನ ಮೂರು ಪ್ರತಿಷ್ಠಿತ ಚಿತ್ರಮಂದಿರಗಳು ಬಂದ್ ಆಗಿವೆ. ಬಹು ವಿಶಾಲವಾದ ದೊಡ್ಡ ಚಿತ್ರಮಂದಿರ ಎಂದೇ ಪ್ರಸಿದ್ಧವಾಗಿದ್ದ ಸರಸ್ವತಿ ಚಿತ್ರಮಂದಿರಕ್ಕೂ ಲಾಕ್ ಡೌನ್ ಬಿಸಿ ತಟ್ಟಿದೆ. ಶಾಂತಲಾ, ಲಕ್ಷ್ಮಿ ಚಿತ್ರಮಂದಿರ ಬಂದ್ ಬಳಿಕ ಇದೀಗ ಸರಸ್ವತಿ ಚಿತ್ರಮಂದಿರವೂ ಬಂದ್ ಆಗಿದೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ'' ಎಂದು ಕನ್ನಡ ಚಲನಚಿತ್ರ ಪ್ರದರ್ಶಕರ ಮಹಾಮಂಡಲ್ ಉಪಾಧ್ಯಕ್ಷ ಎಂ. ಆರ್. ರಾಜಾರಾಂ ಹೇಳಿದ್ದಾರೆ.