ಕುತೂಹಲ ಮೂಡಿಸಿದ ಜಿಟಿಡಿ, ಸಾರಾ ಮಹೇಶ್ ಭೇಟಿ!
ಮೈಸೂರು, ಜುಲೈ 25; 2 ತಿಂಗಳಿನಲ್ಲಿ ತಮ್ಮ ರಾಜಕೀಯ ಹೆಜ್ಜೆ ಕುರಿತು ಸ್ಪಷ್ಟನೆ ನೀಡುವೆ ಎಂದಿದ್ದ ಶಾಸಕ ಜಿ. ಟಿ. ದೇವೇಗೌಡ ಇದೀಗ ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಜೆಡಿಎಸ್ನಿಂದ ಮಾನಸಿಕವಾಗಿ ದೂರವಾಗಿ, ಬೇರೆ ಪಕ್ಷ ಸೇರ್ಪಡೆಯಾಗುವ ಇಚ್ಚೆ ವ್ಯಕ್ತಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಏಕಾಏಕಿ ಸಾರಾ ಮಹೇಶ್ ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ತಮ್ಮ ಮಾತೃಪಕ್ಷಕ್ಕೆ ಹೋಗುವ ಲಕ್ಷಣ ಕಾಣುತ್ತಿದೆ ಎಂಬ ಸುದ್ದಿ ಇದೆ.
ಒಕ್ಕಲಿಗರು ಜೆಡಿಎಸ್ ಪರ ಎಂದ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು
ಜಲದರ್ಶಿನಿ ಅತಿಥಿಗೃಹದಲ್ಲಿ ಜಿ. ಟಿ. ದೇವೇಗೌಡರೊಂದಿಗೆ ಸಾ. ರಾ. ಮಹೇಶ್ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರ ಭೇಟಿ ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ. ಟಿ. ದೇವೇಗೌಡ, ಹುಣಸೂರು ಕ್ಷೇತ್ರದಿಂದ ಅವರ ಪುತ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ. ಡಿ. ಹರೀಶ್ಗೌಡರು ಜೆಡಿಎಸ್ನಿಂದ ಕಣಕ್ಕಿಳಿಯಲು ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದೇ ವಿಚಾರವಾಗಿ ಮಾತುಕತೆ ನಡೆದಿದೆ ಎನ್ನುವುದು ಸುದ್ದಿ.
ಇಬ್ಬರು ನಾಯಕರ ಭೇಟಿಗೆ ಜುಲೈ 31ರಂದು ಕೆ. ಆರ್. ನಗರ ತಾಲೂಕಿನಲ್ಲಿ ಆಯೋಜಿಸಿರುವ ಕೆಂಪೇಗೌಡ ಜಯಂತಿಯ ಆಹ್ವಾನ ಪತ್ರಿಕೆ ವೇದಿಕೆಯಾಗಿದೆ. ತಮ್ಮ ಕ್ಷೇತ್ರದಲ್ಲಿ ಆಯೋಜಿಸಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಸಾ. ರಾ. ಮಹೇಶ್, ಜಿ. ಟಿ. ದೇವೇಗೌಡರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.
ಸದ್ಯ ಜಿ. ಟಿ. ದೇವೇಗೌಡ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲ. ಇತ್ತ ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರೆ ಎಂಬ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹಾಗಂತ ಬಿಜೆಪಿ ಸಂಗವೂ ತೊರೆದಿಲ್ಲ. ಈ ಎಲ್ಲಾ ಕಾರಣಗಳಿಂದ ಅವರ ನಡೆ ಬಗ್ಗೆ ಯಾರಿಗೂ ಏನು ತಿಳಿಯದಾಗಿದೆ.
ಇತ್ತೀಚೆಗಷ್ಟೇ ಬೇಸರಗೊಂಡು ಜಿ. ಟಿ. ದೇವೇಗೌಡರು ಪಕ್ಷದಿಂದ ದೂರ ಉಳಿದಿದ್ದರು. ಇದೀಗ ಅವರು ಸಾ. ರಾ. ಮಹೇಶ್ರನ್ನು ಭೇಟಿ ಆಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ ಇವರಿಬ್ಬರ ನಡುವೆ ಚರ್ಚೆ ನಡೆದಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.
ಮುಂಬರುವ ಚುನಾವಣೆಗಳಿಗೆ ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಜಿ. ಟಿ. ದೇವೇಗೌಡರ ಪಯಣ ಯಾವ ಕಡೆ ಎಂಬುದನ್ನು ಅವರು ಇನ್ನು ಬಿಟ್ಟುಕೊಟ್ಟಿಲ್ಲ.