ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ತವರಲ್ಲೇ ಮರಳು ದಂಧೆ
ಮೈಸೂರು, ಫೆಬ್ರವರಿ,27: ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ತವರು ಕ್ಷೇತ್ರದಲ್ಲೇ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯಿಂದ ಮರಳು ತೆಗೆಯುವ ದಂಧೆಗೆ ಕಡಿವಾಣ ಬೀಳದಿರುವುದು ದುರಂತದ ಸಂಗತಿ.
ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ ಕಾವೇರಿ ನದಿ ಒಡಲು ಬಗೆದು ಮರಳು ಹೊರ ತೆಗೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಜಿಲ್ಲೆಯ ಟಿ. ನರಸೀಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯಿಂದ ಮರಳು ತೆಗೆಯುವ ದಂಧೆ ನಿರಂತರವಾಗಿ ಮುಂದುವರೆದಿದೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಟಿ. ನರಸೀಪುರ ತಾಲೂಕಿನ ಮಾದಾಪುರ ಮತ್ತು ಕೃಷ್ಣಾಪುರ ಗ್ರಾಮದ ಕಾವೇರಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಗಣಿಗಾರಿಕೆಗೆ ಬಳಸುತ್ತಿದ್ದ 19 ಕೊಪ್ಪರಿಕೆ ಯಂತ್ರಚಾಲಿತ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.[ಅಕ್ರಮ ಮರಳು ದಂಧೆ ವಿರುದ್ಧ ಏಕಾಂಗಿಯಾಗಿ ದನಿ ಎತ್ತಿದ ರೈತ]
ಸಬ್ ಇನ್ಸ್ ಪೆಕ್ಟರ್ ಎಂ.ಶಿವಣ್ಣ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, 'ದಾಳಿಯ ಸಂದರ್ಭ ಈ ದಂಧೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳ ಸುಳಿವು ಸಿಕ್ಕಿಲ್ಲ. ರಾತ್ರಿ ಸಮಯದಲ್ಲಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಇವರು ಪೊಲೀಸರಿಗೆ ಮರಳು ದಂಧೆಯ ಮಾಹಿತಿ ದೊರೆತಿದೆ ಎಂದು ತಿಳಿಯುತ್ತಿದ್ದಂತೆ ಕೊಪ್ಪರಿಕೆಗಳನ್ನು ನದಿಯೊಳಗೆ ಮುಚ್ಚಿಟ್ಟು ನಾಪತ್ತೆಯಾಗಿದ್ದಾರೆ. ಇದನ್ನು ಪತ್ತೆ ಹಚ್ಚಿದ ಪೊಲೀಸರು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ.