ವಿಷಪ್ರಸಾದ ಪ್ರಕರಣ: ಸಾಲೂರು ಮಠದ ಶ್ರೀಗಳು ಹೇಳಿದ್ದೇನು ?
ಮೈಸೂರು, ಡಿಸೆಂಬರ್ 17 : ಸುಳ್ವಾಡಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ಸಾಲೂರು ಮಠದ ಹಿರಿಯ ಶ್ರೀಗಳಾದ ಇಮ್ಮಡಿ ವೇದಬ್ರಹ್ಮ ಗುರುಸ್ವಾಮಿಗಳು ಮತ್ತು ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರನ್ನು ವಿಚಾರಣೆಗೊಳಪಡಿಸಿತ್ತು.
ಮಠಕ್ಕೆ ಆಗಮಿಸಿದ ಡಿವೈಎಸ್ಪಿ ತಂಡ ವಿಶೇಷವಾಗಿ ಇಮ್ಮಡಿ ಮಹದೇವಸ್ವಾಮಿ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿತು. ಈ ಕುರಿತಾಗಿ ಮಾತಾನಾಡಿದ ಶ್ರೀಗಳು, ಸುಳ್ವಾಡಿ ಮಾರಮ್ಮ ದೇವಸ್ಥಾನಕ್ಕೆ ಸಾಲೂರು ಮಠಕ್ಕೆ ದಶಕಗಳ ಅವಿನಾಭಾವ ಸಂಬಂಧ ಇದೆ. ನಾನು ಮಾರಮ್ಮನ ಪ್ರಸಾದಕ್ಕೆ ವಿಷ ಹಾಕಿಲ್ಲ. ಟ್ರಸ್ಟ್ ನಲ್ಲಿ ಯಾವುದೇ ಒಡಕಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಷ ಪ್ರಸಾದ ಪ್ರಕರಣ: ಊರಿಗೆ ಕಿಚ್ಚುಗುತ್ತಿ ಎಂಬ ಹೆಸರು ಬಂದಿದ್ದು ಹೇಗೆ?
ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವನ್ನಪ್ಪಿದ ಪ್ರಕರಣದಲ್ಲಿ ತಮ್ಮ ಹೆಸರು ಕೂಡ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಹ್ಮೇಶ್ವರ ದೇವಸ್ಥಾನದವರೆಗೂ ಮಾರಮ್ಮ ದೇವಸ್ಥಾನದವರೆಗೆ ನಡುವೆ ಸುಮಾರು ಎರಡು ದಶಕಗಳ ಹಿಂದೆ ಗಲಾಟೆ ನಡೆದಿದ್ದು ಅದನ್ನು ಹೊರತುಪಡಿಸಿದರೆ ದೇವಸ್ಥಾನದಲ್ಲಿ ಬೇರೆ ಯಾವುದೇ ಗಲಾಟೆಗಳು ನಡೆದಿಲ್ಲ ಎಂದರು.
ಸಾಲೂರು ಮಠಕ್ಕೆ ಸುಳ್ವಾಡಿ ಮಾರಮ್ಮ ದೇವಸ್ಥಾನ ನಡುವೆ 30 ವರ್ಷಗಳ ಅವಿನಾಭಾವ ಸಂಬಂಧವಿದೆ. ಆ ದೇವಸ್ಥಾನವನ್ನು ಕಟ್ಟಿದವರೇ ನನ್ನನ್ನು ಟ್ರಸ್ಟ್ ನ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಕೂಡ ಶಂಕುಸ್ಥಾಪನೆ ಸಮಾರಂಭಕ್ಕೆ ಹೋಗದೇ ಇದ್ದುದರ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು , ಟ್ರಸ್ಟ್ ನ ಎಲ್ಲರೂ ಸೇರಿಯೇ ದೇವಸ್ಥಾನ ಜೀರ್ಣೋದ್ಧಾರ ಮಾಡುವ ತೀರ್ಮಾನ ಕೈಗೊಂಡಿದ್ದೆವು. ಶಂಕು ಸ್ಥಾಪನೆ ದಿನಾಂಕವನ್ನು ನಾನೇ ನಿಗದಿಪಡಿಸಿದ್ದೆ.
ಪ್ರಸಾದಕ್ಕೆ ಬಳಸುವ ನೀರಿಗೆ ಕೀಟನಾಶಕ ಬೆರೆಸಲಾಗಿತ್ತು: ಐಜಿಪಿ ಮಾಹಿತಿ
ಕಾರ್ಯಕ್ರಮಕ್ಕೆ ಮಠದ ಹಿರಿಯ ಸ್ವಾಮೀಜಿ ಅವರನ್ನು ಕಳುಹಿಸಲಾಗಿತ್ತು. ಅಂದು ಶುಕ್ರವಾರವಾಗಿದ್ದು ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ನಾನು ತಡವಾಗಿ ಹೋಗಿದ್ದೆ. ಆದರೆ ನಾನು ದೇವಸ್ಥಾನ ತಲುಪುವುದರೊಳಗಾಗಿ ಅಲ್ಲಿ ಪ್ರಸಾದ ಸೇವಿಸಿ ಭಕ್ತರು ಸಾವನ್ನಪ್ಪಿರುವ ಬಗ್ಗೆ ನನಗೆ ಭಕ್ತಾದಿಗಳು ತಿಳಿಸಿದರು.
ದೇವಸ್ಥಾನದಲ್ಲಿ ಗಲಾಟೆ ಆಗುತ್ತಿರುವುದರಿಂದ ದೇವಸ್ಥಾನಕ್ಕೆ ಹೋಗುವುದು ಬೇಡ ಎಂದು ಭಕ್ತಾದಿಗಳೇ ಹೇಳಿದ್ದರಿಂದ ನಾನು ಹೋಗಲಿಲ್ಲ. ಸಾವುಗಳಿಗೆ ಸಾಂತ್ವನ ಹೇಳುವುದು ನಮ್ಮ ಧರ್ಮ. ಆದರೆ ಈ ಪ್ರಕರಣ ಬೇರೆಯದೇ ರೀತಿಯಲ್ಲಿ ತಿರುವು ಪಡೆದುಕೊಂಡಿದ್ದರಿಂದ ನಾನು ಎಲ್ಲಿಗೂ ಹೋಗದೆ ಮಠದಲ್ಲೇ ಇದ್ದೇನೆ ಎಂದು ತಿಳಿಸಿದರು.
ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ
ಈ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಸಾವಿರ ರೂ ಟ್ರಸ್ಟ್ ನಿಂದ ನೀಡಬೇಕು ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಇಮ್ಮಡಿ ಮಹದೇವಸ್ವಾಮಿಗಳು ತಿಳಿಸಿದರು.