ವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆ
ಮೈಸೂರು, ಡಿಸೆಂಬರ್ 19: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣದ ಶಂಕುಸ್ಥಾಪನೆ ವೇಳೆ ಪ್ರಸಾದದಲ್ಲಿ ವಿಷ ಬೆರೆಸಿ 15 ಜೀವಗಳನ್ನು ಬಲಿ ತೆಗೆದುಕೊಂಡ ಆರೋಪಿಗಳು ಪೊಲೀಸರ ವಶದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಂಗಳವಾರ ಬೆಳಿಗ್ಗೆಯೇ ಪೊಲೀಸರು ದೇವಾಲಯ ಟ್ರಸ್ಟ್ ನ ವ್ಯವಸ್ಥಾಪಕ ಮಾದೇಶ್ ಪತ್ನಿ ಅಂಬಿಕಾ ಎಂಬಾಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇಲ್ಲಿಂದ ಒಂದೊಂದೇ ಸತ್ಯಾಂಶ ಹೊರ ಬಿದ್ದಿದೆ ಎನ್ನಲಾಗಿದೆ. ಕೊಳ್ಳೇಗಾಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಆತ ವಿಷವನ್ನು ಅಂಬಿಕಾಳಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತಿನ್ನುವ ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ: ತಪ್ಪೊಪ್ಪಿಕೊಂಡ ಮಹಿಳೆ?
ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪಿ ಸುಳ್ವಾಡಿ ದೊಡ್ಡಯ್ಯ(38) ಎಂದು ಹೇಳಲಾಗುತ್ತಿದೆ. ಮೂಲತಃ ತಮಿಳುನಾಡಿನ ಬರಗೂರು ಮೂಲದವನಾದ ಈತ ನಾಲ್ಕೈದು ವರ್ಷಗಳಿಂದ ಈಚೆಗೆ ಕಿಚ್ಚುಗುತ್ತು ಮಾರಮ್ಮನ ದೇಗುಲದ ಎಡಪಾಶ್ರ್ವದಲ್ಲಿರುವ ನಾಗದೇವತೆಯ ಅರ್ಚಕನಾಗಿದ್ದ. ನಾಲ್ಕೈದು ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲೂ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಾಲೂರು ಮಠದ ಕಿರಿಯ ಸ್ವಾಮೀಜಿ ಶ್ರೀ ಇಮ್ಮಡಿ ಮಹದೇವ, ದೇವಾಲಯದ ವ್ಯವಸ್ಥಾಪಕ ಮಾದೇಶ, ಮಾದೇಶನ ಹೆಂಡತಿ ಅಂಬಿಕಾ ಸೂಚನೆ ಮೇರೆಗೆ ದೊಡ್ಡಯ್ಯ ಪ್ರಸಾದದಲ್ಲಿ ವಿಷ ಬೆರೆಸಿದ್ದಾನೆ ಎನ್ನಲಾಗಿದೆ. ಇವನಿಗೆ ಅಡುಗೆಭಟ್ಟ ಪುಟ್ಟಸ್ವಾಮಿ ಸಾಥ್ ನೀಡಿದ್ದ ಎನ್ನಲಾಗಿದೆ.
ಎರಡನೇ ಬಾರಿ ವಿಚಾರಣೆ
ಶ್ರೀ ಇಮ್ಮಡಿ ಮಹದೇವಸ್ವಾಮಿ ಅವರನ್ನು ಮಂಗಳವಾರ ಎರಡನೇ ಬಾರಿ ವಿಚಾರಣೆ ನಡೆಸಲಾಗಿದ್ದು, ಅವರನ್ನು ಕೊಳ್ಳೇಗಾಲದಲ್ಲಿರುವ ಸಾಲೂರು ಮಠದ ಐಟಿಐ ಕಾಲೇಜಿನ ಒಳಗೆ ಇರಿಸಿ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಸಾರ್ವಜನಿಕರು ಗುಂಪುಗೂಡಿದ ಪರಿಣಾಮ, ಸ್ವಾಮೀಜಿಯನ್ನು ರಾತ್ರಿ 11 ಗಂಟೆ ವೇಳೆಯಲ್ಲಿ ಮಾಂಬಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇಲ್ಲಿಗೆ ಐಜಿಪಿ ಶರತ್ ಚಂದ್ರ ತೆರಳಿದ್ದಾರೆ.
ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ ? ಸ್ವಾಮೀಜಿಗೂ, ಈಕೆಗೂ ಏನು ಸಂಬಂಧ ?
ಸ್ವಾಮೀಜಿಯೇ ಪ್ರಮುಖ ಆರೋಪಿ
ಇದನ್ನು ನೋಡಿದರೆ ಸ್ವಾಮೀಜಿಯೇ ಪಮುಖ ಆರೋಪಿ ಎಂಬುದು ಸ್ಪಷ್ಟವಾಗುವಂತಿದೆ. ಅಂಬಿಕ ಎಂಬಾಕೆಯನ್ನು ಮಂಗಳವಾರ ರಾತ್ರಿ 11 ಗಂಟೆ ನಂತರ ಕೊಳ್ಳೇಗಾಲದಲ್ಲಿರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಹೋಗಲಾಗಿದ್ದು. ಅಲ್ಲಿ ಆಕೆಯಿಂದ ಹಲವು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಖಚಿತಪಡಿಸಿದ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ
ವಿಷಪ್ರಸಾದ ಸೇವಿಸಿ ಅಸ್ವಸ್ಥರಾದವರ ಜೊತೆ ಮೈಸೂರು ಜೆಎಸ್ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ವಾಡಿ ದೊಡ್ಡಯ್ಯ(38) ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗುತ್ತಿದ್ದಂತೆ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆ
ಮುಂದುವರೆದ ವಿಚಾರಣೆ
ದೇವಾಲಯದ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಾಲೂರು ಮಠದ ಶ್ರೀ ಇಮ್ಮಡಿ ಮಹದೇವಸ್ವಾಮಿ, ಟ್ರಸ್ಟಿಗಳಾದ ಚಿನ್ನಪ್ಪಿ, ದೇವಾಲಯದ ವ್ಯವಸ್ಥಾಪಕ ಮಾದೇಶ ಇನ್ನಿತರರಲ್ಲದೆ ಈ ಟ್ರಸ್ಟಿನ ಹೊಂಡರಬಾಳು ನೀಲಕಂಠ ಶಿವಾಚಾರ್ಯಸ್ವಾಮಿ ಸಹಿತ ಒಟ್ಟು 10 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.ಸುಳ್ವಾಡಿಯ ಅನೇಕರನ್ನು ವಿಚಾರಣೆಗೆ ಒಳಪಡಿಸಿ ಕೆಲವರನ್ನು ವಾಪಸ್ ಕಳಿಸಿದ್ದು, ಈಗ ವಿಚಾರಣೆ ಮಾಡುತ್ತಿರುವ 10 ಮಂದಿಯನ್ನು ಅದರಲ್ಲೂ ಟ್ರಸ್ಟ್ ಒಳಗಿರುವವರನ್ನು ಪೊಲೀಸರು ಮತ್ತೆ ಮತ್ತೆ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.