ಮೈಸೂರಿಗೆ ಕಳೆನೀಡಿದ Rally for Rivers ಅಭಿಯಾನ
ಮೈಸೂರು, ಸೆಪ್ಟೆಂಬರ್ 8 : ಇಂದಿನ ಪರಿಸರವನ್ನು ಕಾಪಾಡಿಕೊಳ್ಳುವುದೇ ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಬಹುದೊಡ್ಡ ಆಸ್ತಿ ಎಂದು ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.
ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾದ Rally for rivers ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನಮಗೆ ಸಮಸ್ಯೆಯೂ ಗೊತ್ತಿದೆ, ಅದಕ್ಕೆ ಪರಿಹಾರವು ಗೊತ್ತಿದೆ. ಆದರೆ ಅದನ್ನು ಜಾರಿಗೊಳಿಸುವುದು ಮಾತ್ರ ಗೊತ್ತಾಗುತ್ತಿಲ್ಲ" ಎಂದರು.
Rally for Rivers: ಕೆ ಆರ್ ಎಸ್ ಹಿನ್ನೀರಿನಲ್ಲಿ ಸದ್ಗುರು ಪೂಜೆ
"ನಮ್ಮಲ್ಲಿ ಉಳಿಸುವುದು ಹಾಗೂ ಅಭಿವೃದ್ಧಿ ಪಡಿಸುವುದರ ನಡುವೆ ವ್ಯತ್ಯಾಸಗಳಿವೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈಗ ಇರೋದು ಒಂದು ಸೆಲ್ಫಿ ಜೀವನ. ಇನ್ನೊಂದು ಸೆಲ್ಫಿಶ್ ಜೀವನ. ಇದು ಬದಲಾಗಬೇಕು. ಈ Rally ಗೂ ಮುನ್ನ ನಾನು 16 ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅವರೆಲ್ಲರೂ 15 ದಿನದಲ್ಲಿ ಉತ್ತರಿಸಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು. ಇದು ನಮ್ಮ ಆಂದೋಲನಕ್ಕೆ ಸಿಕ್ಕ ಮೊದಲ ಜಯ" ಎಂದರು.
"ಮಿಸ್ಕಾಲ್ ಕೊಟ್ಟರೆ ನದಿ ಉಕ್ಕೋದಿಲ್ಲ ಅಂತ ನನಗೂ ಗೊತ್ತಿದೆ. ಆದರೆ ಮಿಸ್ಕಾಲ್ನಿಂದ ಒಂದು ಶಾಸನ ರಚನೆಯಾಗಬೇಕಿದೆ. ಅದು ಈ ಆಂದೋಲನದ ಮೂಲಕ ಆಗಲಿದೆ. ನೀರಿಗಾಗಿ ಒಂದು ಶಾಸನ ರಚನೆಯಾಗಿ ಅದು ನಮ್ಮೆಲ್ಲರ ಬಳಕೆಗೆ ಬರಬೇಕಿದೆ" ಎಂದು ತಿಳಿಸಿದರು.
"ನನಗೆ ಮೈಸೂರಿಗೆ ಬರುವುದು ಖುಷಿ ಕೊಡುತ್ತದೆ. ಯಾತಕ್ಕಾಗಿ rally ಮಾಡುತ್ತಿದ್ದೇವೆ? ನಮ್ಮ ಸ್ವಾರ್ಥಕ್ಕಾಗಿ ನದಿಗಳನ್ನು ನುಂಗಿದ್ದೇವೆ, ತಮಿಳುನಾಡಿನಲ್ಲಿ ಮೂರು ನದಿಗಳು ಮರೆಯಾಗಿದೆ. ದೇಶದಾದ್ಯಂತ ನದಿಗಳ ರಕ್ಷಣೆಗಾಗಿ ನಾವು ಅಂದೋಲನ ಮಾಡುತ್ತಿದ್ದೇವೆ. ದೇಶದ ಸಂವಿಧಾನದಲ್ಲಿ ನದಿ ರಕ್ಷಣೆಗಾಗಿ ಕಾನೂನು ಆಗಬೇಕು. ನಮ್ಮ ಈ ಪ್ರಯತ್ನಕ್ಕೆ ಸಹಕರಿಸಿ" ಎಂದು ಕೋರಿದರು.
ಇದು ನಿರಂತರ ಪ್ರಕ್ರಿಯೆ
ಮುಂದಿನ ಯುವ ಪೀಳಿಗೆಗೆ ಸಹಾಯಕವಾಗಲಿದೆ. ಇದನ್ನು ಒಂದು ದಿನದಲ್ಲಿ ಸಾಧಿಸಲು ಸಾಧ್ಯವಿಲ್ಲ. ಇದು ನಿರಂತರ ಪ್ರಕ್ರಿಯೆ, ಇದಕ್ಕೆ ಎಲ್ಲರ ಸಹಕಾರ ಮುಖ್ಯ. ಮುಂದಿನ 25-30 ವರ್ಷಗಳಲ್ಲಿ ಆಗುವ ಪರಿಸ್ಥಿಯನ್ನು ಯಾರೂ ಅರಿಯಲು ಸಾಧ್ಯವಿಲ್ಲ. ಅದಕ್ಕೆ ನಾವು ಪ್ರತಿ ಹಂತದಲ್ಲಿಯೂ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ವೀರೇಂದ್ರೆ ಹೆಗ್ಗಡೆ ಬೆಂಬಲ
Rally for rivers ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಅವರು ಸದ್ಗುರು ಒಂದು ಎಚ್ಚರಿಕೆ ಗಂಟೆಯನ್ನು ನಮ್ಮ ಮುಂದೆ ಬಾರಿಸಿದ್ದಾರೆ. ಇದರಿಂದ ನಾವು ಹಾಗೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ. ಸದ್ಗುರುಗಳು ವಾಸ್ತವವನ್ನು ಮರೆಯದ ಗುರುಗಳು. ನಮ್ಮ ದೇಶದ ನದಿಗಳಿಗಾಗಿ ಅವರು ನಾಯಕತ್ವ ವಹಿಸಿದ್ದಾರೆ. ಸದ್ಗುರುಗಳ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ" ಎಂದರು.
ಗಿಡ ನೀಡಿದ ಸಾಲು ಮರದ ತಿಮ್ಮಕ್ಕ
ಇದಕ್ಕೆ ಸಾಲುಮರದ ತಿಮ್ಮಕ್ಕ ಸದ್ಗುರು ಜಗ್ಗಿವಾಸುದೇವ ಅವರಿಗೆ ಗಿಡ ನೀಡಿ ಬೆಂಬಲ ಸೂಚಿಸಿದರು. ಇದೇ ಸಂದರ್ಭ ಡ್ರಾಮ ಜೂನಿಯರ್ಸ್ ಪುಟಾಣಿ ಅಚಿಂತ್ಯ ಎಲ್ಲರೂ ಮಿಸ್ ಕಾಲ್ ಕೊಡಿ, ಎಲ್ಲರೂ ಗಿಡ ಬೆಳೆಸಿ ಮಳೆ ಬರಲು ಸಹಾಯ ಮಾಡಿ ಎಂದು ಹಾಸ್ಯದ ಮೂಲಕವೇ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
ಉಪಸ್ಥಿತಿ
ಸಭೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಸಂಸದ ಪ್ರತಾಪ್ ಸಿಂಹ, ಗೋಲ್ಡನ್ ಸ್ಟಾರ್ ಗಣೇಶ್, ಶಾಸಕರಾದ ಪುಟ್ಟಣ್ಣಯ್ಯ, ಎಂ. ಕೆ.ಸೋಮಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.