ಮೈಮುಲ್ ಅವ್ಯವಹಾರದ ವಿರುದ್ಧ ಬೀದಿಗಿಳಿಯಲೂ ಸಿದ್ಧ; ಸಾರಾ ಮಹೇಶ್
ಮೈಸೂರು, ಮೇ 20: ಮೈಮುಲ್ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಈಚೆಗೆ ಆಡಿಯೊ ಬಾಂಬ್ ಬಿಡುಗಡೆ ಮಾಡಿದ್ದ ಶಾಸಕ ಸಾ.ರಾ. ಮಹೇಶ್ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಮುಲ್ ಸಿಬ್ಬಂದಿ ನೇಮಕಾತಿ ಅವ್ಯವಹಾರ ಆರೋಪದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಒಂದು ಕಡೆ ತನಿಖೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ, ಇನ್ನೊಂದು ಕಡೆ ನೇಮಕಾತಿ ನಡೆಯುತ್ತಿದೆ ಅಂತಿದ್ದಾರೆ. ಇದು ಗೊಂದಲಕಾರಿ ಆಗಿದೆ. ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಮೈಮುಲ್ ಎದುರು ಜೆಡಿಎಸ್ ನಾಯಕ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ ಶಾಸಕ ಸಾ.ರಾ.ಮಹೇಶ್.
"ಮೇಲಧಿಕಾರಿ ವಿರುದ್ಧ ತನಿಖೆ ಸಾಧ್ಯವಿದೆಯೇ?"
ಮೈಮುಲ್ ನೇಮಕಾತಿ ಸಮಿತಿಯಲ್ಲಿ ಜಾಯಿಂಟ್ ರಿಜಿಸ್ಟ್ರಾರ್ ಇದ್ದಾರೆ. ಅಲ್ಲಿ ತನಿಖೆ ಮಾಡಲಿಕ್ಕೆ ಮಡಿಕೇರಿಯ ಜಿಲ್ಲಾ ರಿಜಿಸ್ಟ್ರಾರ್ ಅನ್ನು ಕಳಿಸುತ್ತಾರೆ. ಕೆಳ ಅಧಿಕಾರಿ ಮೇಲಧಿಕಾರಿಯ ವಿರುದ್ಧ ತನಿಖೆ ಮಾಡಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದರು. ನೇಮಕಾತಿಯ ಬಗ್ಗೆ ಮೌಲ್ಯ ಮಾಪನ ಮಾಡಲು ಏಜೆನ್ಸಿಗೆ ಪಾರದರ್ಶಕವಾಗಿ ಕೆಲಸ ಕೊಟ್ಟಿಲ್ಲ. ಮೈಮುಲ್ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್ ಕೊಟ್ಟಿಲ್ಲ, ಕೀ ಆನ್ಸರ್ ಬಿಟ್ಟಿಲ್ಲ. ಮೊನ್ನೆ ರಿಸಲ್ಟ್ ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಯ ಹುಟ್ಟಿದ ದಿನಾಂಕ ನಮೂದಿಸಿದರೆ ಮಾತ್ರ ಆ ಫಲಿತಾಂಶ ಓಪನ್ ಆಗುವುದು. ಬೇರೆಯವರು ಯಾರೂ ನೋಡಬಾರದು ಎಂದು ಈ ರೀತಿ ಮಾಡಿದ್ದಾರೆ. ಇದರ ಜೊತೆಗೆ ಕೆಪಿಎಸ್ ಸಿ ಇರಬಹುದು ಯಾವುದೇ ಸಂಸ್ಥೆಗಳಿರಬಹುದು. ಸಂದರ್ಶನ ಮುಗಿದು ನೇಮಕಾತಿ ಪ್ರಕ್ರಿಯೆ ಆಗೋವರೆಗೂ ಯಾರು ಬೇಕಾದರೂ ಮಾಹಿತಿಗಳನ್ನು ವೆಬ್ ಸೈಟಿನಲ್ಲಿ ನೋಡಬಹುದು. ಆದರೆ ಮೈಮೂಲ್ ನ ಮಾಹಿತಿಯನ್ನು ವೆಬ್ ಸೈಟಿನಲ್ಲಿ ಇನ್ನೂ ಹಾಕಿಲ್ಲ ಎಂದು ಆರೋಪಿಸಿದರು.
ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್ ಆರೋಪ
ಈ ವೇಳೆಯಲ್ಲಿ ಸಂದರ್ಶನ ಮಾಡುವ ತರಾತುರಿ ಏನಿತ್ತು?
ನಿಮಗೆ ಈ ನೇಮಕಾತಿಯನ್ನು ರದ್ದು ಮಾಡಲು ಇದಕ್ಕಿಂತ ತನಿಖೆ ಬೇಕಾ? ಈ ಸಂದರ್ಶನವನ್ನು ರದ್ದು ಮಾಡಲಿಕ್ಕೆ ಆಡಿಯೋ ಕ್ಯಾಸೆಟ್ ಕೊಟ್ವಲ್ಲ. ಇದಕ್ಕಿಂತ ಬೇಕಾ? ಪಾರದರ್ಶಕತೆಯಲ್ಲಿ ನೇಮಕಾತಿ ಮಾಡಿ, ಯಾರು ಅರ್ಹರಿದ್ದಾರೆ ಅವರಿಗೆ ಸಿಗಲಿ. ನಾವು ಬೇಡ ಅನ್ನಲ್ಲ. ಯಾಕೆ ನಾವು ಇಷ್ಟೊಂದು ಹೋರಾಟ ಮಾಡ್ತಿದ್ದೇವೆ ಅಂದರೆ, ಇಡೀ ದೇಶದಲ್ಲಿ ಜನರೇ ಓಡಾಡದ ಸಂದರ್ಭದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲಾಗದೇ ಇದ್ದ ಸಂದರ್ಭದಲ್ಲಿ ಸಂದರ್ಶನ ಫಿಕ್ಸ್ ಮಾಡಿದ್ರಲ್ಲ ಅಂತಹ ತರಾತುರಿ ಏನಿತ್ತು. ಅದಾದರೂ ಹೇಳಿ ಎಂದು ಆಗ್ರಹಿಸಿದರು. 165 ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲೇ 25 ಹೆಚ್ಚುವರಿ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದರು.
"ಹಣ ಕೇಳಿದವರ ಹೆಸರು ಬಹಿರಂಗಪಡಿಸುತ್ತೇನೆ"
ಮೈಮುಲ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಬರೆದ ಅಭ್ಯರ್ಥಿ ಚೈತ್ರ ಮಾತನಾಡಿ, ಬಿಡುಗಡೆ ಮಾಡಲಾದ ಆಡಿಯೋದಲ್ಲಿರುವುದು ಪರಿಪೂರ್ಣ ಸತ್ಯ. ಈ ಅವ್ಯವಹಾರ ಎಲ್ಲರಿಗೂ ತಿಳಿಯಬೇಕು. ನನ್ನ ಜೊತೆ ಮಾತನಾಡಿರೋರು ದುಡ್ಡು ಕೊಟ್ಟು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ನನಗೆ 52 ಅಂಕ ಬಂದಿದೆ ಅಂತಾರೆ. ಈಗ 100ರ ಮೇಲೆ ಬಂದಿದೆ ಅಂತ ಇದ್ದಾರೆ. ನನಗೂ ಹಣ ನೀಡುವಂತೆ ಕೇಳಿದ್ದರು. ಆದರೆ ನಾನು ನೀಡಲಿಲ್ಲ. ಈ ಪ್ರಕರಣ ಇಲ್ಲಿಗೆ ನಿಲ್ಲಲಿಲ್ಲ ಎಂದಾದರೆ ನಾನು ನನ್ನ ಬಳಿ ಹಣ ಕೇಳಿದವರ ಹೆಸರು ಬಹಿರಂಗಪಡಿಸುತ್ತೇನೆ. 28ರಿಂದ 45 ಸಾವಿರದ ಸಂಬಳಕ್ಕೆ 20 ಲಕ್ಷ ಬೇಡಿಕೆ ಇಟ್ಟಿದ್ದರು. ಆಡಿಯೋ ಬಿಡುಗಡೆಯಾದ ಮೇಲೆ ನನಗೆ ಬೆದರಿಕೆ ಕಾಲ್ ಗಳು ಬಂದಿವೆ. ನನಗೆ ಈ ವಿಚಾರ ಬಿಟ್ಟುಬಿಡಿ ಅಂತ ಹೇಳಿ ಕಾಲ್ ಮಾಡಿ ಒತ್ತಡ ಹಾಕಿದ್ದರು ಎಂದು ಅರೋಪಿಸಿದರು.
ಮೈಮುಲ್ ನೌಕರರ ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ; ಆಡಿಯೋ ಬಿಡುಗಡೆ ಮಾಡಿದ ಸಾರಾ ಮಹೇಶ್
"ಬೀದಿಯಲ್ಲಿ ಹೋರಾಟ ಮಾಡಲು ಸಿದ್ಧ"
ಮೈಮುಲ್ ಅಧ್ಯಕ್ಷರಿಗೆ ಡೈರಿ ಬಗ್ಗೆ ಏನ್ ಗೊತ್ತು? ಮೈಮುಲ್ ಅಧ್ಯಕ್ಷ ಸಿದ್ದೇಗೌಡರಿಗೆ ಸೊನ್ನೆಯೇ ಗೊತ್ತಿಲ್ಲ. ಸಿದ್ದೇಗೌಡರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಏನ್ ಗೊತ್ತು.
ಇವರನ್ನು ಮೈಮುಲ್ ಗೆ ಅಧ್ಯಕ್ಷರನ್ನಾಗಿ ಮಾಡಿಬಿಟ್ಟಿದ್ದಾರೆ. ಅಂಥವರ ಬಳಿ ಇನ್ನೇನು ನಿರೀಕ್ಷೆ ಮಾಡೋಕೆ ಆಗುತ್ತೆ. ಅವರ ಮಾತುಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ. ಎಲ್ಲಾ ಅಕ್ರಮಗಳ ಬಗ್ಗೆ ನನ್ನ ಬಳಿ ಸಿಡಿ ಇದೆ. ಮುಂದಿನ ದಿನಗಳಲ್ಲಿ ಇದೆಲ್ಲವನ್ನು ಬಿಡುಗಡೆ ಮಾಡುತ್ತೇನೆ. ನಾಲ್ಕು ಹಂತದಲ್ಲಿ ಹೋರಾಟ ಮಾಡುತ್ತಿದ್ದೇವೆ.
ಮೊದಲು ಸದನದ ಒಳಗೆ ಹೋರಾಟ, ನಂತರ ನ್ಯಾಯಾಲಯದಲ್ಲಿ ಹೋರಾಟ. ಇದೀಗ ಮಾಧ್ಯಮಗಳ ಮೂಲಕ ಜನರ ಮುಂದೆ ಹೋರಾಟ. ಇದ್ಯಾವುದಕ್ಕೂ ಮಣಿಯಲಿಲ್ಲ ಅಂದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.