ಕ್ಷೇತ್ರದ ಜನರ ಸಹಾಯಕ್ಕಾಗಿ ಮನೆ ಅಡವಿಟ್ಟ ಸಾರಾ ಮಹೇಶ್
ಮೈಸೂರು, ಮೇ 14: ರಾಜಕಾರಣಿಗಳು ಜನರಿಗೆ ಸಹಾಯ ಮಾಡಲು ತಮ್ಮ ಮನೆಯನ್ನು ಅಡವಿಟ್ಟ ಉದಾಹರಣೆ ಈ ಹಿಂದೆ ಇತ್ತ ತಿಳಿದಿಲ್ಲ. ಆದರೆ, ಈಗ ಮಾಜಿ ಸಚಿವ, ಕೆಆರ್ ನಗರದ ಶಾಸಕ ಸಾರಾ ಮಹೇಶ್ ತಮ್ಮ ಮನೆ ಹಾಗೂ ಪೆಟ್ರೋಲ್ ಬಂಕ್ ಅನ್ನು ಅಡವಿಟ್ಟಿದ್ದಾರೆ.
Recommended Video
ಕೊರೊನಾ ಲಾಕ್ಡೌನ್ನಿಂದ ರಾಜ್ಯದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ತಮ್ಮ ಕ್ಷೇತ್ರದ ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ದಿನಸಿ ಕಿಟ್ ನೀಡಲು ಸಾರಾ ಮಹೇಶ್ ಮುಂದಾಗಿದ್ದಾರೆ. ಬಿಪಿಎಲ್ ಕಾರ್ಡ್ ಇರಲಿ, ಇಲ್ಲದೆ ಇರಲಿ ಕ್ಷೇತ್ರದಲ್ಲಿ ಬರುವ 72 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಿದ್ದಾರೆ.
ಮೈಮುಲ್ ನಲ್ಲಿ ಅವ್ಯವಹಾರ ಆರೋಪ; ಸಾರಾ ಮಹೇಶ್ ಬೆಂಬಲಿಸಿದ ವಿಶ್ವನಾಥ್
ಲಾಕ್ಡೌನ್ ಸಮಯದಲ್ಲಿ ಸ್ನೇಹಿತರ ಬಳಿ ಸಾಲ ಪಡೆಯಲು ಆಗದ ಕಾರಣ, ಕೆಆರ್ ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮನೆ ಹಾಗೂ ಪೆಟ್ರೋಲ್ ಬಂಕ್ ಅಡ ಇಟ್ಟಿದ್ದಾರೆ.
5.5 ಕೋಟಿ ವೆಚ್ಚದಲ್ಲಿ ಪಡಿತರ ಕಿಟ್
ಸಾರಾ ಮಹೇಶ್ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದ ಜನರಿಗೆ ಪಡಿತರ ಕಿಟ್ ಮತ್ತು ತರಕಾರಿ ನೀಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕ್ಷೇತ್ರದ ಜನರಿಗೆ ಸಹಾಯ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ 72 ಸಾವಿರ ಕುಟುಂಬವಿದ್ದು, ಎಲ್ಲರಿಗೂ ದಿನಸಿ ಕಿಟ್ ಹಾಗೂ ತರಕಾರಿ ವಿತರಣೆ ಮಾಡಿದ್ದಾರೆ. ಇದಕ್ಕಾಗಿ ಮನೆ, ಪೆಟ್ರೋಲ್ ಬಂಕ್ ಅಡವಿಟ್ಟಿದ್ದಾರೆ.
ರೈತರಿಂದ ತರಕಾರಿ ಖರೀದಿ
ಲಾಕ್ಡೌನ್ ಸಮಯದಲ್ಲಿ ರೈತರು ತಮ್ಮ ಬೆಳೆಗಳನ್ನು ಸರಿಯಾಗಿ ಮಾರಾಟ ಮಾಡಲು ಆಗುತ್ತಿಲ್ಲ. ಹೀಗಾಗಿ, ಸಾರಾ ಮಹೇಶ್ ಸುಮಾರು 15 ಸಾವಿರ ಟನ್ನಷ್ಟು ತರಕಾರಿಯನ್ನು ರೈತರಿಂದ ಖರೀದಿ ಮಾಡಿದ್ದಾರೆ. ಇದಕ್ಕೆ ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಹಣವನ್ನು ಮೇ 18ರ ಒಳಗೆ ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಈ ಹಣ ನೀಡಲು ಬ್ಯಾಂಕ್ನಲ್ಲಿ ಸಾಲ ಪಡೆದಿದ್ದಾರೆ.
ಬ್ಯಾಂಕ್ ನಲ್ಲಿ ಸಾಲ
ಜನರಿಗೆ ದಿನಸಿ ಕಿಟ್ ನೀಡಲು ಹಾಗೂ ರೈತ ಬೆಳೆದ ತರಕಾರಿ ಖರೀದಿ ಮಾಡಲು ಸುಮಾರು 3.5 ಕೋಟಿ ಆಗಬಹುದು ಸಾರಾ ಮಹೇಶ್ ಅಂದಾಜು ಮಾಡಿದ್ದರಂತೆ. ಆದರೆ, ಸದ್ಯ ಅದಕೆಲ್ಲ 5.5 ಕೋಟಿ ಖರ್ಚಾಗಿದೆ. ಲಾಕ್ಡೌನ್ ಇರುವ ಕಾರಣ ಈ ಸಮಯದಲ್ಲಿ ಅವರಿಗೆ ಸ್ನೇಹಿತರಿಂದ ಕೈಸಾಲ ಸಿಗಲಿಲ್ಲ. ಆಗ ಬ್ಯಾಂಕ್ನಿಂದ ಸಾಲ ತೆಗೆದುಕೊಂಡು, ಜನರಿಗೆ ಸಹಾಯ ಮಾಡಿದ್ದಾರೆ.
ಜನರ ಋಣ ತೀರಿಸುವ ಅವಕಾಶ
''ಕ್ಷೇತ್ರದ ಜನರು ವೋಟು ಹಾಕಿ, ಗೆಲ್ಲಿಸಿ ಅಧಿಕಾರಿ ಕೊಟ್ಟು ಜವಾಬ್ದಾರಿ ನೀಡಿದ್ದಾರೆ. ಅವರ ಊರುಗಳಿಗೆ ಹೋದಾಗ ಪ್ರೀತಿಯಿಂದ, ಗೌರವದಿಂದ ಹಾರ ಹಾಕಿ ಸ್ವಾಗತ ಮಾಡುತ್ತಾರೆ. ಅಂತವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ. ಇದು ಅಳಿಲು ಸೇವೆ ಅಷ್ಟೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ'' ಎಂದು ಸಾರಾ ಮಹೇಶ್ ಹೇಳಿಕೊಂಡಿದ್ದಾರೆ.