ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ!
ಮೈಸೂರು, ಜನವರಿ 08: "ನನ್ನನ್ನ ಮೈಸೂರು ಹೈಕಮಾಂಡ್ ಅಂತಾ ಯಾರು ಹೇಳಿದ್ದು?. ಓಹ್, ಜಿಟಿಡಿ ಹೇಳಿದ್ರಾ?, ಹಾಗಾದರೆ ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡೋಣ ಬಿಡಿ" ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಸಾ. ರಾ. ಮಹೇಶ್ ಹೇಳಿದರು.
ಗುರುವಾರ ಜಿ. ಟಿ. ದೇವೇಗೌಡರು, "ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ರಾಜ್ಯ ಹೈಕಮಾಂಡ್. ಅದನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ" ಎಂದು ಹೇಳಿಕೆ ಕೊಟ್ಟಿದ್ದರು. ಸಾ. ರಾ. ಮಹೇಶ್ ಅವರ ಹೆಸರು ಹೇಳದೇ ಆರೋಪಗಳನ್ನು ಮಾಡಿದ್ದರು.
ಕುಮಾರಸ್ವಾಮಿಯನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ!
ಸಾ. ರಾ. ಮಹೇಶ್ ಶುಕ್ರವಾರ ಈ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. "ಜಿಟಿಡಿ ಅವರು ಒಂದಿಷ್ಟು ಆರೋಪ ಮಾಡಿದ್ದಾರೆ. ಆದರೆ ನಮ್ಮ ಎಲ್ಲಾ ನಾಯಕರ ಜೊತೆ ಅವರು ಚೆನ್ನಾಗಿಯೇ ಇದ್ದಾರೆ" ಎಂದು ಸಾ. ರಾ. ಮಹೇಶ್ ತಿಳಿಸಿದರು.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
"ಮೊನ್ನೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದಾಗ ಜಿಟಿಡಿಯವರೇ ಮೊದಲು ಪೋನ್ ಮಾಡಿದ್ದರು. ಜಿಟಿಡಿ ಹುಟ್ಟುಹಬ್ಬದ ದಿನ ಅನಿತಕ್ಕರೇ ಪೋನ್ ಮಾಡಿದ್ದರು. ನಮ್ಮ ಯುವ ನಾಯಕ ನಿಖಿಲ್ ಅವರ ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ" ಎಂದು ಸಾ. ರಾ. ಮಹೇಶ್ ವಿವರಣೆ ನೀಡಿದರು.
ಕುತೂಹಲ ಮೂಡಿಸಿದ ದೇವೇಗೌಡ-ಡಿ.ಕೆ. ಶಿವಕುಮಾರ್ ಭೇಟಿ!
ರಾಜಕೀಯ ಭಿನ್ನಾಭಿಪ್ರಾಯ ಇರಬಹುದು
"ಸ್ವಲ್ಪ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಈ ಬಗ್ಗೆ ನಾನು ಅವರ ಜೊತೆ ಜಲದರ್ಶಿನಿಯಲ್ಲಿ ಮಾತನಾಡಿದ್ದೇನೆ. ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಜಿ. ಟಿ. ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರ ಮಗನು ಸ್ಪರ್ಧೆ ಮಾಡುತ್ತಾರೆ" ಎಂದು ಸಾ. ರಾ. ಮಹೇಶ್ ಹೇಳಿದರು.
ಜೆಡಿಎಸ್ನಲ್ಲೇ ಇರುತ್ತಾರೆ
"ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪ್ಪ, ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಯಾರಿಗೂ ಇರುವುದು ಬೇಡ. ಅವರು ಜೆಡಿಎಸ್ ಪಕ್ಷದಲ್ಲಿಯೇ ಇರುತ್ತಾರೆ. ಚುನಾವಣೆಗೂ ಮುನ್ನ ಭಿನ್ನಾಭಿಪ್ರಾಯ ಇರುವುದು ಜೆಡಿಎಸ್ನಲ್ಲಿ ಸಹಜವಾಗಿಬಿಟ್ಟಿದೆ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ. ಚುನಾವಣೆ ಬಂದ ತಕ್ಷಣ ನಾವೆಲ್ಲಾ ಒಂದಾಗುತ್ತೇವೆ" ಎಂದು ಸಾ. ರಾ. ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಜಿ. ಟಿ. ದೇವೇಗೌಡ ಉಚ್ಛಾಟನೆ
"ಜಿ. ಟಿ. ದೇವೇಗೌಡರನ್ನು ಪಕ್ಷದಿಂದ ಉಚ್ಛಾಚನೆ ಮಾಡುತ್ತೇವೆ ಎಂದು ಕುಮಾರಣ್ಣ ಆಗಲಿ, ನಾನಾಗಲಿ ಎಲ್ಲಿಯೂ ಹೇಳಿಲ್ಲ. ಜಿ. ಟಿ. ದೇವೇಗೌಡರು ಮುಖ್ಯಮಂತ್ರಿಗಳನ್ನು ಸೋಲಿಸಿದ ದೊಡ್ಡ ರಾಜಕೀಯ ಶಕ್ತಿ. ಅವರನ್ನು ನಾವ್ಯಾಕೆ ಉಚ್ಛಾಟಿಸುತ್ತೇವೆ. ಆದರೆ, ಜಿಟಿಡಿ ಅವರು ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನು ಉಚ್ಛಾಟಿಸಬೇಕಲ್ಲವೇ?" ಎಂದು ಸಾ. ರಾ. ಮಹೇಶ್ ಹೇಳಿದರು.
ಜೆಡಿಸ್ ಪಕ್ಷದಲ್ಲೇ ಇರುತ್ತೇನೆ
"ನನ್ನ ಕೊನೆ ಉಸಿರು ಇರೋವರೆಗು ನಾನು ಜೆಡಿಎಸ್ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕೆ. ಆರ್. ನಗರ ಬಿಟ್ಟು ಬೇರೆ ಎಲ್ಲೂ ನಾನು ಸ್ಪರ್ಧೆ ಮಾಡುವುದಿಲ್ಲ. ನಾನು ಎಲ್ಲಿ ರಾಜಕೀಯ ಆರಂಭಿಸಿದ್ದೇನೋ ಅಲ್ಲೇ ರಾಜಕೀಯ ನಿವೃತ್ತಿ. ಅದು ಬಿಟ್ಟು ಬೇರೆ ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ" ಎಂದು ಸಾ. ರಾ. ಮಹೇಶ್ ಸ್ಪಷ್ಟನೆ ನೀಡಿದರು.