ಎಚ್ ವಿಶ್ವನಾಥ್ ಗೆ ತಪ್ಪಿದ ಟಿಕೆಟ್; ಸಾರಾ ಮಹೇಶ್ ಏನಂದರು...
ಮೈಸೂರು, ಜೂನ್ 20: ಮಾಜಿ ಸಚಿವ ಎಚ್. ವಿಶ್ವನಾಥ್ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಾರಾ ಮಹೇಶ್, "ಎಚ್.ವಿಶ್ವನಾಥ್ ರಾಜಕೀಯದಲ್ಲಿ ದುರಂತ ಅಂತ್ಯ ಕಂಡಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ರಾಜಕೀಯದಲ್ಲಿ ಮತದಾರರಿಗೆ, ನಾಯಕರಿಗೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದರೆ ಹೀಗೆ ಆಗೋದು. ರಾಜಕಾರಣಿಗೆ ಪ್ರಾಮಾಣಿಕತೆ ಇಲ್ಲ ಅಂದ್ರೆ ಏನಾಗುತ್ತೆ ಅನ್ನೋದಕ್ಕೆ ಇವರೇ ಉದಾಹರಣೆ. ಇನ್ನು ಅವರಿಗೆ ಬಾಕಿ ಇರೋದು ಜಿಲ್ಲಾ ಪಂಚಾಯಿತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಮಾತ್ರ" ಎಂದು ವ್ಯಂಗ್ಯ ಮಾಡಿದ್ದಾರೆ.
ಎಚ್. ವಿಶ್ವನಾಥ್ಗೆ ಕೈ ತಪ್ಪಿದ ಟಿಕೆಟ್; ಸೋಮಶೇಖರ್ ಹೇಳಿದ್ದೇನು?
"ಜಿಲ್ಲೆಯ ಎಲ್ಲ ಪಕ್ಷದ ರಾಜಕಾರಣಿಗಳಿಗೆ ಇವರ ಸ್ಥಿತಿ ಸ್ಪಷ್ಟ ಉದಾಹರಣೆ. ಜೆಡಿಎಸ್ ನಾಯಕರು, ಕಾರ್ಯಕರ್ತರು ನೀಡಿದ ಭಿಕ್ಷೆಯಿಂದ ಅವರು ಎರಡು ವರ್ಷ ಚಲಾವಣೆಯಲ್ಲಿದ್ದರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಈಗ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಮುಲ್ ಅಕ್ರಮ ನೇಮಕಾತಿ ಆರೋಪ ವಿಚಾರವಾಗಿಯೂ ಪ್ರತಿಕ್ರಿಯಿಸಿ, "ಇಡೀ ಪ್ರಕ್ರಿಯೆಗೆ ಹೈ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಗೆ 3 ವಾರಗಳ ನಿಷೇದಾಜ್ಞೆ ಹೇರಿದೆ. ಕೊನೆಗೂ ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಪಾರದರ್ಶಕವಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕು. ಹಣವನ್ನ ಅಡ್ವಾನ್ಸ್ ಮಾಡಿದವರು ಬಡ್ಡಿ ಸಮೇತ ವಾಪಸ್ ಪಡೆದುಕೊಳ್ಳಿ. ಹಣ ಕಳೆದುಕೊಂಡವರ ಜೊತೆ ನಾವು ಇದ್ದೇ ಇರ್ತಿವಿ" ಎಂದು ಹೇಳಿದ್ದಾರೆ.