ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಆಟ ನಡೆಯುವುದಿಲ್ಲ; ಸಾರಾ ಮಹೇಶ್
ಮೈಸೂರು, ನವೆಂಬರ್ 28: ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಪ್ರಶ್ನಿಸಿ ಸಿಎಟಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಳಂಬದ ಬಗ್ಗೆ ಶಾಸಕ ಸಾ.ರಾ ಮಹೇಶ್ ಸಂಶಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ಪರವಾದ ವಿಚಾರದಲ್ಲಿ ಕೇವಲ ಅರ್ಧ ದಿನದಲ್ಲಿ ತೀರ್ಪು ಹೊರ ಬರುತ್ತದೆ. ಆದರೆ ಅವರ ನೇಮಕ ಪ್ರಶ್ನಿಸಿ ನಡೆಯುತ್ತಿರುವ ಸಿಎಟಿ ವಿಚಾರಣೆಯೇ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಇದು ಅನುಮಾನ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಶಾಸಕ ಮಂಜುನಾಥ್
ಜಿಲ್ಲಾಧಿಕಾರಿಗಳಿಗೆ ಬೇರೆ ಜಿಲ್ಲೆಯಲ್ಲಿ ಇದ್ದಾಗ ಸಿಎಟಿಯಲ್ಲಿ ಹತ್ತೇ ದಿನಕ್ಕೆ ತಡೆ ಸಿಗುತ್ತದೆ. ಈಗ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಐದಾರು ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಅಡ್ವೋಕೇಟ್ ಜನರಲ್ ಅವರೇ ಎರಡು ಬಾರಿ ಗೈರಾಗಿದ್ದಾರೆ. ಒಂದು ವಾರ ರಜೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಎಲ್ಲ ರೀತಿಯ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಕಾರಣ ಸೂಕ್ತ ಸಂದರ್ಭದಲ್ಲಿ ದಾಖಲೆ ಸಮೇತ ಬಹಿರಂಗಪಡಿಸಲಾಗುವುದು ಎಂದು ಹೇಳಿದರು. ಮುಂದೆ ಓದಿ...
"ರೋಹಿಣಿ ಸಿಂಧೂರಿ ಆಟ ನಡೆಯುವುದಿಲ್ಲ"
ಮೈಸೂರು ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿಯವರ ಆಟ ನಡೆಯುವುದಿಲ್ಲ. ಬೇಕಿದ್ದರೆ ರಾಜಕೀಯಕ್ಕೆ ಬರಲಿ, ಚುನಾವಣೆಗೆ ಸ್ಪರ್ಧಿಸಲಿ. ಮೈಸೂರಿನ ಜನತೆ ಸ್ವಾಭಿಮಾನದಿಂದ ಬದುಕುತ್ತಿರುವವರು. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಜನರು ಸಹಿಸುವುದಿಲ್ಲ ಎಂದು ಹರಿಹಾಯ್ದಿದ್ದಾರೆ. ಶಾಸಕ ಎಚ್.ಪಿ.ಮಂಜುನಾಥ್ ರೋಹಿಣಿ ಸಿಂಧೂರಿಯನ್ನು ಮೂರನೇ ಮಹಾರಾಣಿಯಾಗಿ ಮೆರೆಯಬೇಡಿ ಎಂದು ಹೇಳಿದ್ದಾರೆ. ಜಂಬೂಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಲು ಹೋಗಿದ್ದ ರೋಹಿಣಿ ಸಿಂಧೂರಿಯವರನ್ನು ನೋಡಿ ಮಂಜುನಾಥ್ ಆ ರೀತಿ ಹೇಳಿರಬಹುದು ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದರು.
"ಇದು ನಿಮಗೆ ಶೋಭೆ ತರುವುದಿಲ್ಲ"
ಶಾಸಕ ಮಂಜುನಾಥ್ ಗೆ ಬರೆದ ಪತ್ರವನ್ನು ಬಹಿರಂಗಪಡಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸಾ.ರಾ ಮಹೇಶ್, ಇದು ನಿಮಗೆ ಶೋಭೆ ತರುವುದಿಲ್ಲ. ಶಾಸಕರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದರೆ ಸುಮ್ಮನಿರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಸಭೆ ನಡೆಸಿದರೆ ಆಗುವ ಪರಿಣಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತವೆ ಹೊಣೆ ಎಂದು ಎಚ್ಚರಿಕೆ ನೀಡಿದರು.
"ಮೈಸೂರು ಡಿಸಿಗೆ ನಾಡಿನ ಪರಂಪರೆ ಕುರಿತು ತಿಳಿವಳಿಕೆ ನೀಡಿ"; ಪತ್ರ ಬರೆದ ಸಾರಾ ಮಹೇಶ್
"ಡಿಸಿಯವರು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ"
ಕೆಡಿಪಿ ಸಭೆಯಲ್ಲಿ ವೇದಿಕೆ ಮೇಲೆ ಜಿಲ್ಲಾಧಿಕಾರಿ ಕುಳಿತುಕೊಳ್ಳುವಂತಿಲ್ಲ. ಇದೀಗ ಇದರ ಪಾಲನೆ ಆಗುತ್ತಿಲ್ಲ. ಮುಖ್ಯ ಕಾರ್ಯದರ್ಶಿ ಕೂಡ ಸಚಿವರ ಪಕ್ಕದಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಇದು ಕೆಡಿಪಿ ಸಭೆಯಲ್ಲಿ ಪಾಲನೆಯಾಗಬೇಕಾದ ಶಿಷ್ಟಾಚಾರ ಎಂದು ಹೇಳಿದರು. ಕೆ.ಆರ್.ನಗರ ತಾಲೂಕಿನಲ್ಲಿ ಶಿಷ್ಟಾಚಾರ ಉಲ್ಲಂಘನೆ, ಹುಣಸೂರು ಕ್ಷೇತ್ರದ ಶಾಸಕರಿಗೆ ಬರೆದ ಪತ್ರ ಬಹಿರಂಗವಾಗಿರುವ ಬಗ್ಗೆ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸುತ್ತೇವೆ ಎಂದು ತಿಳಿಸಿದರು.
"ಡಿಸಿ ಅವರು ಪ್ರಚಾರದ ಗುಂಗಿನಲ್ಲಿದ್ದಾರೆ"
ನಾವಿಬ್ಬರೂ ಜನರ ಸೇವೆ ಮಾಡಲು ಇರುವುದು. ಆದರೆ, ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂಬುದನ್ನು ಮೊದಲು ಅರಿಯಬೇಕಿದೆ. ಶಾಸಕರ ಗಮನಕ್ಕೆ ತಾರದೆ ಶಿಷ್ಟಾಚಾರ ಉಲ್ಲಂಘಿಸಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪ್ರಚಾರದ ಗುಂಗಿನಲ್ಲಿದ್ದಾರೆ. ಉಸ್ತುವಾರಿ ಸಚಿವರು ಏನಾದರೂ ತಮ್ಮ ಬದಲಿಗೆ ಡಿಸಿಯವರೇ ಅಧಿಕಾರ ನಡೆಸಬಹುದೆಂದು ಜಿಪಿಎ ಕೊಟ್ಟಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಿದರೆ ಪರಿಣಾಮ ಏನಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲ ಎಂದು ಡಿಸಿ ವಿರುದ್ಧ ವಾಗ್ದಾಳಿ ನಡೆಸಿದರು.