ವಿಶ್ವನಾಥ್ "ಕೊಚ್ಚೆ" ಹೇಳಿಕೆಗೆ ತಿರುಗೇಟು ಕೊಟ್ಟ ಸಾರಾ ಮಹೇಶ್
ಮೈಸೂರು, ಜೂನ್ 10: "ನಾನು ಸತ್ಯ ಮಾತಾಡಿದರೆ ಅವರ ಕಣ್ಣಿಗೆ ಕೊಚ್ಚೆ ಥರ ಕಾಣುತ್ತೇನೆ. ಅವರ ದೇಹ, ಮನಸ್ಸು, ವ್ಯಕ್ತಿತ್ವ ಎಲ್ಲವೂ ಕೊಳಚೆ" ಎಂದು ಎಚ್. ವಿಶ್ವನಾಥ್ ಹೆಸರು ಹೇಳದೇ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದರು. ಸಾರಾ ಮಹೇಶ್ ಕೊಚ್ಚೆ, ಹಾಗಾಗಿ ಅದರ ಮೇಲೆ ಕಲ್ಲು ಎಸೆಯಲ್ಲ ಎಂಬ ವಿಶ್ವನಾಥ್ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.
Recommended Video
ಇವರೇ ಕಾಂಗ್ರೆಸ್ ನಲ್ಲಿದ್ದಾಗ ತಳ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯರಾಗಿ ಮಾಡಿ ಅಂತ ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಈಗ ಅವರೇ ವಿಧಾನಪರಿಷತ್ ಸದಸ್ಯ ಆಗಲು ಲಾಬಿ ಮಾಡುತ್ತಿದ್ದಾರೆ. ಇವರದು ಕೊಳಕು ರಾಜಕಾರಣ. ಕೊಳಕು ಹಾಗೂ ಕೊಳಚೆ ಮನುಷ್ಯ ಯಾರು ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಗೆ ನಾನು ಹೋಗಲ್ಲ, ನಮ್ಮ ಭರವಸೆ ಸಿಎಂ ಈಡೇರಿಸುತ್ತಾರೆ- ವಿಶ್ವನಾಥ್
ಇದೇ ಸಂದರ್ಭ ಮೈಮುಲ್ ನಲ್ಲಿ ಅಕ್ರಮ ನೇಮಕಾತಿ ಆರೋಪದ ವಿಚಾರವಾಗಿ ಮಾತನಾಡಿ, "ಹೆಚ್ಚುವರಿ 25 ಸಿಬ್ಬಂದಿ ನೇಮಕಾತಿಗೆ ಹೈಕೋರ್ಟ್ ತಡೆ ನೀಡಿದ್ದು, ನ್ಯಾಯಾಲಯದ ತಡೆಯಾಜ್ಞೆಯಿಂದ ನಮ್ಮ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ. ಇದು ಇಷ್ಟಕ್ಕೇ ನಿಲ್ಲಬಾರದು. ಇದರ ಹಿಂದಿರುವವರು ಹೊರಬರಬೇಕು. ಅಕ್ರಮ ನೇಮಕಾತಿಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ತನಿಖೆ ಆಗಬೇಕು. ಇದರ ಮೇಲೂ ಸಂದರ್ಶನ ಕರೆದರೆ ಆಗ ಹೋರಾಟ ಅನಿವಾರ್ಯವಾಗುತ್ತದೆ. ಇದೇ 29ಕ್ಕೆ ತುರ್ತು ನೋಟೀಸ್ ನೀಡುವಂತೆ ಕೋರ್ಟ್ ಹೇಳಿದೆ. ಆನಂತರ ಇಡೀ ಪ್ರಕ್ರಿಯೆ ಸ್ಥಗಿತವಾಗಲಿದೆ" ಎಂದು ತಿಳಿಸಿದರು.
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ಮಾತನಾಡಿ, ಮಕ್ಕಳು ಆತಂಕದಲ್ಲಿದ್ದಾರೆ. ಪೋಷಕರಿಗೆ ಮಕ್ಕಳ ಭವಿಷ್ಯದ ಚಿಂತೆ ಬಂದಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ನಿರ್ಧಾರಕ್ಕೆ ನಾವು ಸಹಕಾರ ನೀಡುತ್ತೇವೆ. ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಫೀಸ್ ಹಾಗೂ ಡೊನೇಷನ್ ಗೆ ಕಡಿವಾಣ ಹಾಕಬೇಕು ಎಂದರು.
ದೇವೇಗೌಡರು ರಾಜ್ಯಸಭೆ ಚುನಾವಣೆ ಬಗ್ಗೆ ಮಾತನಾಡಿ, "ಜೆಡಿಎಸ್ ಪಕ್ಷದ ಮೇಲೆ ಯಾರ ಋಣವೂ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ತುಂಬಾ ಜನ ದೇವೇಗೌಡರ ಋಣ ತೀರಿಸಬೇಕಿದೆ. ಈಗ ಯಾರ್ಯಾರು ಜೆಡಿಎಸ್ ಬಯ್ಯುತ್ತಿದ್ದಾರೆ ಅವರೆಲ್ಲದೇ ವೇಗೌಡರ ಗರಡಿಯಲ್ಲಿ ಪಳಗಿದವರೇ. ದೇವೇಗೌಡರು ರಾಜಕೀಯಕ್ಕೆ ಬರಿ ಮೇಸ್ಟ್ರಲ್ಲ, ಅವರೇ ಪ್ರಿನ್ಸಿಪಲ್ ಕೂಡ" ಎಂದು ಹೇಳಿದರು.