ಮುದ್ದಿನ ಕೋತಿಯ ದೇವಸ್ಥಾನ ಉದ್ಘಾಟಿಸಿದ ಸಾರಾ ಮಹೇಶ್
ಮೈಸೂರು, ಫೆಬ್ರವರಿ 17: ತಾವು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕೋತಿ ಮರಿ ಚಿಂಟು ನೆನಪಿಗಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಅವರ ಫಾರ್ಮ್ ಹೌಸ್ನಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಿಸಿದ್ದಾರೆ.
ಕುರಿ ಮರಿಯ ಮೇಲೆ ಚಿಂಟು ಕುಳಿತಿದ್ದ ಫೋಟೊವೊಂದರ ಆಧಾರದ ಮೇಲೆ ಚಿಂಟುವಿನ ಏಕಶಿಲಾ ಸ್ಮಾರಕವನ್ನು ನಿರ್ಮಸಲಾಗಿದ್ದು, ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.
ಪ್ರೀತಿಯ ಕೋತಿಗಾಗಿ ಮಂದಿರ ನಿರ್ಮಿಸುತ್ತಿದ್ದಾರೆ ಶಾಸಕ ಸಾ.ರಾ.ಮಹೇಶ್
ಚಿಂಟು ಜೊತೆ ಆತ್ಮೀಯತೆ ಹೊಂದಿದ್ದ ಶಾಸಕ ಸಾ.ರಾ ಮಹೇಶ್, ಜನವರಿ 1ರಂದು ಚಿಂಟು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸ ಮೊಟಕುಗೊಳಿಸಿ ತವರಿಗೆ ಓಡಿ ಬಂದಿದ್ದರು. ನಂತರ ಅಂತ್ಯಕ್ರಿಯೆ ನೆರವೇರಿಸಿದರು. ಅಲ್ಲದೆ ಜನವರಿ 11ರಂದು ಶಾಸ್ತ್ರೋಕ್ತವಾಗಿ ಚಿಂಟುವಿನ ತಿಥಿಯನ್ನು ಕೂಡ ನೆರವೇರಿಸಿದ್ದರು.
ಜನವರಿ 1ರಂದು ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಸಾ.ರಾ ಅವರ ಪ್ರೀತಿಯ ಕೋತಿ ಚಿಂಟು ಸಾವನ್ನಪ್ಪಿತ್ತು. ಇನ್ನು ಮೇಕೆ ಎರಡು ತಿಂಗಳ ಹಿಂದೆಯೇ ಸಾವನ್ನಪ್ಪಿತ್ತು. ಇವೆರಡೂ ಸ್ನೇಹಿತರಾಗಿಯೂ ಇದ್ದವು. ಹೀಗಾಗಿ ಕುರಿ ಮೇಲೆ ಕೋತಿ ಕುಳಿತಿರುವಂತೆ ಶಿಲ್ಪ ನಿರ್ಮಾಣ ಮಾಡಲಾಗಿದೆ. ಮೈಸೂರಿನ ಬ್ರಹ್ಮಕಶ್ಯಪ ಶಿಲ್ಪಕಲಾನಿಕೇತನದಲ್ಲಿ ಸುಮಾರು 2.5 ಅಡಿ ಎತ್ತರದ ಏಕಶಿಲೆಯಲ್ಲಿ ಪ್ರತಿಮೆ ಕೆತ್ತನೆ ಮಾಡಲಾಗಿದೆ.
ಚಿಂಟುವನ್ನು ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿಯೇ ದೇವಾಲಯ ತಲೆ ಎತ್ತಿದ್ದು, ಭಾನುವಾರ ದೇವಾಲಯ ಲೋಕಾರ್ಪಣೆಗೊಂಡಿದೆ. ಈ ದೇವಾಲಯ ನಿರ್ಮಾಣದ ಮೂಲಕ ತಮ್ಮ ದುಖಃ ಮರೆಯುತಿದ್ದಾರೆ ಮಹೇಶ್ ಅವರು.