ಜೆಡಿಎಸ್ನಲ್ಲಿ ಕುತೂಹಲ ಹುಟ್ಟಿಸಿದ ನಾಯಕರಿಬ್ಬರ ಭೇಟಿ!
ಮೈಸೂರು, ಡಿಸೆಂಬರ್ 13: ಕರ್ನಾಟಕ ಜೆಡಿಎಸ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೈಸೂರಿನಲ್ಲಿ ಪಕ್ಷದ ಇಬ್ಬರು ನಾಯಕರು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇದೊಂದು ಸೌಜನ್ಯದ ಭೇಟಿ ಎಂದು ಮಾಜಿ ಸಚಿವರು ಹೇಳಿದ್ದಾರೆ.
ಭಾನುವಾರ ಮಾಜಿ ಸಚಿವರಾದ ಸಾ. ರಾ. ಮಹೇಶ್ ಹಾಗೂ ಜಿ. ಟಿ. ದೇವೇಗೌಡ ಮೈಸೂರಿನ ಜಲದರ್ಶಿನಿ ಅಥಿತಿಗೃಹದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗುತ್ತಿರುವಾಗ ಉಭಯ ನಾಯಕರ ಭೇಟಿ ಚರ್ಚೆಯನ್ನು ಹುಟ್ಟುಹಾಕಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ; ದೇವೇಗೌಡರ ಸ್ಪೋಟಕ ಹೇಳಿಕೆ!
ಮಾಧ್ಯಮಗಳ ಜೊತೆ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ, "ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗುವುದಿಲ್ಲ, ಹುಣಸೂರಿಗು ಹೋಗುವುದಿಲ್ಲ" ಎಂದರು.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
"ಜೆಡಿಎಸ್ ಪಕ್ಷದಿಂದ ಹುಣಸೂರು ಕ್ಷೇತ್ರದ ಉಸ್ತುವಾರಿಯನ್ನು ನನಗೆ ಕೊಡಲಾಗಿದೆ. ಈ ವಿಚಾರ ಕೂಡ ಪಕ್ಷದ ಮೂಲಗಳಿಂದ ತಿಳಿದಿಲ್ಲ. ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಭೆಗೂ ಹಾಜರಾಗುವುದಿಲ್ಲ, ಆಹ್ವಾನವೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಕುತೂಹಲ ಮೂಡಿಸಿದ ದೇವೇಗೌಡ-ಡಿ.ಕೆ. ಶಿವಕುಮಾರ್ ಭೇಟಿ!
"ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಚಿನ್ಹೆಯ ಮೇಲೆ ನಡೆಯುವ ಚುನಾವಣೆಯಲ್ಲ. ಈ ಕಾರಣಕ್ಕಾಗಿ ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನು ಎಚ್.ಡಿ ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ" ಎಂದರು.
ಭೇಟಿಯಲ್ಲಿ ವಿಶೇಷವೇನಿಲ್ಲ; ಜಿ. ಟಿ. ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಸಾ. ರಾ. ಮಹೇಶ್, "ದೇವೇಗೌಡ ಭೇಟಿಯಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ನಾಯಕರು. ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಮುಂದೆ ನಮ್ಮ ಜೊತೆ ಬಂದೇ ಬರುತ್ತಾರೆ" ಎಂದು ಹೇಳಿದರು.
"ಕೆಲವು ದಿನಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ಇನ್ನು ಸಕ್ರಿಯರಾಗುತ್ತಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳುತ್ತೇನೆ. ಅವರು ನಮಗಿಂತ 25 ವರ್ಷ ದೊಡ್ಡವರು. ನಮ್ಮಂತವರು ತಪ್ಪು ಮಾಡಿದಾಗ ಬುದ್ಧಿ ಹೇಳುವ ಅಧಿಕಾರ ಅವರಿಗೆ ಇದೆ" ಎಂದು ಸಾ. ರಾ. ಮಹೇಶ್ ತಿಳಿಸಿದರು.
"ಕುಮಾರಸ್ವಾಮಿ ಅವರು ಜಿಟಿಡಿಯವರನ್ನು ಭೇಟಿ ಮಾಡುವ ಸಂದರ್ಭ ಬಂದಿಲ್ಲ. ಅಂತಹ ಸಂದರ್ಭ ಬಂದರೆ ಅವರು ಭೇಟಿ ಮಾಡುತ್ತಾರೆ. ಇನ್ನು ಮುಂದೆ ಎಲ್ಲವೂ ಸರಿಯಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.