''ದೈಹಿಕ, ಮಾನಸಿಕ ಸ್ಟ್ರೋಕ್ ಆಗಿದ್ದು ವಿಶ್ವನಾಥ್ಗೆ, ಯಡಿಯೂರಪ್ಪರಿಗಲ್ಲ''
ಮೈಸೂರು, ಜನವರಿ 14: ದೈಹಿಕ ಹಾಗೂ ಮಾನಸಿಕ ಸ್ಟ್ರೋಕ್ ಆಗಿರೋದು ಎಚ್.ವಿಶ್ವನಾಥ್ ಅವರಿಗೆ, ಸಿಎಂ ಯಡಿಯೂರಪ್ಪ ಅವರಿಗಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಶಾಸಕ ಮಹೇಶ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದದರು. ಎಚ್.ವಿಶ್ವನಾಥ್ ಅವರಿಗೆ ಸ್ಟ್ರೋಕ್ ಆಗಿ ಮಲಗಿದ್ದಾಗ ಚೈತನ್ಯ ತುಂಬಿದ್ದು ಜನತಾದಳ. ಆದರೆ ಪಕ್ಷಕ್ಕೆ ದ್ರೋಹ ಮಾಡಿದ್ದರ ಪರಿಣಾಮವನ್ನು ಈಗ ಎದುರಿಸಿದ್ದೀರಿ ಎಂದು ಟಾಂಗ್ ನೀಡಿದರು.
ಈ ಹಿಂದೆ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರರನ್ನು ಎಳೆದು ತರಬೇಡಿ. ಈಗಿರುವ ಎಂಎಲ್ಸಿ ಸ್ಥಾನವೂ ಹೋಗಿಬಿಡುತ್ತೆ ಎಂದು ವಿಶ್ವನಾಥ್ ಅವರ ಸಿಡಿ ಆರೋಪಕ್ಕೆ ಕೆ.ಆರ್ ನಗರ ಜೆಡಿಎಸ್ ಶಾಸಕ ಶಾಸಕ ಸಾ.ರಾ. ಮಹೇಶ್ ಲೇವಡಿ ಮಾಡಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವಕ್ಷೇತ್ರಕ್ಕೆ ಬಂದ ಎಚ್.ನಾಗೇಶ್ ಹೇಳಿದ್ದೇನು?
ಜೆಡಿಎಸ್ ತೊರೆದು ಬಿಜೆಪಿ ಜೊತೆ ಹೋದಿರಿ
ಎಚ್.ವಿಶ್ವನಾಥ್ ಒಬ್ಬ ದುರಾಸೆ ಮನುಷ್ಯ, ಬರೀ ಶಾಸಕನಾದರೆ ಸಾಕು ಅಂತಾ ಅಂಗಲಾಚಿ ಜೆಡಿಎಸ್ ಸೇರಿದಿರಿ. ಶಾಸಕನಾದ ಮೇಲೆ ಮಂತ್ರಿ ಆಗಬೇಕು ಅನ್ನೋ ದುರಾಸೆ. ಜೆಡಿಎಸ್ ತೊರೆದು ಬಿಜೆಪಿ ಜೊತೆ ಹೋದಿರಿ. ಈಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಯಡಿಯೂರಪ್ಪ ಅವರನ್ನು ಬೈಯುತ್ತಿದ್ದೀರಿ. ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲವೆಂದು ಕಿಡಿಕಾರಿದರು.
ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ
ಯಾರು ನಿಮಗೆ ಸಹಾಯ ಮಾಡ್ತಾರೋ ಅವರನ್ನೇ ನಿಂದಿಸುವುದು ಜಾಯಮಾನ. ಮತ್ತೆ ದುರಾಸೆ ಮಾಡಿದರೆ ಈಗಿರುವ ಸ್ಥಾನವೂ ಹೋಗುತ್ತೆ ಹುಷಾರ್ ಎಂದು ಎಚ್.ವಿಶ್ವನಾಥ್ಗೆ ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದರು.
ಬಿಜೆಪಿ ಸರಕಾರ ಅವಧಿಗೆ ಮುನ್ನ ಬೀಳುವುದಿಲ್ಲ, ಜೆಡಿಎಸ್ ಗಿಂತ ಜಾಸ್ತಿ ದಿನ ನಾನು ಬಿಜೆಪಿಯನ್ನು ನೋಡಿದ್ದೇನೆ. ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಪ್ರೀತಿಯಿಂದ ಗೆಲ್ಲಬಹುದೇ ಹೊರತು, ಹೆದರಿಸಿ ಬೆದರಿಸಿ ಗೆಲ್ಲಲು ಆಗಲ್ಲ. ಬಿಜೆಪಿ ಸರ್ಕಾರದ ಐದು ವರ್ಷಕ್ಕೆ ಮುಂಚೆ ಒಂದು ದಿನವೂ ಅಧಿಕಾರ ಬಿಡಲ್ಲ ಎಂದು ಜೆಡಿಎಸ್ ಶಾಸಕ ಖಚಿತವಾಗಿ ಹೇಳಿದರು.
ಸಿಎಂ ಸ್ಥಾನಕ್ಕೆ ಗೌರವವಿದೆ
ಯಡಿಯೂರಪ್ಪ ಯಾವತ್ತೂ ಮಾತು ತಪ್ಪಿಲ್ಲ. 17 ಮಂದಿ ಪೈಕಿ 15 ಮಂದಿಯನ್ನು ಮಂತ್ರಿ ಮಾಡಿದ್ದಾರೆ. ಮತ್ತಿಬ್ಬರಿಗೆ ಅವಕಾಶ ಸಿಕ್ಕಿಲ್ಲ. ಆದರೆ ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಷ್ಟೆ ಎಂದು ಶಾಸಕ ಸಾ.ರಾ. ಮಹೇಶ್ ಅವರು ಸಿಎಂ ಬಿಎಸ್ವೈ ಪರ ಬ್ಯಾಟಿಂಗ್ ಮಾಡಿ, ಮಾಜಿ ಸಚಿವ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸ್ಥಾನಕ್ಕೆ ಗೌರವವಿದೆ, ಅಂತಹ ಹುದ್ದೆಯಲ್ಲಿರೋರನ್ನು ಬ್ಲಾಕ್ಮೇಲ್ ಮಾಡುವುದು ಶೋಭೆಯಲ್ಲ. ಬಿಜೆಪಿ ಸೇರಿದಾಗ ನೀವೂ ಎಷ್ಟು ಕೋಟಿಗೆ ಮಾರಾಟವಾದಿರಿ ಅನ್ನೋದನ್ನು ಸ್ಪೀಕರ್ ಮುಂದೆಯೇ ಹೇಳಿದ್ದೇನೆ. ಈಗ ಸಿಪಿ ಯೋಗೇಶ್ವರ್ ಸೂಟ್ ಕೇಸ್ ಹೊತ್ಕೊಂಡ್ ಹೋದರು ಅಂತಾ ಹೇಳ್ತಾ ಇದ್ದೀರಲ್ಲ, ಅದು ಯಾವ ಹಣ? ಎಂದು ಪ್ರಶ್ನಿಸಿದರು.
ನಾನು ಹಿಂದೆ ಮಾಡಿದ ಆರೋಪ ಸರಿಯಾಗಿದೆ
ನಾನು ಹಿಂದೆ ಮಾಡಿದ ಆರೋಪ ಸರಿಯಾಗಿದೆ ಅಂತಾ ತಾನೇ. ನೀವೂ ಕೂಡ ಪಾರ್ಟ್ ಪೇಮೆಂಟ್ ಪಡೆದೇ ಮುಂಬೈಗೆ ಹೋಗಿದ್ದು ಅಂತಾ ಆಗಲೇ ಹೇಳಿದ್ದೆ. ವಿಶ್ವನಾಥ್ ಬೇರೊಬ್ಬರ ಮೇಲೆ ಆರೋಪ ಮಾಡುತ್ತಾ ತಾವೇ ಬಟಾ ಬಯಲಾಗುತ್ತಿದ್ದಾರೆ ಎಂದು ಎಚ್.ವಿಶ್ವನಾಥ್ ಅವರ ಆರೋಪಕ್ಕೆ ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ತಿರುಗೇಟು ಕೊಟ್ಟರು.