ಏಕಾಂಗಿಯಾಗಿ ಬಂದು ದೇವಿಯ ಕ್ಷಮೆ ಕೇಳಿದ ಸಾರಾ ಮಹೇಶ್
ಮೈಸೂರು, ಅಕ್ಟೋಬರ್ 18: ಆಣೆ ಪ್ರಮಾಣದ ರಾಜಕೀಯ ಹೈಡ್ರಾಮಾ ಬಳಿಕ ಮಾಜಿ ಸಚಿವ ಸಾರಾ ಮಹೇಶ್ ಇಂದು ಏಕಾಂಗಿಯಾಗಿ ಮತ್ತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿ ಬಳಿ ಕ್ಷಮೆ ಕೋರಿದ್ದಾರೆ.
ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ?
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ಮಾಜಿ ಸಚಿವ ಸಾರಾ ಮಹೇಶ್ ವಿಶೇಷ ಪೂಜೆ ಸಲ್ಲಿಸಿದರು. ಕೆಲಕಾಲ ಸನ್ನಿಧಿಯಲ್ಲಿ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಾಯಿಯ ಕ್ಷಮೆ ಕೇಳಲು ಬಂದೆ. ನಮ್ಮ ವೈಯಕ್ತಿಕ ವಿಚಾರಕ್ಕೆ ತಾಯಿಯನ್ನು ಸಾಕ್ಷಿ ಮಾಡಿಬಿಟ್ಟೆವು. ಇದರಿಂದ ನೋವಾಗಿದೆ. ಹೀಗಾಗಿ ಇಂದು ದೇವಿಯ ಕ್ಷಮೆ ಕೇಳಲು ಮತ್ತೆ ಬಂದೆ" ಎಂದು ಹೇಳಿದರು.
"ಮಾಧ್ಯಮಗಳ ಮೂಲಕ ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ. ಕೆಲವೊಂದು ಬಾರಿ ಎಷ್ಟೇ ದೊಡ್ಡವರಾದರೂ, ಅಧಿಕಾರದಲ್ಲಿದ್ದರೂ ಆತ್ಮ ಸಾಕ್ಷಿಯೇ ಮುಖ್ಯವಾಗುತ್ತದೆ. ಆತ್ಮಸಾಕ್ಷಿಗೆ ನೋವಾಗಿದ್ದಕ್ಕೆ ನಾನು ಬಂದೆ. ನಿನ್ನೆ ನಡೆದ ಸತ್ಯಾಸತ್ಯತೆಯನ್ನು ಅಮ್ಮನೇ ತೀರ್ಮಾನ ಮಾಡುತ್ತಾಳೆ" ಎಂದರು.
ದೈವೀಶಕ್ತಿಗೆ ಉತ್ತರ ಕೊಡಲೇಬೇಕಾದ ಪರಿಸ್ಥಿತಿ ಬರುತ್ತೆ: ಎಚ್ಡಿಕೆ ಮಾರ್ಮಿಕ ಹೇಳಿಕೆ
"ಎರಡು ತಿಂಗಳಿಂದ ನಡೆದ ಘಟನೆಯಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಅದಕ್ಕಾಗಿ ಚಾಮುಂಡಿ ತಾಯಿಯ ಕ್ಷಮೆ ಕೇಳಲು ಬಂದೆ" ಎಂದು ಸಾ.ರಾ.ಮಹೇಶ್ ಹೇಳಿಕೆ ನೀಡಿದರು.