ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡಿದ ಸಾ.ರಾ.ಮಹೇಶ್ ಹಾಗೂ ಭವಾನಿ ರೇವಣ್ಣ
ಮೈಸೂರು, ಅಕ್ಟೋಬರ್ 30: ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತು ಜಿ.ಪಂ ಸದಸ್ಯೆ ಭವಾನಿ ರೇವಣ್ಣ ಅವರ ನಡುವಿನ ಭಿನ್ನಾಭಿಪ್ರಾಯ ದೂರವಾದಂತೆ ಕಂಡು ಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರ ನಡುವೆ ಕಿತ್ತಾಟ ಆರಂಭವಾಗಿ ತಾರಕ್ಕೇರಿತ್ತು. ಇದೀಗ ಇಬ್ಬರು ಮುಖಾಮುಖಿಯಾಗುವ ಮೂಲಕ ಒಂದಾಗಿದ್ದಾರೆ.
ಬಹಳಷ್ಟು ಸಮಯಗಳ ಬಳಿಕ ಇಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು, ಜನರ ಎದುರೇ ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಹೇಳಿಕೊಳ್ಳುವ ಮೂಲಕ ರಾಜಕೀಯ ಮನಸ್ತಾಪಕ್ಕೆ ತೆರೆ ಎಳೆದಿದ್ದಾರೆ. ಇಷ್ಟಕ್ಕೂ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಟಿಕೆಟ್ ವಿಚಾರ ಎಂಬುದಂತು ನಿಜ.
ಕಬ್ಬಿಗೆ ನ್ಯಾಯಯುತ ಬೆಲೆಗೆ ಒತ್ತಾಯಿಸಿ ಮೈಸೂರಿನಲ್ಲಿ ನ.2ಕ್ಕೆ ಧರಣಿ
ಸದ್ಯ ಅವರಿಬ್ಬರು ಹೇಳುತ್ತಿರುವುದೇನೆಂದರೆ ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ, ಮಧ್ಯವರ್ತಿಗಳು ವಿನಾಕಾರಣ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಮನಸ್ತಾಪ ಮೂಡುವಂತೆ ಮಾಡಿದರು ಎಂದಿದ್ದಾರೆ.
ಪ್ರಜ್ವಲ್ ಟಿಕೆಟ್ ತಪ್ಪಿಸಲು ಸಾ.ರಾ ಮಹೇಶ್ ಕಾರಣ?
ಇತ್ತೀಚೆಗೆ ಸಾಲಿಗ್ರಾಮದ ಭಜನೆ ಮನೆಯಲ್ಲಿ ನಡೆದ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ಸಹಕಾರ ಸಂಘದ ಕಾರ್ಯಕ್ರಮಕ್ಕೆ ಶಾಸಕ ಸಾ.ರಾ ಮಹೇಶ್ ಮತ್ತು ಜಿ.ಪಂ ಸದಸ್ಯೆಯಾಗಿರುವ ಭವಾನಿ ರೇವಣ್ಣ ಅವರು ಭಾಗವಹಿಸಿದ್ದರು. ಹೀಗಾಗಿ ಕಾರ್ಯಕರ್ತರಲ್ಲಿ ಒಂದು ರೀತಿಯ ಕುತೂಹಲವೂ ಇತ್ತು.
ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ಭವಾನಿ ರೇವಣ್ಣ ಅವರು, ಹುಣಸೂರು ವಿಧಾನಸಭೆ ಚುನಾವಣೆಯಲ್ಲಿ ನನ್ನ ಮಗ ಪ್ರಜ್ವಲ್ ರೇವಣ್ಣಗೆ ಟಿಕೆಟ್ ತಪ್ಪಿಸಲು ಸಾ.ರಾ ಮಹೇಶ್ ಕಾರಣರಾಗಿದ್ದರು ಎಂಬುದನ್ನು ತಿಳಿದು ನನಗೆ ವೈಯಕ್ತಿಕವಾಗಿ ಬೇಸರವಾಯಿತು.
ಅಭಿವೃದ್ಧಿ ಕಾರ್ಯ ಗೆಲುವಿಗೆ ಕಾರಣವಾಯಿತು
ಸಾ.ರಾ.ಮಹೇಶ್ ಅವರು ಪ್ರಥಮ ಬಾರಿಗೆ ಕೆ.ಆರ್ ನಗರದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದಾಗ ಅವರ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದೇವೆ. ಸಾಲಿಗ್ರಾಮ ಅಲ್ಲದೆ ತಾಲ್ಲೂಕಿನಾದ್ಯಂತ ಕೆಲಸ ಮಾಡಿದ್ದೇವೆ. ಜತೆಗೆ ತಾಲೂಕಿನ ಹಲವು ಕಡೆ ರೇವಣ್ಣರವರು ಅಧಿಕಾರದಲ್ಲಿದ್ದಾಗ ಮಾಡಿಸಿದ್ದ ಅಭಿವೃದ್ಧಿ ಕಾರ್ಯ ಗೆಲುವಿಗೆ ಕಾರಣವಾಯಿತು. ಆ ನಂತರ ಬೇರೆ ಬೇರೆ ರೀತಿಯ ಆಡಿಯೋಗಳು ಹರಿದಾಡಿದವು. ಅದರ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ ಎಂದರು.
ಪ್ರಜ್ವಲ್ ಅವರಿಗೆ ಟಿಕೆಟ್ ಕೈ ತಪ್ಪಲು ನಾನು ಕಾರಣನಲ್ಲ
ಭವಾನಿ ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಹುಣಸೂರು ಕ್ಷೇತ್ರದಲ್ಲಿ ದೊಡ್ಡ ಸಾಹೇಬರ (ದೇವೇಗೌಡರು) ಕುಟುಂಬದವರು ಮಾತ್ರ ಗೆಲ್ಲಲು ಸಾಧ್ಯವೆಂದು ಸಹೋದರಿ ಭವಾನಿ ಅವರಿಗೆ ನಾನೇ ತಿಳಿಸಿದ್ದೆ. ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರು ಕ್ಷೇತ್ರಕ್ಕೆ ಕರೆತಂದಿದ್ದು ನಿಜ. ಆದರೆ ಪ್ರಜ್ವಲ್ ಅವರಿಗೆ ಟಿಕೆಟ್ ಕೈ ತಪ್ಪಲು ನಾನು ಕಾರಣನಲ್ಲ ಎಂದು ತಿಳಿಸಿದರು. ಮೂಲೆ ಗುಂಪಾಗಿ ಆಗ ತಾನೆ ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಬಂದಿದ್ದ (ಎಚ್.ವಿಶ್ವನಾಥ್) ವರು ಪಕ್ಷದ ವರಿಷ್ಠರ ಬಳಿ ಬೇಡಿಕೊಂಡಿದ್ದರಿಂದ ಬಿ ಫಾರಂ ಅವರ ಪಾಲಾಯಿತು. ಹೀಗಾಗಿ ಭವಾನಿ ಅವರು ನನ್ನ ಮೇಲೆ ಕೋಪ ಮಾಡಿಕೊಂಡಿದ್ದರು ಅಷ್ಟೆ ಎಂದರು.
ಕಾಲಲ್ಲಿ ತೋರಿಸಿದ್ದನ್ನು ಕೈಯಲ್ಲಿ ಮಾಡುತ್ತೇನೆ
ಈಗ ಎಲ್ಲವೂ ಸರಿಹೋಗಿದೆ. ನನ್ನ ಮೊದಲ ಚುನಾವಣೆಯಲ್ಲಿ ಭವಾನಿ ಅವರ ಶ್ರಮ ಸಾಕಷ್ಟಿದೆ. ಅದನ್ನು ಎಂದಿಗೂ ಮರೆಯಲ್ಲ. ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಕಾಲಲ್ಲಿ ತೋರಿಸಿದ್ದನ್ನು ಕೈಯಲ್ಲಿ ಮಾಡುತ್ತೇನೆ ಎನ್ನುವ ಮೂಲಕ ದೇವೇಗೌಡರ ಕುಟುಂಬಕ್ಕೆ ಸದಾ ನಿಷ್ಠೆ ಹೊಂದಿರುವುದಾಗಿ ಪ್ರಕಟಿಸುವುದರೊಂದಿಗೆ ತಾವು ಒಂದಾಗಿದ್ದೇವೆ ಎಂಬುದನ್ನು ಜಗಜ್ಜಾಹೀರು ಮಾಡಿದರು.