ಸಾ. ರಾ. ಚೌಲ್ಟ್ರಿ ಭೂ ವಿವಾದ; ರೋಹಿಣಿ ಸಿಂಧೂರಿಗೆ ಸವಾಲ್!
ಮೈಸೂರು, ಸೆಪ್ಟೆಂಬರ್ 06; ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಗೊಂಡರೂ ಸಹ ಅಲ್ಲಿನ ಜನಪ್ರತಿನಿಧಿಗಳು ಅವರ ವಿರುದ್ಧ ವಾಗ್ದಾಳಿಗಳನ್ನು ನಿಲ್ಲಿಸಿಲ್ಲ. ಭಾರೀ ಚರ್ಚೆಗೆ ಕಾರಣವಾಗಿದ್ದ ಸಾ. ರಾ. ಚೌಲ್ಟ್ರಿ ಭೂ ಒತ್ತುವರಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ.
ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ. ಆರ್. ನಗರ ಜೆಡಿಎಸ್ ಶಾಸಕ ಸಾ. ರಾ. ಮಹೇಶ್, "ತಾವು ಯಾವುದೇ ಬ್ಲಾಕ್ಮೇಲ್ಗೆ ಹೆದರುವುದಿಲ್ಲ. ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿಶ್ವನಾಥ್, ಮೌನೀಶ್ ಮೌದ್ಗಿಲ್, ರೋಹಿಣಿ ಸಿಂಧೂರಿ ಅವರೇ ಚೈನ್ ಹಿಡಿದು ಸರ್ವೇ ಮಾಡಲಿ" ಎಂದು ಸವಾಲು ಹಾಕಿದರು.
ರೋಹಿಣಿ ಸಿಂಧೂರಿ ವಿರುದ್ಧ 6 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದ ಸಾ.ರಾ. ಮಹೇಶ್
"ರೋಹಿಣಿ ಸಿಂಧೂರಿಯಾಗಲಿ, ಮೌನೀಶ್ ಮೌದ್ಗಿಲ್ ಆಗಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ. ನಾನು ಯಾವುದೇ ಬ್ಲಾಕ್ ಮೇಲ್ಗೂ ಹೆದರುವುದಿಲ್ಲ. ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಹೋರಾಟವನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ" ಎಂದರು.
Breaking; ಕಲ್ಯಾಣ ಮಂಟಪ ವಿವಾದ, ಸಾ. ರಾ. ಮಹೇಶ್ಗೆ ಕ್ಲೀನ್ ಚಿಟ್
"ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದನ್ನು ಸಾಬೀತು ಮಾಡಿದರೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಿಂದ ದೂರವಾಗುತ್ತೇನೆ. ಬೇರೆಯವರನ್ನು ಬ್ಲಾಕ್ ಮೇಲ್ ಮಾಡಬಹುದು. ಆದರೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು.
ಸಾರಾ ಸಭಾಂಗಣ ಕುರಿತು ಸಮಗ್ರ ತನಿಖೆ ಮಾಡಿ ಎಂದ ರೋಹಿಣಿ ಸಿಂಧೂರಿ
"ನಾನು ಗೊಮ್ಮಟೇಶ್ವರನ ಭಕ್ತ, ಆಂಜನೇಯನ ಭಕ್ತ. ಆದ್ದರಿಂದ ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ರೋಹಿಣಿ ಸಿಂಧೂರಿ ಸಾ. ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ, ಅದು ಗೋಮಾಳ ಅಂತ ಹೇಳಿದ್ದರು. ನಾನೇ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಿ ತನಿಖೆಗೆ ಆಗ್ರಹಿಸಿದ್ದೆ. ನನ್ನ ಒತ್ತಡ, ಹೋರಾಟದ ಮೇಲೆ ಸರ್ವೇ ಕಾರ್ಯ ನಡೆದಿತ್ತು" ಎಂದರು.
"ಈಗ ಸರ್ವೇ ಆಯುಕ್ತರು ಒಂದು ಪತ್ರ ಬರೆದಿದ್ದಾರೆ. ಜೆಡಿಎಲ್ಆರ್ 3-4 ಜಿಲ್ಲೆಗಳ ಹೆಡ್ ಆಗಿರುತ್ತಾರೆ. ಪ್ರಾದೇಶಿಕ ಆಯುಕ್ತರಿಗೆ ಜ್ಯುಡಿಷಿಯಲ್ ಪವರ್ ಇರುತ್ತದೆ. ಆರ್ಟಿಸಿ ಎಲ್ಲಿ ತೆಗೆದರೂ ದಾಖಲೆಗಳು ಸಿಗುತ್ತವೆ. ನೀವೊಬ್ಬ ಪ್ರಾಮಾಣಿಕ ಅಧಿಕಾರಿ. ಆದ್ದರಿಂದಲೇ ರೈತರ ಸಾಲ ಮನ್ನಾಕ್ಕೆ ನಿಮ್ಮನ್ನು ನೇಮಿಸಿದ್ದರು. 50 ಸಾವಿರ ಅರ್ಜಿ ಇಟ್ಟುಕೊಂಡು ಕುಳಿತಿದ್ದೀರಿ. ಖಾಸಗಿ ಎರಡೂವರೆ ಲಕ್ಷ, ಸರ್ಕಾರಿ ಎರಡೂವರೆ ಲಕ್ಷ ಸೇರಿ ಒಟ್ಟು 5 ಲಕ್ಷ ಅರ್ಜಿ ಬಾಕಿ ಇಟ್ಟುಕೊಂಡಿದ್ದೀರಿ. ನೀವೇ ಬನ್ನಿ, ಹೂಗುಚ್ಛ ಹಿಡಿದುಕೊಂಡು ಸ್ವಾಗತಿಸುತ್ತೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಚೌಲ್ಟ್ರಿ ಜಾಗದಲ್ಲಿ ಒಂದು ಗುಂಟೆ ಒತ್ತುವರಿ ಆಗಿದ್ದರೂ ಅದನ್ನು ರಾಜ್ಯಪಾಲರಿಗೆ ಬರೆದುಕೊಡುವೆ" ಎಂದು ತಿಳಿಸಿದರು.
ಬೊಮ್ಮಾಯಿ ಆಡಳಿತ ಹೊಗಳಿದ ವಿಶ್ವನಾಥ್; ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಯಡಿಯೂರಪ್ಪ ನೆರಳಲ್ಲ. ಬೊಮ್ಮಾಯಿ ಅವರಿಗೆ ಅವರದೇ ಆದ ಸ್ವಂತಿಕೆ ಇದೆ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಧಾನಕರವಾದ ಆಡಳಿತ ನೀಡುತ್ತಿದ್ದಾರೆ. ಬೊಮ್ಮಾಯಿ ಮಾತುಗಳು ಜನರಲ್ಲಿ ಭರವಸೆ ಮೂಡಿಸುತ್ತಿವೆ. ಜನರ ಬಳಿಗೆ ಅಭಿವೃದ್ಧಿಯೇ ಹೊರತು ಅಭಿವೃದ್ಧಿ ಸುತ್ತ ಜನರಲ್ಲ. ಈ ವಿಚಾರದಲ್ಲಿ ಬೊಮ್ಮಾಯಿ ಆಡಳಿತ ಸುಧಾರಿಸಿದೆ. ಮೊದಲು ಕುಟುಂಬ ಕೇಂದ್ರವಾಗಿ ಆಡಳಿತ ಹೋಗುತ್ತಿತ್ತು. ಈಗ ಜನ ಕೇಂದ್ರೀಕೃತವಾಗಿ ಸಾಗುತ್ತಿದೆ" ಎಂದು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದ ಆಡಳಿತ ವೈಖರಿ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಇದೇ ವೇಳೆ ಮುಂದಿನ ಚುನಾವಣೆ ನೇತೃತ್ವದ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಾವುದೇ ಪಕ್ಷವಾದರೂ ಆಗಿನ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರನ್ನು ಸೇರಿಸಿಕೊಂಡು ಚುನಾವಣೆ ಎದರಿಸುತ್ತೆ. ಯಾರು ಏನೇ ಹೇಳಿದರೂ ಮೇಟಿ ಎಂಬುವರು ಒಬ್ಬ ಬೇಕಾಗುತ್ತೆ ಎಂದ ಅವರು, ರಾಜ್ಯದ ಮೂರು ಪಾಲಿಕೆಗಳ ಚುನಾವಣೆ ಫಲಿತಾಂಶ, ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಲ್ಲ" ಎಂದರು.
ಉಳಿದಿರುವ ಸಚಿವ ಸ್ಥಾನ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ವಿಶ್ವನಾಥ್, "ಯಾವುದೇ ಕಾರಣಕ್ಕೂ ಅದನ್ನು ಸಿಎಂ ಇಟ್ಟುಕೊಳ್ಳಬಾರದು. ಎಲ್ಲಾ ಖಾತೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು. ಬಹುಶಃ ವಿಧಾನಸಭೆ ಅಧಿವೇಶನ ಮುಗಿದ ನಂತರ ಹಂಚಿಕೆ ಮಾಡಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾ. ರಾ. ಮಹೇಶ್ ಚೌಟ್ರಿ ವಿವಾದ; ಸರ್ಕಾರಿ ಭೂ ಒತ್ತುವರಿಗೆ ಸರ್ವೇ ವಿಚಾರದ ಕುರಿತು ಶಾಸಕ ಸಾ.ರಾ. ಮಹೇಶ್ ಹಾಗೂ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, "ಚಿನ್ನ ಉಜ್ಜಿದಷ್ಟು ಹೊಳಪು ಬರುತ್ತದೆ. ನಡೆಯಲಿ ಮರು ಸರ್ವೇ ಸತ್ಯ ಹೊರಬರಲಿ. ಸಾರಾ ಮಹೇಶ್ ಒತ್ತುವರಿ ಮಾಡಿಲ್ಲವಾದರೆ ಭಯ ಏಕೆ? ಒತ್ತುವರಿ ಮಾಡಿಕೊಂಡವರಿಗೆ ಸರ್ವೆಯ ಭಯವಿರುತ್ತದೆ. ಹಿಂದಿನ ಸರ್ವೇ ವರದಿ ಪ್ರಾಮಾಣಿಕವಾಗಿರಲಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವರದಿ ಹೇಗೆ ನೀಡಿದರು ಅನ್ನೋದು ಜನರಿಗೂ ಗೊತ್ತಿದೆ. ಎಸ್. ಟಿ. ಸೋಮಶೇಖರ್ ಸರ್ಕಾರದ ಭಾಗವಾಗಿದ್ದು, ಅವರು ಈ ರೀತಿ ಹೇಳಿಕೆ ನೀಡಬಾರದು. ಅಧಿಕಾರಿಗೆ ಸರ್ಕಾರವೇ ಅಧಿಕಾರ ನೀಡಿದೆ, ಆ ಅಧಿಕಾರ ಬಳಸಿ ಅವರು ಆದೇಶ ಮಾಡಿದ್ದಾರೆ. ಇದನ್ನು ವಿರೋಧಿಸುವುದು ಸರಿಯಲ್ಲ" ಎಂದು ಹೇಳಿದರು.
ಮೈಸೂರು ಕಟ್ಟಿಸಿದ್ದು ನಾನೇ ಅಂತಾರೆ; ಇನ್ನೂ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ರೆಡಿಟ್ ವಿಚಾರದ ಕುರಿತಂತೆ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ವಿಶ್ವನಾಥ್, "ಇವರು ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಅನ್ನುತ್ತಾರೆ. ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ಗೌರವವಿಟ್ಟು ಮಾತನಾಡಲಿ. ಅವರ ನೆನ್ನೆಯ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವ ಪತ್ರವಲ್ಲ. ಹಿಂದಿನ ಸರ್ಕಾರದಲ್ಲೇ ರಸ್ತೆ ಯೋಜನೆಗೆ ದಾಖಲೆ ಇದೆ. ಹೀಗಾಗಿ ಯೋಜನೆ ತಮ್ಮದೇ ಅಂತಾ ಹೇಳಿಕೊಳ್ಳುವುದು ಸರಿಯಲ್ಲ" ಎಂದರು.