ವ್ಯಾಸ, ವಾಲ್ಮೀಕೆಯಷ್ಟೇ ಜನಪ್ರಿಯತೆ ಹೊಂದಿರುವ ವ್ಯಕ್ತಿ ಸಾಹಿತಿ ಭೈರಪ್ಪ: ಕಂಬಾರ
ಮೈಸೂರು, ಜನವರಿ 19 : ವ್ಯಾಸ, ವಾಲ್ಮೀಕೆಯಷ್ಟೇ ಸರಿಸಮನಾದ ಜನಪ್ರಿಯತೆ ಹೊಂದಿರುವ ಏಕೈಕ ವ್ಯಕ್ತಿ ಸಾಹಿತಿ ಎಸ್. ಎಲ್ ಭೈರಪ್ಪ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.
ಎಸ್. ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಎಸ್ ಎಲ್ ಭೈರಪ್ಪ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೊಬೆಲ್ ಪ್ರಶಸ್ತಿ ಇಲ್ಲದಿದ್ದರೂ ಸಾಹಿತಿ ಎಸ್ ಎಲ್ ಭೈರಪ್ಪನವರು ದೇಶದಾದ್ಯಂತ ಜನಪ್ರಿಯವಾಗಿದ್ದಾರೆ. ಭೈರಪ್ಪನವರ ಎದುರು ಮಾತನಾಡಲು ನನಗೆ ಭಯವಾಗುತ್ತದೆ. ಅವರು ನಿಖರ ಖಚಿತವಾಗಿ ವಿಷಯ ಮಂಡನೆ ಮಾಡುತ್ತಾರೆ. ಅದು ನನ್ನಿಂದ ಆ ಸಾಧ್ಯವಾಗದು. ಅವರ ಮೇಲೆ ನನಗೆ ಪೂಜ್ಯ ಗೌರವ ಭಾವನೆಯಿದೆ ನಾನು ಮುಳುಗಿದ ಸಂದರ್ಭದಲ್ಲಿ ಅವರು ನನ್ನನ್ನು ಮೇಲಕ್ಕೆತ್ತಿದ್ದಾರೆ ಎಂದರು.
ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವೇಳೆ ಪ್ರವಾಹ ಬಂದು ಅಲ್ಲಿನ ಗ್ರಂಥಾಲಯವೆಲ್ಲ ಮುಳುಗಿ ನೀರಿನಲ್ಲಿ ಪುಸ್ತಕ ಕೊಚ್ಚಿಕೊಂಡು ಹೋಗಿತ್ತು. ಆಗ ಅಲ್ಲಿಯೇ ಎಂಟು ದಿನ ಇದ್ದು ಸಮಾಧಾನ ಹೇಳಿ ಧೈರ್ಯ ನೀಡಿ ಚೈತನ್ಯ ತುಂಬಿದ್ದರು. ಅದಕ್ಕಾಗಿ ನಾನು ಅವರಿಗೆ ವಂದನೆಗಳನ್ನು ತಿಳಿಸಲೇಬೇಕು. ನನಗೆ ಅವರು ವೈಯಕ್ತಿಕವಾಗಿ ಮಾಡಿದ ಸಹಾಯ ಮರೆಯಲು ಸಾಧ್ಯ ಎಂದರು.
ಯಾವುದೇ ಕೃತಿ ಇರಲಿ ಅದು ಮೂಲಕ್ಕೆ ಸಮೀಪವಾಗಿರುವುದು ಒಳ್ಳೆಯ ಅನುವಾದದಿಂದ ಮಾತ್ರ ಸಾಧ್ಯ. ಭೈರಪ್ಪನವರ ಒಂದೊಂದು ಕಾದಂಬರಿಯೂ ಒಂದೊಂದು ಕಥನವನ್ನು ತಿಳಿಸುತ್ತದೆ. ಅವರ ಕಥನ ಕುಮಾರ ವ್ಯಾಸದಲ್ಲಿ ಕೂಡ ಬರಲ್ಲ. ರವೀಂದ್ರನಾಥ ಟ್ಯಾಗೋರ್ ಅವರು ನೊಬೆಲ್ ಪ್ರಶಸ್ತಿ ಪಡೆದು ಗುರುತಿಸಿಕೊಂಡಿದ್ದರು. ಆದರೆ ಭೈರಪ್ಪನವರ ನೊಬೆಲ್ ಪ್ರಶಸ್ತಿ ಇಲ್ಲದಿದ್ದರೂ ದೇಶದಾದ್ಯಂತ ಗುರುತಿಸಿಕೊಂಡಿದ್ದಾರೆ. ಭೈರಪ್ಪನವರ ಕುಟುಂಬ ವಿಸ್ತಾರವಾಗಿದೆ. ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ ಎಂದರು.
24 ಭಾಷೆಗಳಲ್ಲಿ ಭೈರಪ್ಪನವರ ಕಾದಂಬರಿ ಜನಪ್ರಿಯವಾಗಿದೆ ಎಂದರೆ ಅವರು ವ್ಯಾಸ, ವಾಲ್ಮೀಕಿ ಯಷ್ಟೇ ಸಮನಾದ ಜನಪ್ರಿಯತೆ ಹೊಂದಿದ್ದಾರೆ. ಅವರಿಗೆ ಇರುವ ಭಾಷೆಯ ಬಗ್ಗೆ ಕಾಳಜಿ ಕಳಕಳಿ ಅಪಾರವಾದದ್ದು.
ಅದಕ್ಕಾಗಿಯೇ ಅವರು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಶಿಕ್ಷಣ ಎಂದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು. ಅವರಿಗೆ ಇಂತಹ ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದು ಸಂತೋಷದ ವಿಷಯ. ಅವರ ಬಗ್ಗೆ ನಾವೇನು ಯೋಚಿಸುತ್ತೇವೆ ಅದರ ಕುರಿತು ಕೃತಿ ಹೊರಬಂದರೆ ಕನ್ನಡ ಸಾಹಿತ್ಯದ ಪ್ರಚಾರ ಅಗಾಧವಾಗುತ್ತದೆ ಎಂದರು.
ಇನ್ನು ಶತಾವಧಾನಿ ಗಣೇಶ್ ಮಾತನಾಡಿ, ಸಮಾಜದ ಮೌಲ್ಯಗಳ ಒದ್ದಾಟ ಹೇಗೆ ಎನ್ನುವುದನ್ನು ಭೈರಪ್ಪನವರ ಕೃತಿಗಳು ತಿಳಿಸುತ್ತದೆ. ಆನಂದಾನುಭವದ ಶಕ್ತಿ ಇರುವುದು ಅಹಂಕಾರದ ಮೇಲೆ. ರಸಾನಂದ ಅಹಂಕಾರ ಕರಗಿಸುವುದರಿಂದ ಬರುತ್ತದೆ.
ಬ್ರಹ್ಮಾನಂದ ಅಹಂಕಾರದ ವಿನಾಶದಿಂದ ಬರುತ್ತದೆ. ಪ್ರತಿಯೊಂದು ವ್ಯಕ್ತಿತ್ವದ ಅಸ್ಮಿತಾ ಭಾವ ಬ್ರಹ್ಮಾನಂದದ ಕಡೆ ಹೋಗುತ್ತದೆ. ಅದನ್ನು ಭೈರಪ್ಪನವರು ರಸಾನಂದದ ಕಡೆಗೆ ತಿರುಗಿಸಲು ಎಷ್ಟು ರಮಣೀಯ ಪ್ರಕಲ್ಪ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರಲ್ಲಿ ಅನುಭವದ ಗಾಢತೆ ಮನೆ ಮಾಡಿದೆ ಎಂದರು.