ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ : ದೇಶಪಾಂಡೆ
ಮೈಸೂರು, ಫೆಬ್ರವರಿ 19 : ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ಮೈಸೂರು-ಬೆಂಗಳೂರು ರೈಲು ಮಾರ್ಗದ ಜೋಡಿಹಳಿ ಹಾಗೂ ವಿದ್ಯುದೀಕೃತ ಮಾರ್ಗದ ಲೋಕಾರ್ಪಣೆ ಸಮಾರಂಭದಲ್ಲಿ ಸಚಿವರು ಗೌರವಾನ್ವಿತ ಪ್ರಧಾನಿಗಳೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು, ಈ ಮನವಿಯನ್ನು ಪ್ರಧಾನಮಂತ್ರಿಗಳಿಗೆ ಅರ್ಪಿಸಿದರು.
ಹಮ್ ಸಫರ್ ರೈಲಿಗೆ ಚಾಲನೆ ನೀಡಿದ ನರೇಂದ್ರ ಮೋದಿ
ತಮ್ಮ ಮನವಿ ಪತ್ರದಲ್ಲಿ ಅವರು, ಇದೇ ವಿಷಯ ಕುರಿತು ಈ ವರ್ಷದ ಜ.5ರಂದು ತಮಗೆ ಬರೆದ ಪತ್ರಕ್ಕೆ ಇಡೀ ದಕ್ಷಿಣ ಭಾರತದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಇದಕ್ಕೆ ವೃತ್ತಿಪರರು, ಗಣ್ಯರು ಮತ್ತು ರಾಜ್ಯಗಳ ಉದ್ಯಮಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ತುಂಬಾ ವಿಶಾಲ ರಾಷ್ಟ್ರವಾದ ಭಾರತವು ಈಗ ಸುಗಮ ಆಡಳಿತ, ಆಡಳಿತ ಸುಧಾರಣೆಗಳು, ರಾಷ್ಟ್ರೀಯ ಪುನಾರಚನೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳಲ್ಲಿ ಸಂಪೂರ್ಣ ಪರಿವರ್ತನೆಯ ಹಾದಿಯಲ್ಲಿದೆ. ಈಗಿರುವಾಗ ಇಡೀ ದೇಶಕ್ಕೆ ಒಂದು ರಾಜಧಾನಿ ಸಾಲುವುದಿಲ್ಲ. ಬೆಂಗಳೂರು ದೇಶದ 2ನೇ ರಾಜಧಾನಿಯಾಗಲು ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ದೇಶಪಾಂಡೆ ವಿವರಿಸಿದರು.
ಕಾಸ್ಮೊಪಾಲಿಟನ್ ನಗರವಾಗಿರುವ ಬೆಂಗಳೂರು ಪ್ರಾಕೃತಿಕ ವಿಕೋಪಗಳಿಂದ ದೂರವಾಗಿದ್ದು, ಹಿತಕರ ಹವಾಮಾನ ಹೊಂದಿದೆ. ಅಲ್ಲದೆ, ಬಾಹ್ಯ ಶತ್ರುಗಳ ಕಾಟದಿಂದಲೂ ಇದು ಮುಕ್ತವಾಗಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂಬುದು ಇಡೀ ದಕ್ಷಿಣ ಭಾರತೀಯರ ನ್ಯಾಯಬದ್ಧ ಭಾವನೆಯಾಗಿದೆ ಎಂದು ದೇಶಪಾಂಡೆ ಅವರು ಕಳಕಳಿಯ ಮನವಿ ಮಾಡಿದರು.
ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ
ಬಹುಭಾಷಿಕ ಜನರು, ಶಾಸ್ತ್ರೀಯ ಭಾಷಾ ವಿದ್ವಾಂಸರು, ವೈವಿಧ್ಯಮಯ ವಿದೇಶಿ ವಿದ್ಯಾರ್ಥಿಗಳು ಮತ್ತು ದಕ್ಷ ವೃತ್ತಿಪರರಿಗೆ ಬೆಂಗಳೂರು ನೆಲೆಬೀಡಾಗಿದೆ. ಅಲ್ಲದೆ ಕೈಗಾರಿಕಾ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನವೋದ್ಯಮಗಳಿಗೂ ಬೆಂಗಳೂರು ಆಡುಂಬೊಲವಾಗಿದೆ ಎಂಬ ವಿವರ ನೀಡಿದರು.
ಬೆಂಗಳೂರನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿ ಇಲ್ಲಿ ಸುಪ್ರೀಂಕೋರ್ಟಿನ ಪೀಠ ಮತ್ತು ಯುಪಿಎಸ್ಸಿ ಕಚೇರಿ ತೆಗೆದು, ಇಲ್ಲಿ ಸಂಸತ್ ಅಧಿವೇಶನ ನಡೆಸುವುದರಿಂದ ದಕ್ಷಿಣ ಭಾರತ ಅಖಂಡವಾಗಿ ಒಂದುಗೂಡಲು ಸಾಧ್ಯವಾಗುತ್ತದೆ ಎಂದು ಕೈಗಾರಿಕಾ ಸಚಿವರು ಆಶಾಭಾವನೆ ವ್ಯಕ್ತಪಡಿಸಿದರು.