ಮಿಸ್ಡ್ಕಾಲ್ ಪ್ರೇಮಕ್ಕೆ ಪಟ್ಟಣ ಪೊಲೀಸರ ಪೌರೋಹಿತ್ಯ
ಪಿರಿಯಾಪಟ್ಟಣ, ಏಪ್ರಿಲ್ 14 : ಮಿಸ್ಡ್ಕಾಲ್ನಲ್ಲಿ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ, ಪ್ರೇಮಿಗಳು ಇದೀಗ ಪೊಲೀಸ್ ಠಾಣೆಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ 'ಸಿನಿಮೀಯ' ಪ್ರಕರಣವೊಂದು ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸಿನೆಮಾವೊಂದರ ಪ್ರೇಮಕಥೆಯ ರೀತಿಯಲ್ಲಿ ಪ್ರೇಮಿಗಳ ಪ್ರೇಮ ಸುಖಾಂತ್ಯ ಕಂಡಿದೆ. ತಾಲೂಕಿನ ಭುವನಹಳ್ಳಿ ಗ್ರಾಮದ ಸುಪ್ರಿಯಾ(18) ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮಸಾಗರದ ಮಂಜುನಾಥ್(22) ಪೊಲೀಸ್ ಠಾಣೆಯಲ್ಲಿ ಸಪ್ತಪದಿ ತುಳಿದ ಪ್ರೇಮಿಗಳು.
ಬೊಮ್ಮಸಾಗರದ ನಿವಾಸಿ ಮಂಜುನಾಥ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿದವನು ಅಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಭುವನಹಳ್ಳಿಯ ಸುಪ್ರಿಯಾ ಪಿಯುಸಿವರೆಗೆ ಓದಿದ್ದು ಮನೆಯಲ್ಲೇ ಇದ್ದಳು. ಈ ನಡುವೆ ಹೆತ್ತವರು ಕೂಡ ಒಳ್ಳೆಕಡೆ ಸಂಬಂಧ ನೋಡಿ ಮದುವೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. [ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ]
ಇದೆಲ್ಲದರ ನಡುವೆ ಒಮ್ಮೆ ಸುಪ್ರಿಯಾ ಮೊಬೈಲ್ಗೆ ಮಿಸ್ಡ್ಕಾಲ್ ಬಂದಿತ್ತು. ಬಳಿಕ ಆ ನಂಬರಿಗೆ ಫೋನ್ ಮಾಡಿದಾಗ ಅತ್ತ ಕಡೆಯಿಂದ ಹುಡುಗನ ವಾಯ್ಸ್ ಕೇಳಿಬಂದಿತ್ತಲ್ಲದೆ, ರಾಂಗ್ ನಂಬರ್ ಎಂಬುದು ಆಕೆಗೆ ಗೊತ್ತಾಗಿ ಸುಮ್ಮನಾಗಿದ್ದಳು. ಇಷ್ಟೇ ಆಗಿದ್ದರೆ ನಿಜಜೀವನದ ಚಿತ್ರಕಥೆ ಮುಂದುವರಿಯಬೇಕಲ್ಲ?
ಆದರೆ ತಾನು ಮಾಡಿದ ರಾಂಗ್ನಂಬರ್ ಒಬ್ಬ ಹುಡುಗಿಯದು ಎಂಬುದು ಗೊತ್ತಾಗುತ್ತಿದ್ದಂತೆಯೇ ಮಂಜುನಾಥ್ ಮತ್ತೆ ಫೋನ್ ಮಾಡಿ ಮಾತನಾಡಿಸಿದ್ದನು. ಹೀಗೆ ಮಾತು ಮಾತಲ್ಲೇ ಇಬ್ಬರ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ, ಸರಸ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಮುಂದುವರಿದು ಒಬ್ಬರನೊಬ್ಬರು ಬಿಟ್ಟು ಇರಲಾರದ ಮಟ್ಟಿಗೆ ಬೆಳೆದು ನಿಂತುಬಿಟ್ಟರು.
ಮೆಸೇಜ್ಗಳು ಅತ್ತಿಂದಿತ್ತ ಹರಿದಾಡತೊಡಗಿದವು. ಹೆತ್ತವರಿಗೆ ಮಾತ್ರ ಇದ್ಯಾವುದೂ ಗೊತ್ತೇ ಆಗಿರಲಿಲ್ಲ. ಒಬ್ಬರನೊಬ್ಬರು ನೋಡಿಕೊಳ್ಳದೆ ಮಾತಿನಲ್ಲೇ ಮದುವೆ, ಸಂಸಾರ, ಮಕ್ಕಳು ಅಂಥ ಮಾತಾಡಿಕೊಂಡರಲ್ಲದೆ, ಇಬ್ಬರೂ ಒಂದೆಡೆ ಸೇರಿ ಸಂಸಾರ ನಡೆಸುವ ಮಟ್ಟಕ್ಕೂ ಮುಂದುವರೆದರು. ಮುಂದಿನ ಜೀವನ ಕಲ್ಪಿಸಿಕೊಂಡು ಪುಳಕಿತರಾಗಿದ್ದರು. [ಮದುವೆ ಒಲ್ಲದ ಯುವತಿ ಸಾವು, ಮರ್ಯಾದಾ ಹತ್ಯೆ ಶಂಕೆ!]
ಕೆಲವು ದಿನಗಳ ಹಿಂದೆ ಮಂಜುನಾಥನಿಗೆ ಕಾಲ್ ಮಾಡಿದ ಸುಪ್ರಿಯಾ ನೀನು ಊರಿಗೆ ಬಾ ನಾನು ಮನೆಬಿಟ್ಟು ಬರ್ತೀನಿ ಇಬ್ಬರು ಮದುವೆಯಾಗಿ ಜೀವನ ನಡೆಸೋಣ ಎಂದಿದ್ದಾಳೆ. ಅದರಂತೆ ಆತನೂ ಬಂದಿದ್ದಾನೆ. ಸುಪ್ರಿಯಾ ಮನೆಯಲ್ಲಿ ಯಾರಿಗೂ ಹೇಳದೆ ಕಾಲ್ಕಿತ್ತು ಮಂಜುನಾಥನ ಸೇರಿದ್ದಾಳೆ. ಇಬ್ಬರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಇತ್ತ ಮಗಳು ಮನೆಯಿಂದ ಬಟ್ಟೆ ಸಹಿತ ನಾಪತ್ತೆಯಾಗಿದ್ದರಿಂದ ಪೋಷಕರು ಆತಂಕಕ್ಕೊಳಗಾಗಿ ಎಲ್ಲೆಡೆ ಹುಡುಕಾಟ ನಡೆಸಿ ಬೇರೆ ದಾರಿ ಕಾಣದೆ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಪ್ರಿಯಾ ತನ್ನೊಂದಿಗೆ ಮೊಬೈಲ್ ಕೊಂಡೊಯ್ದಿದ್ದರಿಂದ ಮೊಬೈಲ್ ಟವರ್ ಮೂಲಕ ಅವರು ಇರುವಿಕೆಯನ್ನು ಪತ್ತೆ ಹಚ್ಚಿದ ಪೊಲೀಸರು ಬೆಟ್ಟದಪುರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ವಿಚಾರಣೆ ವೇಳೆ ಅವರಿಬ್ಬರು ಮೊಬೈಲ್ ಮಿಸ್ಡ್ ಕಾಲ್ ಮೂಲಕ ಪರಿಚಯ ಪ್ರೇಮವಾಗಿದ್ದು, ನಂತರ ಇಬ್ಬರು ಒಪ್ಪಿಗೆಯಿಂದಲೇ ತೆರಳಿದ್ದನ್ನು ಪೊಲೀಸರ ಮುಂದೆ ಹೇಳಿದ್ದರಿಂದ ಪೋಷಕರ ಸಮ್ಮುಖದಲ್ಲಿ ಪೊಲೀಸರು ಮದುವೆ ಮಾಡಿಸಿದ್ದಾರೆ. ಸದ್ಯ ಪ್ರಕರಣ ಸುಖಾಂತ್ಯ ಕಂಡಿದೆ. ಎಲ್ಲೇ ಇರಲಿ ಪ್ರೇಮಿಗಳು ಸುಖವಾಗಿರಲಿ. [ಮೋನಿಕಾ ಹತ್ಯೆ : ಗೃಹ ಸಚಿವರಿಗೆ ಮಹಿಳಾ ಆಯೋಗ ಪತ್ರ]