ಪಾಲಿಕೆ ಸದಸ್ಯತ್ವ ರದ್ದತಿ: ಸುಪ್ರೀಂಕೋರ್ಟ್ ಮೊರೆ ಹೋಗಲು ಮೈಸೂರು ಮೇಯರ್ ನಿರ್ಧಾರ
ಮೈಸೂರು, ಮೇ 27: ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದತಿ ಆದೇಶ ಹೊರಬಿದ್ದ ಬೆನ್ನಲ್ಲೇ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಈ ನಡುವೆ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಮೇಯರ್, ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ತಮ್ಮ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಿ, ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಹೀಗಾಗಿ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನನ್ನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಪತಿಯ ಆಸ್ತಿಯನ್ನು ನನ್ನ ಆಸ್ತಿ ಅಂತ ಘೋಷಣೆ ಮಾಡಿಕೊಂಡಿದ್ದೆ. ಅವರ ಹೆಸರಲ್ಲಿ ಎಷ್ಟು ಆಸ್ತಿ ಇದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದು ನನಗೆ ಗೊತ್ತಿಲ್ಲದೇ ಆಗಿರುವಂತಹ ತಪ್ಪು. ಮುಂದೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಇನ್ನು ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದಗೊಳಿಸಿ ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ ಮಾತನಾಡಿರುವ ಪ್ರತಿವಾದಿ ರಜನಿ ಅಣ್ಣಯ್ಯ, ""ನ್ಯಾಯಾಲಯ ನೀಡಿರುವ ಈ ತೀರ್ಪು ಸತ್ಯಕ್ಕೆ ದೊರೆತ ಜಯವಾಗಿದೆ. ಎಸ್ಎಸ್ಎಲ್ಸಿ ಮಕ್ಕಳು ಸರಿಯಾಗಿ ಅರ್ಜಿ ಭರ್ತಿ ಮಾಡುತ್ತಾರೆ. ಆದರೆ ರುಕ್ಮಿಣಿ ಮಾದೇಗೌಡ ಅವರು ಸರಿಯಾಗಿ ಅರ್ಜಿ ಭರ್ತಿ ಮಾಡಿರಲಿಲ್ಲ'' ಎಂದರು.
"ಪತಿ ಹೆಸರಿನ ಜಾಗದಲ್ಲಿ ತಂದೆ ಹೆಸರು, ತಂದೆ ಹೆಸರಿನ ಜಾಗದಲ್ಲಿ ಮಕ್ಕಳ ಹೆಸರು ಬರೆದಿದ್ದರು. ಆಸ್ತಿ ವಿವರಗಳನ್ನೂ ಮುಚ್ಚಿಟ್ಟಿದ್ದರು. ಸ್ವಂತ ವಾಹನ ತೋರಿಸಿರಲಿಲ್ಲ. 2018ರ ಚುನಾವಣೆ ಸಂದರ್ಭದಲ್ಲೇ ಇದೆಲ್ಲವನ್ನೂ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದೆ. ಅಲ್ಲದೇ ಹೆಚ್ಚು ಮತ ಗಳಿಸಿದ ಎರಡನೇ ಅಭ್ಯರ್ಥಿಯನ್ನು ವಿಜೇತ ಅಂತ ಘೋಷಣೆ ಮಾಡಬೇಕು ಅಂತ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿತ್ತು'' ಎಂದು ತಿಳಿಸಿದರು.
ಆದರೆ, ಇದನ್ನು ಪ್ರಶ್ನಿಸಿ ಮೇಯರ್ ಹೈಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ಹೈಕೋರ್ಟ್ ತೀರ್ಪು ಬಂದಿದೆ. ಮೇಯರ್ ಸ್ಥಾನ, ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಲಾಗಿದೆ. ಆದರೆ ನನ್ನನ್ನು ಕಾರ್ಪೋರೇಟರ್ ಅಂತನೂ ಘೋಷಿಸಿಲ್ಲ. ಒಂದು ವೇಳೆ ಎದುರಾಳಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೆ ನಾವೂ ಫೈಟ್ ಮಾಡುತ್ತೇವೆ ಎಂದು ರಜನಿ ಅಣ್ಣಯ್ಯ ಹೇಳಿದ್ದಾರೆ.