ಮೈಸೂರು: ಆರ್ ಟಿಇ ಕಾಯ್ದೆ ಉಲ್ಲಂಘಿಸಿದ ಶಾಲೆಗೆ ಬಿತ್ತು 1. 60 ಕೋಟಿ ದಂಡ
ಮೈಸೂರು, ಮೇ 22 : ಆರ್ ಟಿಇ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಿಂದೆಂದೂ ಕಂಡರಿಯದ ಭಾರಿ ದಂಡ ವಿಧಿಸಿದೆ.
ಮೈಸೂರಿನ ಬನ್ನೂರು ರಸ್ತೆಯ ಬುಗತಗಳ್ಳಿ ಬಳಿ ಇರುವ ಕೈಗಾರಿಕೋದ್ಯಮಿ ಸುಧಾಕರ ಶೆಟ್ಟಿ ಅವರ ಮಾಲೀಕತ್ವದ ಜ್ಞಾನ ಸರೋವರ ಇಂಟರ್ ನ್ಯಾಷನಲ್ ವಸತಿ ಶಾಲೆಗೆ ಬರೋಬ್ಬರಿ 1.ಕೋಟಿ 60 ಲಕ್ಷ ದಂಡ ವಿಧಿಸಲಾಗಿದೆ.
ಪ್ರತಿ ಮಗೂ ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಕಡ್ಡಾಯ ಶಿಕ್ಷಣ ಜಾರಿಗಾಗಿ ಸರ್ಕಾರ ಆರ್ ಟಿ ಇ ಜಾರಿಗೆ ತಂದಿದೆ. ಆದರೆ, ಖಾಸಗಿ ವಿದ್ಯಾ ಸಂಸ್ಥೆಗಳು ಆದೇಶವನ್ನು ದಿಕ್ಕರಿಸಿ ಅರ್ಹರಿಗೆ ವಂಚಿಸುತ್ತಾ ಬಂದಿವೆ.
ಅದರಲ್ಲಿ ಮೈಸೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಈ ಶಾಲೆ ಕೂಡ ಒಂದು. 2012ರಿಂದ ಮಕ್ಕಳ ಪ್ರವೇಶ ನೀಡುವಲ್ಲಿ ಆರ್ ಟಿಇ ಸೀಟು ನೀಡದೆ ವಂಚಿಸುತ್ತಿದ್ದ ಈ ಶಾಲೆಯ ಆಟಾಟೋಪ ಕಂಡ ಆರ್ ಟಿಇ ಕಾರ್ಯಕರ್ತರು ದೂರು ದಾಖಲಿಸಿದ್ದರು.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಶಾಲಾ ಆಡಳಿತ ಮಂಡಳಿ ಎಂದಿನಂತೆ ಅರ್ಹ ಮಕ್ಕಳಿಗೆ ಆರ್ ಟಿಇ ಸೀಟು ನೀಡದೆ ವಂಚಿಸುತ್ತಿತ್ತು. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸಿದ ಸಾರ್ವಜನಿಕರ ಶಿಕ್ಷಣ ಇಲಾಖೆ ಸುಧೀರ್ಘ ವಿಚಾರಣೆ ನಡೆಸಿ, ಆರ್ ಟಿಇ ಸೀಟು ವಂಚಿಸುತ್ತಿದ್ದವರಿಗೆ ಚಾಟಿ ಬೀಸಿ ಆದೇಶ ಹೊರಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆರ್ಟಿಐ ಕಾರ್ಯಕರ್ತ ಜವರಪ್ಪ, ಆರ್ಟಿಇ 18(1) ಉಲ್ಲಂಘನೆ ಮಾಡಿರುವ ಕಾರಣ 18(5) ರನ್ವಯ ಜ್ನಾನ ಸರೋವರ ಶಾಲೆಗೆ ದಂಡ ವಿಧಿಸಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಸಂತಸ ವ್ಯಕ್ತಪಡಿಸಿದರು.