ಮನೆಗಳ್ಳರ ಬಂಧನ; 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮೈಸೂರು, ನವೆಂಬರ್ 9: ಮೈಸೂರು ನಗರದಲ್ಲಿ ಇತ್ತೀಚೆಗೆ ಉಲ್ಬಣಗೊಂಡಿದ್ದ ಮನೆಕಳ್ಳತನದ ಕಳ್ಳರನ್ನು ಪತ್ತೆಹಚ್ಚಲು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಅವರು ಸಿಸಿಬಿ ಘಟಕದ ಎಸಿಪಿ ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸಪೆಕ್ಟರ್ ಆರ್. ಜಗದೀಶ್ ಮತ್ತು ಸಿಬ್ಬಂದಿಗಳಿದ್ದ ವಿಶೇಷ ತಂಡವನ್ನು ರಚಿಸಿದ್ದರು. ಈ ವಿಶೇಷ ತಂಡವು ನಿನ್ನೆ ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿ ಬಳಿ ವ್ಯಕ್ತಿಗಳಿಬ್ಬರನ್ನು ಬಂಧಿಸಿದೆ.
ಬಂಧಿತರನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೆಲಮಂಗಲ ಆರ್ಎಂಸಿ ಯಾರ್ಡ್ 2ನೇ ಕ್ರಾಸ್ ನಿವಾಸಿ ಲಿಂಗರಾಜು ಆಲಿಯಾಸ್ ಸೈಯದ್ ಶಾಹೀದ್ ಚುಲ್ಲಾ ಬಿನ್ ಲೇಟ್ ಮನಿಯಪ್ಪ (38), ಹುಬ್ಬಳ್ಳಿ ನಿವಾಸಿ ಸೈಯದ್ ನವಾಬ್ ಬಿನ್ ಲೇಟ್ ಸೈಯದ್ ಜಾನಿ (40) ಎಂದು ಗುರುತಿಸಲಾಗಿದೆ.
ಮೈಸೂರಿನಲ್ಲಿ ಕೆಎಎಸ್ ಅಧಿಕಾರಿ ಸುಧಾ ಸಂಬಂಧಿ ಮನೆ ಮೇಲೆ ಎಸಿಬಿ ದಾಳಿ; ಹಲವು ದಾಖಲಾತಿಗಳು ವಶಕ್ಕೆ
ಇಬ್ಬರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಅವರನ್ನು ಪರಿಶೀಲಿಸಿದಾಗ ಆರೋಪಿ ಲಿಂಗರಾಜು ಅಲಿಯಾಸ್ ಸೈಯದ್ ಶಾಹೀದ್ ವಶದಲ್ಲಿ ಒಂದು ಚಿನ್ನದ ಕಾಸಿನ ಸರವಿದ್ದು, ಹಿಂದೂಗಳು ಧರಿಸುವ ಚಿನ್ನದ ಆಭರಣವಾದ್ದರಿಂದ ಅನುಮಾನ ಬಂದು ಸಿಸಿಬಿ ಘಟಕಕ್ಕೆ ಕರೆದುಕೊಂಡು ಬಂದು ಅವರುಗಳನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಾಯಿತು.
ಈ ಇಬ್ಬರು ಆರೋಪಿಗಳು ಸೇರಿಕೊಂಡು ಇದೇ ವರ್ಷದ ಜುಲೈ ತಿಂಗಳ ಕೊನೆಯ ದಿನ ಸರಸ್ವತಿಪುರಂ 7ನೇ ಮೈನ್, 5ನೇ ಕ್ರಾಸ್ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.
ಇದಲ್ಲದೆ 2018ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಮೈಸೂರು ನಗರದ ಬನ್ನಿ ಮಂಟಪದಲ್ಲಿ ಒಂದು ಮನೆಯೊಳಗೆ ಇಟ್ಟಿದ್ದ ಒಂದು ಪರ್ಸ್ ನೊಳಗಿದ್ದ ಚಿನ್ನದ ಬಳೆಗಳನ್ನು ಆರೋಪಿ ಸೈಯದ್ ನವಾಬ್ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಇವರನ್ನು ನ.2 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ನೀಡಲಾಗಿದೆ.
ಆರೋಪಿಗಳು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಹುಬ್ಬಳ್ಳಿ, ತುಮಕೂರು, ಬೆಂಗಳೂರು, ಮೈಸೂರು ನಗರದಲ್ಲಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದು, ಈ ಸ್ಥಳಗಳಿಂದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 75,00,000 ರೂ. ಮೌಲ್ಯದ 1 ಕೆಜಿ 439 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.