"ಎರಡೂವರೆ ವರ್ಷದಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ''
ಮೈಸೂರು, ನವೆಂಬರ್ 25: ಮುಂದಿನ ಎರಡೂವರೆ ವರ್ಷ ನನಗೆ ಅವಕಾಶ ಇದೆ. ಅಷ್ಟರಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಅಪೇಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುಡುಕುತೊರೆ ಗ್ರಾಮದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ ಎಂದು ಘೋಷಿಸಿದರು.
"ಸಿಎಂ ಆಗುವ ತನಕ ನಾನು ಬೇಕಿತ್ತು, ಈಗ ನನ್ನ ದರ್ದಿಲ್ಲ: ನೋಡ್ಕೋತ್ತೀನಿ''
ಒಂದೇ ಬಾರಿಗೆ 10 ಕೋಟಿ ಬಿಡುಗಡೆ ಮಾಡುತ್ತೇನೆ. ಎರಡು ವರ್ಷದಲ್ಲಿ ಕೆಲಸ ಮುಗಿಸಬೇಕು ಎಂದ ಅವರು, ಪರೋಕ್ಷವಾಗಿ ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಆಗಿರುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ದೇವಸ್ಥಾನ ಅಭಿವೃದ್ಧಿಗೆ ಹಣದ ಕೊರತೆ ಬರಲ್ಲ. ದೇವರೆ ಹಣ ಕೊಡುತ್ತಾನೆ, ದೇವಸ್ಥಾನಕ್ಕೆ ಕೊಡಲು ಯಾಕೆ ತೊಂದರೆ. 136 ದೇವಸ್ಥಾನಗಳಿಗೆ 136 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.
ಒಬ್ಬ ಮನುಷ್ಯನ ಸಾಧನೆ ಮಾತನಾಡಬೇಕು, ಮಾತೇ ಸಾಧನೆ ಆಗಬಾರದು. ಇನ್ನೂ ಎರಡೂವರೆ ವರ್ಷ ನನ್ನ ಅಧಿಕಾರ ಇದೆ. ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈ ಮೂಲಕ ಸಾಧನೆ ಮಾತನಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಡುಕುತೊರೆಯ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಜೀರ್ಣೋದ್ಧಾರದ ಅಡಿಗಲ್ಲಿಗೆ ಯಡಿಯೂರಪ್ಪ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಟಿ ಸೋಮಶೇಖರ್ ಸೇರಿದಂತೆ ಇತರರು ಭಾಗಿಯಾಗಿದ್ದರು.