ಕೋವಿಡ್ ಸಂಕಷ್ಟದಲ್ಲೂ ಶ್ರೀಕಂಠೇಶ್ವರ ದೇಗುಲಕ್ಕೆ 1.98 ಕೋಟಿ ಆದಾಯ
ಮೈಸೂರು, ಡಿಸೆಂಬರ್ 25: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಯಿತು. ಕೋವಿಡ್ ಸಂಕಷ್ಟದ ನಡುವೆಯೂ 2 ತಿಂಗಳ ಅವಧಿಯಲ್ಲಿ 1.98 ಕೋಟಿ ರುಪಾಯಿಗೂ ಹೆಚ್ಚಿನ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಒಟ್ಟು 37 ಹುಂಡಿಗಳ ಪೈಕಿ 31 ಹುಂಡಿಗಳಲ್ಲಿ 1,98,47,290 ರೂ. ನಗದು ಹಾಗೂ 77 ಗ್ರಾಂ ಚಿನ್ನ, 5 ಕೆ.ಜಿ 700 ಗ್ರಾಂ ತೂಕದ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 79,700 ರೂ. ನಿಷೇಧಿತ ನೋಟುಗಳು ಸಿಕ್ಕಿವೆ. ಇವುಗಳಲ್ಲಿ 1 ಸಾವಿರ ಮುಖಬೆಲೆಯ 12 ನೋಟುಗಳು, 500 ರೂ. ಮುಖಬೆಲೆಯ 170 ನಿಷೇಧಿತ ನೋಟುಗಳು ಇದ್ದವು.
ಮೈಸೂರು; ಒಂಟಿಕೊಪ್ಪಲಿನಲ್ಲಿ ವೆಂಕಟೇಶ್ವರನ ದರ್ಶನವಿಲ್ಲ
ಬ್ಯಾಂಕ್ ಆಫ್ ಬರೋಡದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಸಹಾಯಕರಾಗಿ 200 ಸ್ವಸಹಾಯ ಸಂಘದ ಮಹಿಳೆಯರು, 50 ಮಂದಿ ದೇವಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 250 ಸಿಬ್ಬಂದಿಗಳನ್ನು ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು.