ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಚಾಮುಂಡೇಶ್ವರಿ ಮೊರೆ ಹೋದ ಎಚ್.ಕುಸುಮಾ
ಮೈಸೂರು, ನವೆಂಬರ್ 6: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಮುಗಿದಿದ್ದು, ಎಲ್ಲರ ಗಮನ ಇದೀಗ ಫಲಿತಾಂಶದತ್ತ ನೆಟ್ಟಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಉಪ ಸಮರದ ಫಲಿತಾಂಶಕ್ಕೂ ಮುನ್ನ ಚಾಮುಂಡೇಶ್ವರಿ ಸನ್ನಿಧಿಗೆ ಬಂದಿರುವ ಕುಸುಮ, ತಂದೆ ಹನುಮಂತಪ್ಪ ಅವರ ಜೊತೆಗೂಡಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ಕುಸುಮಾ ಅವರಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.
ಮೈಸೂರಿನ ಹಲವೆಡೆ ಉತ್ತಮ ಮಳೆ ದಾಖಲು
ಆರ್.ಆರ್ ನಗರ ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಆ ಬಳಿಕ ಮಾತನಾಡಿದ ಅವರು, ನನಗೆ ಗೆಲ್ಲುವ ಆತ್ಮವಿಶ್ವಾಸ ಇದೆ. ಶೇಕಡವಾರು ಕಡಿಮೆ ಆಯಿತು ಎಂಬ ಕಾರಣಕ್ಕೆ ಈ ವಿಶ್ವಾಸ ವ್ಯಕ್ತಪಡಿಸುತ್ತಿಲ್ಲ. ಜನರು ನನಗೆ ತೋರಿಸಿದ ಪ್ರೀತಿಯಿಂದ ಈ ವಿಶ್ವಾಸ ಮೂಡಿದೆ ಎಂದು ತಿಳಿಸಿದರು.
ಈ ಬಾರಿ ನಿಷ್ಪಕ್ಷಪಾತ ಚುನಾವಣೆ ನಡೆದಿದೆ, ನಾವು ಇದನ್ನೇ ಬಯಸಿದ್ದೆವು. ಎಲ್ಲಾ ಪಕ್ಷದ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಗೆಲುವು ನಿಶ್ಚಿತ, ಚುನಾವಣೆ ಫಲಿತಾಂಶದ ಬಳಿಕ ಉಳಿದ ಎಲ್ಲ ಮಾಹಿತಿಯನ್ನು ಜನರಿಗೆ ಹೇಳುತ್ತೇನೆ ಎಂದು ಮೈಸೂರಿನಲ್ಲಿ ಆರ್.ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹೇಳಿದರು.
"ಮೈಸೂರು ಡಿಸಿಗೆ ನಾಡಿನ ಪರಂಪರೆ ಕುರಿತು ತಿಳಿವಳಿಕೆ ನೀಡಿ"; ಪತ್ರ ಬರೆದ ಸಾರಾ ಮಹೇಶ್
ಸಿದ್ದರಾಮಯ್ಯ ಸಾಹೇಬ್ರು, ಶಿವಕುಮಾರ್ ಅಣ್ಣ ಮಾರ್ಗದರ್ಶನ ಚೆನ್ನಾಗಿತ್ತು. ಚುನಾವಣೆಗೆ ಮಾತ್ರ ನಾನು ಸೀಮಿತವಾಗಲ್ಲ. ಚುನಾವಣೆ ನಂತರವೂ ನಾನು ಕ್ಷೇತ್ರದ ಜನರ ಜೊತೆ ಇರುತ್ತೇನೆ. ಶೇಕಡಾವಾರು ಕಡಿಮೆ ವಿಚಾರವಾಗಿ, ಬುದ್ಧಿವಂತ ಮತದಾರರು ಪ್ರಸಕ್ತ ಬೆಳವಣಿಗೆಯಿಂದ ಬರದೇ ಇರಬಹುದು. ಕೋವಿಡ್ ಕಾರಣದಿಂದಲೂ ಮತಗಟ್ಟೆ ಬಳಿ ಮತದಾರರು ಬಂದಿಲ್ಲ ಎಂದರು.