ಆನೆಗಳು ಬಂದ ಮೇಲೆ ಸರಳ ದಸರಾ ಮಾತೆಲ್ಲಿ : ಪ್ರಮೋದಾದೇವಿ ಒಡೆಯರ್
ಮೈಸೂರು, ಆಗಸ್ಟ್ 24: "ದಸರೆಗೆ ಆನೆ ಬಂದ ಮೇಲೆ ಅದು ಸರಳ ಆಚರಣೆ ಹೇಗೆ ಆಗಲಿದೆ" ಎಂದಿದ್ದಾರೆ ರಾಜಮಾತೆ ಪ್ರಮೋದಾದೇವಿ ಒಡೆಯರ್.
ದಸರಾ ಗಜಪಡೆ ಇನ್ ರಿಲ್ಯಾಕ್ಸ್ ಮೂಡ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನವೋ ಜನ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜವಂಶಸ್ಥರಿಂದ ಪ್ರತಿವರ್ಷವೂ ಸರಳ ದಸರೆಯನ್ನೇ ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿಯೂ ಹಾಗೆಯೇ ಶಾಸ್ತ್ರೋಕ್ತವಾಗಿಯೇ ನಡೆಯಲಿದೆ" ಎಂದರು.
ಸರ್ಕಾರ ಸರಳ ದಸರೆ ಆಚರಣೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, "ಸರ್ಕಾರದ ದಸರೆ ಆಚರಣೆಯಲ್ಲಿ ಸರಳತೆ ಕಂಡು ಬರುತ್ತಿಲ್ಲ. ದಸರೆಯ ಜಂಬೂಸವಾರಿಗೆ ಸರ್ಕಾರದ ವತಿಯಿಂದ ಆನೆ ಕರೆತಂದ ಮೇಲೆ ಸರಳ ಎಂದು ಕರೆಸಿಕೊಳ್ಳುವುದಿಲ್ಲ. ಸರಳ ದಸರಾ ಎಂಬ ಮಾತು ಮಾಧ್ಯಮಗಳಿಂದಲೇ ನಾನು ಕೇಳಿಸಿಕೊಳ್ಳುತ್ತಿರುವುದು" ಎಂದು ಮುಗುಳ್ನಕ್ಕರು. ಹಾಗೆಯೇ "ಮೈಸೂರು ದಸರೆಯ ವಿಚಾರದಲ್ಲಿ ಸರ್ಕಾರ ಸಲಹೆ ಕೇಳಿದರೆ ನೀಡಲು ನಾನು ಸಿದ್ಧ" ಎಂದು ಹೇಳಿದರು.
ದೇವರಾಜ ಮಾರುಕಟ್ಟೆ ನವೀಕರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ಕಳೆದ ಬಾರಿಯೂ ಹೇಳಿದ್ದೇನೆ. ಹಳೆ ಕಟ್ಟಡವನ್ನೇ ಉಳಿಸಿಕೊಂಡು ಮುಂದುವರೆಯಬೇಕು. ದೇವರಾಜ ಮಾರುಕಟ್ಟೆ ವಿನ್ಯಾಸವನ್ನು ಈಗಿನ ಮಾಲ್ ಗಳೂ ಅನುಸರಿಸುತ್ತಿವೆ. ತಜ್ಞರ ಅಭಿಪ್ರಾಯದಂತೆ ಕಟ್ಟಡ ಪುನರ್ ಜೀವನಗೊಳಿಸಬೇಕು. ಪಾರ್ಕಿಂಗ್ ವಿಚಾರವಾಗಿ ತೊಂದರೆಯಾಗುತ್ತಿದೆ. ಅದಕ್ಕೆ ಬೇರೆ ಕಡೆ ವ್ಯವಸ್ಥೆ ಮಾಡಿ. ಹಾಗೆಯೇ ದೇವರಾಜ ಮಾರುಕಟ್ಟೆಯನ್ನು ದುರಸ್ತಿ ಮಾಡಿದರೆ ಸಾಕು" ಎಂದು ಹೇಳಿದರು.