ಕಾಡಾನೆ ಅರಣ್ಯ ದಾಟದಂತೆ ರೋಪ್ ಬ್ಯಾರಿಯರ್ ಅಳವಡಿಕೆ
ಮೈಸೂರು, ಜೂನ್ 19; "ಅರಣ್ಯದಿಂದ ನಾಡಿನತ್ತ ಬರುವ ಕಾಡಾನೆಗಳನ್ನು ತಡೆಯುವ ಸಲುವಾಗಿ ರಾಜ್ಯದ ವಿವಿಧ ಅರಣ್ಯಗಳಲ್ಲಿ ಸುಮಾರು 600 ಕಿ. ಮೀ. ತಡೆ ಗೋಡೆ ನಿರ್ಮಿಸುವ ಅಗತ್ಯವಿದ್ದು ಈಗಾಗಲೇ 200 ಕಿ. ಮೀ. ನಷ್ಟು ರೈಲ್ವೆ ಹಳಿ ತಡೆ ಗೋಡೆ ನಿರ್ಮಿಸಲಾಗಿದೆ. ಉಳಿದಂತೆ ಕಡಿಮೆ ವೆಚ್ಚದ ರೋಪ್ ಬ್ಯಾರಿಯರ್ ಬಳಸುವ ಬಗ್ಗೆ ಚಿಂತನೆ ನಡೆಸಲಾಗಿದೆ" ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಮೊದಲ ಬಾರಿಗೆ ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ವನ್ಯಜೀವಿ ವಲಯದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿರುವ ರೋಪ್ ಬ್ಯಾರಿಯರ್ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.
ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ?
ನಂತರ ಮಾತನಾಡಿ, "ನಾಗರಹೊಳೆಯ ಅರಣ್ಯದಂಚಿನಲ್ಲಿ ನಿರ್ಮಿಸಲಾಗಿರುವ ರೋಪ್ ಬ್ಯಾರಿಯರ್ ಯಶಸ್ವಿಯಾಗಿ ಕಾಡಾನೆಗಳು ಅರಣ್ಯ ದಾಟಿ ಹೊರಹೋಗುವುದು ನಿಯಂತ್ರಣವಾದರೆ ಮುಂದಿನ ದಿನಗಳಲ್ಲಿ ನಾಗರಹೊಳೆ, ಬಂಡೀಪುರ, ಹಾಸನದಲ್ಲಿಯೂ ಇದನ್ನು ಮುಂದುವರೆಸಲಾಗುತ್ತದೆ" ಎಂದರು.
ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!
"50 ಕಿ. ಮೀ. ವ್ಯಾಪ್ತಿಯಲ್ಲಿ ಈ ಬಾರಿ ರೋಪ್ ಬ್ಯಾರಿಯರ್ ನಿರ್ಮಿಸಲಾಗುವುದು. ಸದ್ಯ ನಾಗರಹೊಳೆ ಉದ್ಯಾನದಲ್ಲಿ 4. 5 ಕಿ. ಮೀ. ನಿರ್ಮಿಸಲಾಗುತ್ತಿದೆ. ಪ್ರತಿ ಕಿ. ಮೀ. ಗೆ 60 ಲಕ್ಷ ರೂ. ವೆಚ್ಚವಾಗಲಿದೆ. ಇದಕ್ಕೆ ಹೋಲಿಸಿದರೆ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು 1.5 ಕೋಟಿ ರೂ. ವೆಚ್ಚವಾಗುತ್ತಿತ್ತು" ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ರಾಮನಗರ; ಚನ್ನಪಟ್ಟಣದಲ್ಲಿ ಆನೆ ದಾಳಿಗೆ ಮನೆ, ಬೆಳೆ ನಾಶ
ತಡೆಗೋಡೆ ಮಾಡಲು ರೈಲ್ವೆ ಹಳಿ ಸಿಗುತ್ತಿಲ್ಲ
"ಇದೀಗ ರೈಲ್ವೆ ಹಳಿ ಸಿಗುತ್ತಿಲ್ಲ, ವೆಚ್ಚವೂ ಸಹ ದುಬಾರಿಯಾಗಿದ್ದರಿಂದ, ಹೊಸ ಮಾದರಿಯ ರೋಪ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ. ರೋಪ್ ಬ್ಯಾರಿಯರ್ ಅನ್ನು ಈಗಾಗಲೇ ತಮಿಳುನಾಡಿನ ಹೊಸೂರಿನ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಅದನ್ನು ಪರಿಶೀಲಿಸಿ ಬಂದಿದ್ದು,. ಅಲ್ಲಿ ಕಾಡಾನೆಗಳ ಹಾವಳಿ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಗೊಂಡಿದೆ. ಹೀಗಾಗಿ ಇಲ್ಲಿಯೂ ರೋಪ್ ಬ್ಯಾರಿಯರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ" ಎಂದು ಸಚಿವ ಉಮೇಶ್ ಕತ್ತಿ ವಿವರಣೆ ನೀಡಿದರು.
200 ಕಿ. ಮೀ. ರೈಲ್ವೆ ಹಳಿ ತಡೆ ಗೋಡೆ
"ರಾಜ್ಯದಲ್ಲಿ ಅರಣ್ಯದಂಚಿನಲ್ಲಿ 600 ಕಿ. ಮೀ. ತಡೆ ಗೋಡೆ ನಿರ್ಮಿಸಬೇಕಿದ್ದು, ಈಗಾಗಲೇ 200 ಕಿ. ಮೀ. ನಷ್ಟು ರೈಲ್ವೆ ಹಳಿ ತಡೆ ಗೋಡೆ ನಿರ್ಮಿಸಲಾಗಿದೆ. ಇದೀಗ ಕಡಿಮೆ ವೆಚ್ಚದ ರೋಪ್ ಬ್ಯಾರಿಯರ್ ಯಶಸ್ವಿಯಾದಲ್ಲಿ ಮುಂದೆ ಎಲ್ಲೆಡೆ ಇದೇ ಮಾದರಿಯ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ರಾತ್ರಿ ವೇಳೆ ಕಾಡಾನೆ ಹಾವಳಿ ತಡೆಯಲು ಸಿಬ್ಬಂದಿಗಳ ಕೊರತೆಯಿದ್ದು, ವಿಶೇಷ ಕಾವಲುಗಾರರನ್ನು ನೇಮಿಸುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಈಗಾಗಲೇ ಸಾಕಷ್ಟು ಸಿಬ್ಬಂದಿ ನೇಮಿಸಲಾಗಿದೆ. ಇಲಾಖೆಗೆ ಪ್ರತಿವರ್ಷ ಶೇ. 20ರಷ್ಟು ಸಿಬ್ಬಂದಿಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ" ಎಂದರು.
ಕಸ್ತೂರಿರಂಗನ್ ವರದಿ ಜಾರಿ ಇಲ್ಲ
ಪಶ್ಚಿಮಘಟ್ಟಗಳ ಹಸಿರುವಲಯ ಸಂರಕ್ಷಣೆಗಾಗಿ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಬಾರದೆಂದು ಶಾಸಕರಾದ ಮಂಜುನಾಥ ಮತ್ತು ಅನಿಲ್ ಚಿಕ್ಕಮಾದು ಸಚಿವರನ್ನು ಒತ್ತಾಯಿಸಿದರು. ರಾಜ್ಯ ಸರಕಾರ ಈಗಾಗಲೇ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದ್ದು, ಜಾರಿಗೆ ತರುವುದಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ ರೈಲ್ವೆ ಹಳಿ ತಡೆಗೋಡೆ ನಿರ್ವಹಣೆಯಿಲ್ಲದೆ ಅಳವಡಿಸಿರುವ ಕಳಪೆ ಬೋಲ್ಟ್ಗಳು ಕಳಚಿಬೀಳುತ್ತಿದ್ದು, ಕಾಡಾನೆಗಳು ಸರಾಗವಾಗಿ ಹೊರ ಬರುತ್ತಿವೆ ಎಂಬ ಎಂಬ ದೂರುಗಳು ಕೇಳಿ ಬಂದವು. ಇದಕ್ಕೆ ಮುಂದೆ ಗುಣಮಟ್ಟದ ಬೋಲ್ಟ್ ಗಳನ್ನು ಅಳವಡಿಸಿ ಇಲಾಖೆ ವತಿಯಿಂದಲೇ ನಿರ್ವಹಣೆ ಮಾಡಲಾಗುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು.
ರೋಪ್ ಬ್ಯಾರಿಯರ್ ಗುಣಮಟ್ಟ ಪರಿಶೀಲನೆ
ಈ ಸಂದರ್ಭ ನೂತನವಾಗಿ ಅನುಷ್ಠಾನಗೊಳಿಸುತ್ತಿರುವ ರೋಪ್ ಬ್ಯಾರಿಯರ್ ಗೆ ಅಳವಡಿಸಿರುವ ಸಿಮೆಂಟ್ ಕಂಬ ಹಾಗೂ ಉಕ್ಕಿನ ಹಗ್ಗದ ಸಾಮರ್ಥ್ಯವನ್ನು ಸಾಕಾನೆ ಭೀಮನಿಂದ ನೂಕಿಸಿ ಸಚಿವ-ಶಾಸಕರ ಸಮ್ಮುಖದಲ್ಲೇ ಗುಣಮಟ್ಟವನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಎಪಿಸಿಸಿಎಫ್ ಜಗತ್ರಾಮ್, ಕೊಡಗು ಸಿಎಫ್ ಡಿ. ಎನ್. ಡಿ, ಮೂರ್ತಿ, ಡಿಸಿಎಫ್ಗಳಾದ ಮಹೇಶ್ಕುಮಾರ್, ಸೀಮಾ, ಎಸಿಎಫ್ ಸತೀಶ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.