ಮೈಸೂರಲ್ಲಿ ಗೆಣಸು ಮೇಳ:ಬಾಯಲ್ಲಿ ನೀರು ತರಿಸಿದ ಪಾಯಸ, ಚಕ್ಕುಲಿ
ಮೈಸೂರು, ಜನವರಿ 20: ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ, ಆದಿವಾಸಿಗಳ ಪ್ರಿಯ ಆಹಾರ, ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವ, ಪೋಷಕಾಂಶಗಳ ಕಣಜವೇ ಆಗಿರುವ ಗೆಡ್ಡೆ ಗೆಣಸುಗಳು ಪ್ರಥಮ ಬಾರಿಗೆ ಅರಮನೆಗಳ ನಗರಿಯಲ್ಲಿ ರಾರಾಜಿಸುತ್ತಿವೆ.
ಮೈಸೂರಿನ ತೋಟಗಾರಿಕೆ ಇಲಾಖೆ, ಸಹಜ ಸಮೃದ್ಧ ಸಂಸ್ಥೆ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಕರ್ಜನ್ ಪಾರ್ಕ್ ನಲ್ಲಿ ಆಯೋಜಿಸಿರುವ ಗೆಡ್ಡೆ ಗೆಣಸು ಮೇಳ ಜನಾಕರ್ಷಣೀಯವಾಗಿದ್ದು, ಹಲವಾರು ಬಗೆಯ ಗೆಡ್ಡೆ, ಗೆಣಸುಗಳು ನೋಡುಗರ ಹೃನ್ಮನ ಸೆಳೆದವು.
ಜನವರಿ 21 ರಿಂದ ಕುಂದಾಪುರದಲ್ಲಿ ಸಿರಿಧಾನ್ಯ ಮೇಳ
ಆಯುರ್ವೇದ ಮತ್ತು ಜನಪದ ವೈದ್ಯ ಪದ್ಧತಿಯ ಔಷಧಿಗಳ ತಯಾರಿಕೆಯಲ್ಲಿ ಬಹುಪಾಲು ಗೆಡ್ಡೆ ಗೆಣಸನ್ನು ಬಳಸಲಾಗುತ್ತದೆ ಎನ್ನಲಾಗಿದೆ. ಸಾಮಾನ್ಯವಾಗಿ ಈ ಗೆಡ್ಡೆ ಗೆಣಸುಗಳು ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಕೆಲ ರೈತರು ಭತ್ತ, ಮತ್ತಿತರ ಪ್ರಧಾನ ಬೆಳೆಯ ಜೊತೆಗೆ ಗೆಡ್ಡೆ ಗೆಣಸನ್ನು ಅಲ್ಪಾವಧಿ ಬೆಳೆಯಾಗಿ ಕೃಷಿ ಮಾಡುತ್ತಾರೆ ಎಂಬುದು ಉತ್ತರ ಕನ್ನಡ ಜಿಲ್ಲೆಯಿಂದ ಮೇಳದಲ್ಲಿ ಭಾಗವಹಿಸಿರುವ ರೈತ ಯೋಗೇಶ್ ಅವರ ಮಾತು.
ಕಾಚಾಲು, ಮರಗೆಣಸು, ಮುಡೆಗೆಣಸು, ಕೆಸೆ ಮುಂತಾದವು ಗ್ರಾಹಕರಲ್ಲಿ ಆಶ್ಚರ್ಯ ಮೂಡಿಸುವ ಜೊತೆಗೆ ಖರೀದಿಗೂ ಪ್ರೇರಣೆ ನೀಡುತ್ತಿವೆ. ಮೇಳದಲ್ಲಿ ಅಂದಾಜು 200ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸುಗಳಿವೆ. ಸುವರ್ಣ ಗೆಡ್ಡೆ 10 ಕೆ.ಜಿ. ತೂಕದ ನಡಂ ಚೆನಾ, ಚೊರ ಕಾಚಿಲ್, ನ್ಯಾರೊ ಕಾಜಂಗು, ಅರಿ ಕಾಜಂಗು ಮತ್ತಿತರ ಗೆಡ್ಡೆಗಳು ಮಜಬೂತಾಗಿವೆ.
ಕೇರಳದ ವಯನಾಡ್, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಸೊರಬ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದ ಗೆಡ್ಡೆ ಗೆಣಸುಗಳು ಮೇಳದಲ್ಲಿ ವೀಕ್ಷಕರ ಮನಗೆಲ್ಲುತ್ತಿವೆ.
ಗೆಣಸಿನ ಚಕ್ಕುಲಿ, ಬಿಸ್ಕತ್, ಹಲ್ವಾ, ಮೈಸೂರು ಪಾಕ್, ಶಂಕರ ಪಾಳೆ, ಕೇಕ್, ಶ್ಯಾವಿಗೆ, ಉಪ್ಪಿನಕಾಯಿ ಇತ್ಯಾದಿ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತವೆ. ಸಿಹಿ ಗೆಣಸಿನ ಪಾಯಸ, ಮರ ಗೆಣಸು ಮಿಶ್ರಣದ ಇಡ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ.