ರೋಹಿಣಿ ಸಿಂಧೂರಿ vs ಶಿಲ್ಪಾನಾಗ್: ಇಂದು ಆಡಳಿತಾತ್ಮಕ ನಿರ್ಣಾಯಕ ದಿನ
ಮೈಸೂರು, ಜೂನ್ 4: ಮೈಸೂರಿನಲ್ಲಿ ಶುರುವಾಗಿರುವ ಐಎಎಸ್ ಅಧಿಕಾರಿಗಳ ಜಟಾಪಟಿ ಇದೀಗ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ನಡುವಿನ ತಿಕ್ಕಾಟ ರಾಜೀನಾಮೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಡಿಸಿ ಹಾಗೂ ಆಯುಕ್ತೆ ನಡುವೆ ಹಗ್ಗಜಗ್ಗಾಟಕ್ಕೆ ಆಡಳಿತಾತ್ಮಕವಾಗಿ ಇಂದು ನಿರ್ಣಾಯಕ ದಿನವಾಗಿದೆ.
Recommended Video
ಇಬ್ಬರು ಐಎಎಸ್ ಅಧಿಕಾರಿಗಳ ಕಿತ್ತಾಟ, ಮುಸುಕಿನ ಗುದ್ದಾಟಕ್ಕೆ ಅಂಕಿತ ಹಾಡುವ ಸಲುವಾಗಿ ಶುಕ್ರವಾರ ಮೈಸೂರಿಗೆ ಪ್ರಮುಖರು ಭೇಟಿ ನೀಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರ ನಡುವಿನ ಆರೋಪ-ಪ್ರತ್ಯಾರೋಪಗಳಿಗೆ ಇತಿಶ್ರೀ ಹಾಡಲು ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಧ್ಯ ಪ್ರವೇಶ ಮಾಡಲಿದ್ದಾರೆ.
ಎಸ್.ಟಿ ಸೋಮಶೇಖರ್ ಸಹ ಮೈಸೂರಿಗೆ ಆಗಮಿಸಲಿದ್ದಾರೆ
ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಲಿರುವ ಮುಖ್ಯ ಕಾರ್ಯದರ್ಶಿಗಳು, ಇಬ್ಬರು ಅಧಿಕಾರಿಗಳ ನಡುವೆ ಉಂಟಾಗಿರುವ ಬಿರುಕಿಗೆ ಕಾರಣ ಏನೆಂಬುದನ್ನು ಕೂಲಂಕುಶವಾಗಿ ಚರ್ಚಿಸುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಹ ಮೈಸೂರಿಗೆ ಆಗಮಿಸಲಿದ್ದು, ಜಿಲ್ಲೆಯ ಪ್ರಮುಖ ಅಧಿಕಾರಿಗಳು ನಡುವೆ ಉಂಟಾಗಿರುವ ಭಿನ್ನಮತ ಶಮನಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇವರಿಬ್ಬರ ಮೈಸೂರು ಭೇಟಿ ಬಗ್ಗೆ ಸಾಕಷ್ಟು ನಿರೀಕ್ಷೆ ಜೊತೆಗೆ ಕುತೂಹಲ ಮೂಡಿಸಿದೆ.
ಪರ-ವಿರೋಧದ ಅಭಿಯಾನ
ಮೈಸೂರಿನಲ್ಲಿ ಡಿಸಿ vs ಆಯುಕ್ತೆ ಕಾಳಗ ಶುರುವಾದ ಬೆನ್ನಲ್ಲೇ, ಇಬ್ಬರು ಐಎಎಸ್ ಅಧಿಕಾರಿಗಳ ನಡುವೆ ಪರ-ವಿರೋಧದ ಅಭಿಯಾನ ಶುರುವಾಗಿದೆ. ಪಾಲಿಕೆ ಆಯುಕ್ತರ ರಾಜೀನಾಮೆ ನಿರ್ಧಾರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಅಧಿಕಾರಿಗಳ ಕುರಿತು ಪರ-ವಿರೋಧದ ಪೋಸ್ಟ್ಗಳು ಹರಿದಾಡುತ್ತಿವೆ. ಕೆಲವರು ಆಯುಕ್ತೆ ಶಿಲ್ಪನಾಗ್ ಪರ ನಿಂತರೆ, ಇನ್ನೂ ಕೆಲವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಸದ್ಯ ಬಹುತೇಕ ಮಂದಿಯ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಪೇಜ್ನಲ್ಲಿ "ಐಯಮ್ ಸ್ಟ್ಯಾಂಡ್ ವಿಥ್ ಮೇಡಮ್ ಶಿಲ್ಪನಾಗ್" ಹಾಗೂ "ಐ ಯಮ್ ಸ್ಟ್ಯಾಂಡ್ ವಿಥ್ ಮೇಡಮ್ ರೋಹಿಣಿ ಸಿಂಧೂರಿ" ಎಂಬ ಪೋಸ್ಟ್ಗಳು ಹರಿದಾಡುತ್ತಿವೆ.
ಡಿಸಿ ವಿರುದ್ಧ ಇಂದು ಪ್ರತಿಭಟನೆ
ಪಾಲಿಕೆ ಆಯುಕ್ತೆಯ ರಾಜೀನಾಮೆ ನೀಡಿರುವ ಬೆನ್ನಲ್ಲೇ ವಿವಿಧ ಸಂಘಟನೆಗಳು ಐಎಎಸ್ ಅಧಿಕಾರಿ ಶಿಲ್ಪಾನಾಗ್ ಪರ ನಿಂತಿವೆ. ಈಗಾಗಲೇ ಪಾಲಿಕೆ ಆಯುಕ್ತರ ಪರ ನಿಲುವು ತೋರಿಸಿರುವ ಸಂಘಟನೆಗಳು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಂದು ಪ್ರತಿಭಟನೆ ನಡೆಸಲಿದ್ದಾರೆ. ಈ ನಡುವೆ ಪಾಲಿಕೆ ಸದಸ್ಯರು ಹಾಗೂ ಪೌರಕಾರ್ಮಿಕರು ಸಹ ಆಯುಕ್ತೆ ಶಿಲ್ಪಾನಾಗ್ ಪರ ನಿಂತಿದ್ದು, ಇಂದು ಪಾಲಿಕೆ ಕಚೇರಿಯ ಮುಂಭಾಗ ಒಂದೂಗೂಡುವ ಜಮಾಯಿಸುವ ಪೌರ ಕಾರ್ಮಿಕರು, ಶಿಲ್ಪಾನಾಗ್ ತಮ್ಮ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಲಿದ್ದಾರೆ.
ಶುರುವಾಯ್ತು ಪತ್ರ ಅಭಿಯಾನ
ಜಿಲ್ಲಾಧಿಕಾರಿಗಳ ನಡೆಗೆ ಬೇಸತ್ತು ಪಾಲಿಕೆ ಆಯುಕ್ತರು ರಾಜೀನಾಮೆ ನೀಡಿರುವ ಪರಿಣಾಮ, ಶಿಲ್ಪಾನಾಗ್ ಪರ ಪತ್ರ ಬೆಂಬಲ ವ್ಯಕ್ತವಾಗಿದೆ. ಮೈಸೂರಿನ ಅನೇಕ ನಾಯಕರಿಂದ ಪತ್ರದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಶಾಸಕ ಎಸ್.ಎ ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಅವರು ಶಿಲ್ಪಾನಾಗ್ ಪರ ಬ್ಯಾಟಿಂಗ್ ಮಾಡಿದ್ದಾರೆ.