ಮೈಸೂರು ದಸರಾ; ಸಾರ್ವಜನಿಕರಿಗೆ ನಿರ್ಬಂಧ, ಬಿಕೋ ಎನ್ನುತ್ತಿವೆ ರಾಜಬೀದಿ
ಮೈಸೂರು, ಅಕ್ಟೋಬರ್ 26: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದ್ದು ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ದಸರಾ ಸಂದರ್ಭದಲ್ಲಿ ಸಾವಿರಾರು ಜನರಿಂದ ಕಿಕ್ಕಿರಿಯುತ್ತಿದ್ದ ರಾಜಬೀದಿಗಳು ಇದೀಗ ಖಾಲಿಖಾಲಿಯಾಗಿವೆ. ಅರಮನೆ ಸುತ್ತಮುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲೂ ಸಾರ್ವಜನಿಕರು ನಿಲ್ಲುವಂತಿಲ್ಲ. ಪೊಲೀಸರು ಸಾರ್ವಜನಿಕರನ್ನು ಹೊರಗಡೆ ಕಳುಹಿಸುತ್ತಿದ್ದು, ರಾಜಬೀದಿಗಳಲ್ಲಿ ನಿಶಬ್ದ ಆವರಿಸಿದೆ.
ಜಂಬೂಸವಾರಿಗೆ ಕ್ಷಣಗಣನೆ... ಜನರಿಲ್ಲದ ಮೈಸೂರು ದಸರಾ
ನಿಲ್ದಾಣಕ್ಕೆ ಬರುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿರುವ ಹಿನ್ನೆಲೆ ನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಅಗ್ರಹಾರ, ರಾಮಸ್ವಾಮಿ ಸರ್ಕಲ್, ದಾಸಪ್ಪ ಸರ್ಕಲ್, ಫೈಲಟ್ ಸರ್ಕಲ್, ಗನ್ ಹೌಸ್ ಬಳಿಯಿಂದಲೇ ಬಸ್ ಗಳು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿ ವರ್ಷದ ದಸರಾ ಜಂಬೂಸವಾರಿ ದಿನ ವಿವಿಧೆಡೆಗಳಿಂದ ಆಗಮಿಸಿದ ಜನರಿಂದ ಕಿಕ್ಕಿರಿದು ಗಿಜಿಗುಡುತ್ತಿದ್ದ ರಾಜಬೀದಿ ಬಿಕೋ ಎನ್ನುತ್ತಿದೆ.