ಮೈಸೂರಿನಲ್ಲಿ ಕೊರೊನಾ ಬಗ್ಗೆ ಆತಂಕಕಾರಿ ಮಾಹಿತಿ ಕೊಟ್ಟ ಡಿಸಿ
ಮೈಸೂರು, ಏಪ್ರಲ್ 03: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇದೀಗ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿರುವುದು ಇಲ್ಲಿನವರನ್ನು ಕಂಗಾಲು ಮಾಡಿದೆ.
ನಂಜನಗೂಡು ತಾಲೂಕಿನ ಜ್ಯುಬಿಲಿಯಂಟ್ ಔಷಧ ತಯಾರಿಕಾ ಕಂಪನಿಯ ಗುಣಮಟ್ಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆ ವ್ಯಕ್ತಿ ಸಂಪರ್ಕದಿಂದ ಜಿಲ್ಲೆಯಲ್ಲಿ ಈವರೆಗೆ 16 ಜನರಿಗೆ ಸೋಂಕು ತಗುಲಿರುವುದಲ್ಲದೆ, ಆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೂ ಸೋಂಕು ತಗುಲಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಜ್ಯುಬಿಲಿಯಂಟ್ಸ್ ಕಾರ್ಖಾನೆ ಕೊರೊನಾ ಕೇಸ್ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆತಂಕಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಎಲ್ಲ ಸ್ಯಾಂಪಲ್ ಪರೀಕ್ಷೆಗೆ 12 ದಿನ ಬೇಕು
ಕೊರೊನಾ ವೈರಸ್ ಸೋಂಕಿತರ ಸಂಪರ್ಕ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ 223 ಜನರ ಸ್ಯಾಂಪಲ್ ಪರಿಕ್ಷೆ ನಡೆಯಬೇಕಿದೆ. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರೆದಿದೆ ಎಂದರು.
ಸೋಂಕಿತರನ್ನು ಸಂಪರ್ಕಿಸಿರುವವರ ಸಂಖ್ಯೆ ನೂರು ಆಗಬಹುದು, ಸಾವಿರವು ಆಗಬಹುದು. ಎಲ್ಲ ಸ್ಯಾಂಪಲ್ ಪರೀಕ್ಷೆಗೆ 12 ದಿನ ಕಳೆಯಬೇಕು. ಇಲ್ಲವಾದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಡಿಸಿ ತಿಳಿಸಿದರು.
ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರಕರಣಕ್ಕೆ ಗರಂ ಆದ ಡಿಸಿ
12 ದಿನ ಕಳೆದ ಮೇಲೆಯೇ ಸೋಂಕಿನ ನಿಖರ ಮಾಹಿತಿ ತಿಳಿಯುತ್ತದೆ. ನಂಜನಗೂಡು ಪ್ರಕರಣಕ್ಕೆ ಸಂಬಂಧಿಸಿದ ಇನ್ನು ನೂರಾರು ಸ್ಯಾಂಪಲ್ ಪರೀಕ್ಷೆ ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.
ಮೈಸೂರಿನಲ್ಲಿ ಕ್ವಾರಂಟೈನ್ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರಕರಣಕ್ಕೆ ಗರಂ ಆದ ಡಿಸಿ ಅಭಿರಾಮ್ ಜಿ.ಶಂಕರ್, ""ನಾವೇನು ಪಿಕ್ ನಿಕ್ ಗಾಗಿ ಹೊರಗೆ ಓಡಾಡುತ್ತಿಲ್ಲ. ನಿಮ್ಮ ಪ್ರಾಣ ಉಳಿಸಲು ಹೊರಗೆ ಹೋರಾಡುತ್ತಿದ್ದೇವೆ'' ಎಂದರು.
1635 ಮಂದಿ 14 ದಿನಗಳ ಹೋಂ ಕ್ವಾರಂಟೈನ್
ಜನರು ಕ್ವಾರಂಟೈನ್ ಗೆ ವಿರೋಧ ಮಾಡುವುದಕ್ಕು ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಿಮಗಾಗಿ ನಾವು ಹೊರಗಿದ್ದು ಕೆಲಸ ಮಾಡುತ್ತಿದ್ದೀವಿ. ಅದನ್ನು ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮೈಸೂರು ಡಿಸಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಈವರೆಗೆ 2619 ಜನರ ಮೇಲೆ ನಿಗಾ ವಹಿಸಲಾಗಿದೆ. 1635 ಮಂದಿ 14 ದಿನಗಳ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಸೋಂಕು ದೃಢಪಟ್ಟಿರುವ 17 ಜನರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. 967 ಮಂದಿ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. 130 ಜನರ ಮಾದರಿ ಪರೀಕ್ಷೆಯಲ್ಲಿ 123 ಜನರ ಸ್ಯಾಂಪಲ್ ನೆಗೆಟಿವ್ ಬಂದಿದೆ.
ರೆಡ್ ಜೋನ್ ನಲ್ಲಿ ಮೈಸೂರು
ಇದುವರೆಗೆ 14 ಮಂದಿಯಲ್ಲಿ ಕಂಡುಬಂದಿದ್ದ ಕೊರೊನಾ ಬುಧವಾರ ಮತ್ತೆ ಐವರಲ್ಲಿ ಕಾಣಿಸಿಕೊಂಡಿರುವುದರಿಂದ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರೆಡ್ ಜೋನ್ ಎಂದು ಗುರುತಿಸಿದೆ. ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಹೀಗೆ ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.