ಲಾಕ್ಡೌನ್ ಎಫೆಕ್ಟ್: ನಂಜುಂಡೇಶ್ವರನ ಆದಾಯದಲ್ಲಿ ಶೇ.50 ರಷ್ಟು ಇಳಿಕೆ
ಮೈಸೂರು, ಜುಲೈ 17: ಮಹಾಮಾರಿ ಕೊರೊನಾ ಸೋಂಕು ಕಾರಣದಿಂದಾಗಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಇದೇ ವೇಳೆ ಯಾವುದೇ ದೇವಸ್ಥಾನಗಳಿಗೂ ಭಕ್ತರು ತೆರಳದಂತೆ ನಿರ್ಬಂಧ ವಿಧಿಸಲಾಗಿತ್ತು.
ಲಾಕ್ಡೌನ್ ಎಫೆಕ್ಟ್ನಿಂದಾಗಿ ನಂಜನಗೂಡು ನಂಜುಂಡೇಶ್ವರನ ಆದಾಯಕ್ಕೂ ಕತ್ತರಿ ಬಿದ್ದಿದೆ. ಕಳೆದ ಒಂದು ವಾರದಿಂದ ಕೊರೊನಾ ಅನ್ಲಾಕ್ ಆಗಿದ್ದು, ಈ ನಡುವೆ ನಂಜನಗೂಡು ದೇವಸ್ಥಾನದ ಹುಂಡಿ ಹಣ ಸಂಗ್ರಹದಲ್ಲಿ ಭಾರೀ ಇಳಿಕೆ ಕಂಡಿದೆ.
ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಸರಳ ಆಚರಣೆ; ಭಕ್ತರಿಗೆ ಪ್ರವೇಶ ನಿಷೇಧ
ಮೈಸೂರು ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ನಂಜನಗೂಡು ಯಾವಾಗಲೂ ಭಕ್ತರಿಂದ ಭರ್ತಿಯಾಗಿರುತ್ತದೆ. ಆದರೆ ಕೊರೊನಾ ಹೊಡೆತದ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡಿರುವ ಪರಿಣಾಮ ನಂಜುಂಡನ ಹುಂಡಿ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಹುಂಡಿ ಸಂಗ್ರಹದಲ್ಲಿ ಶೇ.50 ರಷ್ಟು ಇಳಿಕೆ ಕಂಡಿದೆ.
ಕೊರೊನಾ ಹಿನ್ನೆಲೆಯಲ್ಲಿ ನಂಜನಗೂಡು ನಂಜುಂಡೇಶ್ವರ ದೇವಾಲಯ ಎರಡು ತಿಂಗಳಿಗೂ ಅಧಿಕ ಕಾಲ ಬಂದ್ ಆಗಿತ್ತು. ಎರಡು ತಿಂಗಳ ಅವಧಿಯಲ್ಲಿ ಕೇವಲ 56 ಲಕ್ಷ 11 ಸಾವಿರದ 966 ರೂ. ಮಾತ್ರ ಸಂಗ್ರಹವಾಗಿದೆ. ಕಾಣಿಕೆ ಹುಂಡಿಯಲ್ಲಿ ಕಡಿಮೆ ಮೊತ್ತ ಸಂಗ್ರಹವಾಗಿದ್ದು, ಭಕ್ತರ ಪ್ರವೇಶಕ್ಕೆ ಸರ್ಕಾರ ಬ್ರೇಕ್ ಹಾಕಿದ್ದರಿಂದ ಹುಂಡಿ ಹಣ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಇನ್ನು ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದಲ್ಲಿ ನಿಷೇಧಿತ ನೋಟುಗಳು ಸಹ ಕಂಡುಬಂದಿವೆ. ಈ ಬಾರಿ 11,500 ರೂ. ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ. 51 ಗ್ರಾಂ ಚಿನ್ನ ಹಾಗೂ 1.5 ಕೆ.ಜಿ ಬೆಳ್ಳಿ ಸಂಗ್ರಹವಾಗಿದ್ದು, ಈ ಮಧ್ಯೆ 2 ವಿದೇಶಿ ಕರೆನ್ಸಿಗಳೂ ಸಹ ಸಂಗ್ರಹವಾಗಿದೆ.