ಮೈಸೂರು: ಜನಸ್ಪಂದನ ಕಾರ್ಯಕ್ರಮಕ್ಕೆ ಕಂದಾಯ ಸಚಿವರ ತಡೆ
ಮೈಸೂರು, ನವೆಂಬರ್ 30: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮಕ್ಕೆ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಅವರು ತಡೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸದ ಕುರಿತು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸೋಮವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್ ಅವರು, ""ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಎಂಬುದನ್ನು ತಿಳಿಸಿದ್ದೇನೆ'' ಎಂದರು.
ರೋಹಿಣಿ ಸಿಂಧೂರಿ ವಿರುದ್ಧ ಮತ್ತೋರ್ವ ಶಾಸಕ ಅಸಮಾಧಾನ
ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ
ಈಗ ಜನಸ್ಪಂದನ ಕಾರ್ಯಕ್ರಮ ನಿಲ್ಲಿಸಿದ್ದು, ಮುಂದಿನ ದಿನದಲ್ಲಿ "ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ' ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ವೇಳೆ ಜನರ ಅಹವಾಲುಗಳನ್ನು ಆಲಿಸಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮುನಿರತ್ನ, ಎಂಟಿಬಿ ನಾಗರಾಜ್, ಆರ್.ಶಂಕರ್ ಸೇರಿ ಹಲವರು ತ್ಯಾಗ ಮಾಡಿದ್ದಾರೆ. ಅದರಿಂದ ನಮ್ಮ ಸರ್ಕಾರ ಬಂದಿದೆ. ಅವರನ್ನು ಮಂತ್ರಿ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ನಾವೂ ಸಹ ಹೈಕಮಾಂಡ್ ನಿರ್ದೇಶನಕ್ಕೆ ಕಾಯುತ್ತಿದ್ದೇವೆ ಎಂದರು.
ಸಂತೋಷ ಅವರೇ ಹೇಳಬೇಕು
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ""ಡಿ.ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಉಪ ಚುನಾವಣೆ ನಂತರ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಸಂತೋಷ್ ಮರೆವಿನಿಂದ ನಿದ್ರೆ ಮಾತ್ರೆ ನುಂಗಿರಬಹುದು ಅಥವಾ ಯಾವ ಕಾರಣಕ್ಕೆ ನಿದ್ದೆ ಮಾತ್ರೆ ನುಂಗಿದರು, ಇದನ್ನು ಸಂತೋಷ ಅವರೇ ಹೇಳಬೇಕು. ಅವರೀಗ ಚೇತರಿಸಿಕೊಂಡಿದ್ದಾರೆ ಅವರ ಹೇಳಿಕೆ ನಂತರ ಎಲ್ಲವೂ ಗೊತ್ತಾಗಲಿದೆ'' ಎಂದು ಹೇಳಿದರು.
ಕೇಂದ್ರದ ಐವರು ನಾಯಕರನ್ನು ಭೇಟಿ ಮಾಡಿದ್ದೇನೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ರಾಜ್ಯದಲ್ಲಿ ಮಾತ್ರ ಗಿರಿಗಿಟ್ಲೆ ಹೊಡೆಯುತ್ತಿದೆ. ದೆಹಲಿ ನಾಯಕರ ಮುಂದೆ ನಾಯಕತ್ವ ಬದಲಾವಣೆ ವಿಚಾರ ಇಲ್ಲ. ಯಡಿಯೂರಪ್ಪ ಯಾವುದೇ ತಪ್ಪು ಮಾಡದೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಈ ಬಗ್ಗೆ ಕೇಂದ್ರದ ಐವರು ನಾಯಕರನ್ನು ಭೇಟಿ ಮಾಡಿದ್ದೇನೆ. ಅವರು ಈ ವಿಚಾರವನ್ನು ನಿರಾಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವಧಿಯಲ್ಲೇ ಒಕ್ಕಲಿಗರ ಪ್ರಾಧಿಕಾರ
ಒಕ್ಕಲಿಗರ ನಿಗಮ ಪ್ರಾಧಿಕಾರ ರಚನೆ ವಿಚಾರವಾಗಿ ಮಾತನಾಡಿ, ಇದು ಗಾಳಿಯಲ್ಲಿ ಹೊಡೆದ ಗುಂಡಲ್ಲ ನಿಜವಾದ ಗುಂಡು. ನಾನು ಈ ಬಗ್ಗೆ ಸಿಎಂ ಅವರ ಜೊತೆ ಚರ್ಚೆ ಮಾಡಿದ್ದೇನೆ. ಯಡಿಯೂರಪ್ಪ ಅವಧಿಯಲ್ಲೇ ಒಕ್ಕಲಿಗರ ಪ್ರಾಧಿಕಾರ ಆಗಲಿದೆ. ಈ ಸಂಬಂಧ ಸಮಾಜದ ಮುಖಂಡರು, ಸ್ವಾಮೀಜಿಗಳು, ಸಂಘ-ಸಂಸ್ಥೆಯವರು ನನ್ನ ಜೊತೆ ಮಾತನಾಡಿದ್ದಾರೆ. ಈ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.